ಲಕ್ಷ್ಮೇಶ್ವರ: ಇಲಾಖೆಯ ಅಧಿಕಾರಿಗಳು ತಾಲೂಕು ಮಟ್ಟದಲ್ಲಿ ನಡೆಯುವ ಯಾವುದೇ ಸಭೆಗಳಿಗೆ ಬರುವಾಗ ಅಧಿಕಾರಿಗಳು ಸರಿಯಾದ ಮಾಹಿತಿಯೊಡನೆ ಹಾಜರಾಗಿ, ಇಲ್ಲಿ ಬಂದ ಮೇಲೆ ಕಾರಣ ಹೇಳಬಾರದು, ನಿಷ್ಕಾಳಜಿ ವಹಿಸಿರುವ ಅಧಿಕಾರಿಗಳು ಮನೆಗೆ ಹೋಗಿ ಬಿಡಿ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ ಖಡಕ್ ಎಚ್ಚರಿಕೆ ನೀಡಿದರು.
ಎಸ್ಸಿಪಿ, ಟಿಎಸ್ಪಿ ಯೋಜನೆಯಡಿ ನಿರ್ದಿಷ್ಟ ಗುರಿಗಿಂತ ಹೆಚ್ಚಿನ ಸಾಧನೆ ಮಾಡಲು ಅವಕಾಶವಿದೆ. ಅನುದಾನ ಅದೇ ವರ್ಷ ಉಪಯೋಗಿಸದಿದ್ದಲ್ಲಿ ಮುಂದಿನ ಹಣಕಾಸು ವರ್ಷದ ಅನುದಾನ ಕಡಿತವಾಗುತ್ತದೆ. ಯೋಜನೆ ಶೀಘ್ರ, ಕಾಲಮಿತಿಯಲ್ಲಿ ಜಾರಿಗೊಳಿಸಬೇಕು ಎಂದು ಸೂಚಿಸಿದರು.
ವಿಶೇಷ ಘಟಕ ಗಿರಿಜನ ಉಪಯೋಜನೆ ಕಾಮಗಾರಿ ಮುಂದಿನ ಹಣಕಾಸು ವರ್ಷಕ್ಕೆ ವರ್ಗಾಯಿಸಬಾರದು.ನಿಗದಿಪಡಿಸಿದ ಅನುದಾನದಲ್ಲಿ ಅದೇ ಹಣಕಾಸು ವರ್ಷದಲ್ಲಿ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿದರು. ಎಸ್ಸಿ,ಎಸ್ ಟಿಯವರಿಗೆ ಸರಿಯಾಗಿ ಸರ್ಕಾರದ ಯೋಜನೆ ಮುಟ್ಟಿಸಿ,ನಕಲಿ ಕಾರ್ಮಿಕ ಕಾರ್ಡ್ ಬಗ್ಗೆ ಪರಿಶಿಷ್ಟ ಪಂಗಡ ಪರಿಶಿಷ್ಟ ಜಾತಿ ಅವರಿಗೆ ಜಾಗೃತಿ ಮೂಡಿಸುವ ಕೆಲಸ ಆಗಲಿ ಎಂದು ಹೇಳಿದರು.ತಹಸೀಲ್ದಾರ ವಾಸುದೇವ ಸ್ವಾಮಿ ಮಾತನಾಡಿ, ಆರೋಗ್ಯ, ಸಣ್ಣ ನೀರಾವರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಯಂಥ ಪ್ರಮುಖ ಇಲಾಖೆಗಳು ಹಣಕಾಸು ವರ್ಷದ ಆರಂಭದಲ್ಲೆ ತಮಗೆ ವಹಿಸಿದ ಯೋಜನೆಗಳ ಫಲಾನುಭವಿಗಳ ಆಯ್ಕೆ,ಯೋಜನೆ ಜಾರಿ ಕ್ರಮ ಅನುಸರಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗೋಪಾಲ ಲಮಾಣಿ, ಶಿರಹಟ್ಟಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನಿಂಗಪ್ಪ ಓಲೆಕಾರ, ಪುರಸಭೆ ಮುಖ್ಯಾಧಿಕಾರಿ ಮಹೇಶ್ ಹಡಪದ ಉಪಸ್ಥಿತರಿದ್ದರು. ಸಭೆಗೆ ಸಮಾಜ ಕಲ್ಯಾಣ ಇಲಾಖೆ,ಪಿ ಡಬ್ಲ್ಯೂ ಡಿ, ಪಂಚಾಯತರಾಜ, ಬಿಸಿಎಂ, ಶಿಶು ಅಭಿವೃದ್ಧಿ, ಅರಣ್ಯ, ಸಹಕಾರ, ಕಾರ್ಮಿಕ, ಅರೋಗ್ಯ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.