ಬ್ಯಾಡಗಿ: ಯಾವುದೇ ವೃತ್ತಿಯಾಗಿರಲಿ ಒಂದಿಲ್ಲೊದು ಸ್ವಯಂ-ಉದ್ಯೋಗ ಆರಂಭಿಸಿ ಆರ್ಥಿಕ ಪ್ರಗತಿ ಸಾಧಿಸಬೇಕಾದ ಅನಿವಾರ್ಯತೆಯಲ್ಲಿ ನಾವಿದ್ದೇವೆ, ಅದರಲ್ಲೂ ಕುಟುಂಬ ನಿರ್ವಹಣೆ ಮಾಡುವ ಮಹಿಳೆಯರು ಸ್ವಯಂ-ಉದ್ಯೋಗದಲ್ಲಿ ತೊಡಗಿದಾಗ ಮಾತ್ರ ನೆಮ್ಮದಿ ಬದುಕನ್ನು ಕಾಣಲು ಸಾಧ್ಯವೆಂದು ಸಿಸ್ಟರ್ ಗ್ಲೋರಿಯಾ ತೆರೆಸಿಟಾ ಕರೆ ನೀಡಿದರು.
ತಾಲೂಕಿನ ಬನ್ನಿಹಟ್ಟಿ ಗ್ರಾಮದಲ್ಲಿ ಸ್ನೇಹಸದನ ಸಮಗ್ರ ಸಮಾಜ ಕಾರ್ಯ ನಿರ್ವಹಣಾ ಕೇಂದ್ರ ಆಯೋಜಿಸಿದ್ದ ಹೊಲಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.ವಿದ್ಯೆಯನ್ನು ಕೊಟ್ಟವರು ಉದ್ಯೋಗ ಕೊಡಬೇಕೆಂಬ ನಿಯಮಗಳಿಲ್ಲ, ಶಿಕ್ಷಣವಂತರನ್ನಾಗಿಸುವುದಷ್ಟೇ ಕುಟುಂಬದ ಜವಾಬ್ದಾರಿ. ಬಡಕುಟುಂಬದ ಹಿನ್ನೆಲೆಯಿಂದ ಬಂದಿರುವ ಮಹಿಳೆ ಮಾತ್ರ ಸ್ವಯಂ ಉದ್ಯೋಗದ ಬಗ್ಗೆ ಯೋಚಿಸುತ್ತಿದ್ದಾಳೆ, ಹೀಗಾಗಿ ಅದಕ್ಕೆ ಸಂಬಂಧಿಸಿದ ತರಬೇತಿ ನೀಡುವಲ್ಲಿ ಸಮಗ್ರ ಸಮಾಜ ಕಾರ್ಯ ನಿರ್ವಹಣಾ ಸಂಸ್ಥೆ ಕಾರ್ಯೋನ್ಮುಖವಾಗಿದೆ ಎಂದರು.
ಸಂಸ್ಥೆಯ ವತಿಯಿಂದ 90 ದಿನಗಳ ಕಾಲ ಹೊಲಿಗೆ ತರಬೇತಿ ಶಿಬಿರವನ್ನು ಆಯೋಜಿಸಿದ್ದು ಶಿಬಿರದಲ್ಲಿ ಪಾಲ್ಗೊಂಡವರಿಗೆ ಪ್ರಶಸ್ತಿಪತ್ರ ನೀಡಿ ಗೌರವಿಸಲಾಯಿತು. ಕರ್ಯಕ್ರಮದಲ್ಲಿ ಸಂಸ್ಥೆಯ ವ್ಯವಸ್ಥಾಪಕರಾದ ಸಿಸ್ಟರ್ ರೂಪಾ, ಸಿಸ್ಟರ್ ಅಚಲಾ ಹಾಗೂ ಹೊಲಿಗೆ ತರಬೇತಿ ಶಿಕ್ಷಕಿ ಗಂಗಾ ಸಾಲಿ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರರಿದ್ದರು.