ಗ್ರಾಮಗಳಲ್ಲಿ ಸ್ವಚ್ಛತೆ, ಕಸ ವಿಲೇವಾರಿಯಲ್ಲಿ ನಿರ್ಲಕ್ಷ್ಯ ಸಲ್ಲದು

KannadaprabhaNewsNetwork |  
Published : Dec 17, 2023, 01:46 AM IST
ಫೋಟೊ: ೧೬ಎಚ್‌ಎನ್‌ಎಲ್೨ | Kannada Prabha

ಸಾರಾಂಶ

ಗ್ರಾಮಗಳಲ್ಲಿ ಸ್ವಚ್ಛತೆ, ಕಸ ವಿಲೇವಾರಿ ವಿಷಯದಲ್ಲಿ ಹಲವು ಗ್ರಾಪಂಗಳು ನಿರ್ಲಕ್ಷ್ಯ ತೋರುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಕೂಡಲೇ ಸ್ವಚ್ಛತೆಗೆ ಆದ್ಯತೆ ನೀಡಲು ಶಾಸಕ ಶ್ರೀನಿವಾಸ ಮಾನೆ ಸೂಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹಾನಗಲ್ಲ

ಗ್ರಾಮಗಳಲ್ಲಿ ಸ್ವಚ್ಛತೆ, ಕಸ ವಿಲೇವಾರಿ ವಿಷಯದಲ್ಲಿ ಹಲವು ಗ್ರಾಪಂಗಳು ನಿರ್ಲಕ್ಷ್ಯ ತೋರುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಕೂಡಲೇ ಸ್ವಚ್ಛತೆಗೆ ಆದ್ಯತೆ ನೀಡಲು ಶಾಸಕ ಶ್ರೀನಿವಾಸ ಮಾನೆ ಸೂಚಿಸಿದ್ದಾರೆ.

ಹಾಗನಲ್ಲ ತಾಲೂಕಿನ ನರೇಗಲ್ಲ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ಗ್ರಾಮದ ಸ್ವಚ್ಛತೆಯ ವಿಷಯದಲ್ಲಿ ಗ್ರಾಪಂ ತೀರ ನಿರ್ಲಕ್ಷ್ಯ ತೋರಿದೆ. ಗಟಾರಗಳ ಸ್ವಚ್ಛತೆ ಇಲ್ಲದೇ ಅನಾರೋಗ್ಯಕ್ಕೆ ಕಾರಣವಾಗಿದೆ. ನರೇಗಲ್ ಗ್ರಾಮದ ಹಲವು ವಾರ್ಡುಗಳಲ್ಲಿ ಸ್ವಚ್ಛತೆಯ ಕೊರತೆಯ ಜತೆಗೆ ಕಸ ವಿಲೇವಾರಿ ಸರಿಯಾಗಿ ಮಾಡುತ್ತಿಲ್ಲ. ಇದರಿಂದ ದುರ್ವಾಸನೆ ಸಾಮಾನ್ಯವಾಗಿದ್ದು, ಮಹಿಳೆಯರು, ಮಕ್ಕಳು ಅನಾರೋಗ್ಯಕ್ಕೀಡಾಗುವ ಭೀತಿ ಉಂಟಾಗಿದೆ ಎಂದು ಗ್ರಾಮಸ್ಥರು ಶಾಸಕ ಮಾನೆ ಅವರ ಎದುರು ಅಳಲು ತೋಡಿಕೊಂಡರು. ಅವರು ಗ್ರಾಪಂ ಆಡಳಿತ ಮಂಡಳಿಯ ಗಮನಕ್ಕೆ ತಂದು ಸ್ವಚ್ಛತೆ ಕಾಪಾಡುವ ಭರವಸೆ ನೀಡಿದರು. ಇಡೀ ತಾಲೂಕಿನ ಎಲ್ಲ ಪಿಡಿಒ ಅವರಿಗೆ ಸೂಚಿಸುವ ಭರವಸೆ ನೀಡಿದರು.

ಗ್ರಾಮ, ಪಟ್ಟಣಗಳಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವ ಮನೋಭಾವನೆ ಬದಲಾಗಬೇಕಿದೆ. ತ್ಯಾಜ್ಯ ಸಂಗ್ರಹಿಸುವ ವಾಹನ ಮನೆ ಎದುರು ಬಂದಾಗ ತ್ಯಾಜ್ಯ ನೀಡಿದರೆ ಸುತ್ತಲಿನ ವಾತಾವರಣ ಶುಚಿಯಾಗಿರಲಿದೆ. ಸ್ವಚ್ಛತೆಗೆ ಕೇವಲ ಗ್ರಾಪಂ ಹೊಣೆ ಮಾಡದೆ ಎಲ್ಲರೂ ಜತೆಯಾಗಿ ಸ್ವಚ್ಛತೆಗೆ ಗಮನ ಕೊಡಬೇಕು ಎಂದು ಶ್ರೀನಿವಾಸ ಮಾನೆ ತಿಳಿಸಿದರು.

ಗೃಹಲಕ್ಷ್ಮೀ, ಅನ್ನಭಾಗ್ಯ ಯೋಜನೆಗಳಡಿ ಸಹಾಯಧನ ದೊರಕುತ್ತಿಲ್ಲ ಎನ್ನುವ ದೂರುಗಳಿಗೂ ಸ್ಪಂದಿಸಿದ ಶ್ರೀನಿವಾಸ ಮಾನೆ, ತಾಂತ್ರಿಕ ಕಾರಣಗಳಿಂದ ಕೆಲವು ಫಲಾನುಭವಿಗಳಿಗೆ ಗೃಹಲಕ್ಷ್ಮೀ ಯೋಜನೆಯ ಸಹಾಯ ದೊರಕುತ್ತಿಲ್ಲ. ಅದನ್ನು ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಗ್ರಾಪಂ ಅಧ್ಯಕ್ಷ ಬಾಷಾಸಾಬ್ ಗೌಂಡಿ, ಮುಖಂಡರಾದ ಮೆಹಬೂಬಅಲಿ ನೆಗಳೂರ, ಜಾಫರಸಾಬ್‌ ಮಾಸನಕಟ್ಟಿ, ಶಾಂತಪ್ಪ ಶೀಲವಂತರ, ಚಮನಸಾಬ್‌ ಪಠಾಣ, ಗುತ್ತೆಪ್ಪ ಹರಿಜನ, ಜಾಫರ್ ಮುಲ್ಲಾ, ಹುಸೇನಮಿಯಾ ಸವಣೂರ, ವೀರಭದ್ರಪ್ಪ ಅಗಡಿ, ಸಂಗಣ್ಣ ಶಿವಳ್ಳಿ ಈ ಸಂದರ್ಭದಲ್ಲಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ