ಆಯುಧ ಪೂಜೆ ಹಬ್ಬದ ಹಿನ್ನೆಲೆಯಲ್ಲಿ ಮನೆಯ ಟ್ರ್ಯಾಕ್ಟರ್ ಸ್ವಚ್ಛಗೊಳಿಸಲು ನೀರಿನ ಕಟ್ಟೆಗೆ ಇಳಿದಿದ್ದ ವ್ಯಕ್ತಿಯೋರ್ವ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲೂಕಿನ ಸೊಪ್ಪಿನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ತುರುವೇಕೆರೆ
ಆಯುಧ ಪೂಜೆ ಹಬ್ಬದ ಹಿನ್ನೆಲೆಯಲ್ಲಿ ಮನೆಯ ಟ್ರ್ಯಾಕ್ಟರ್ ಸ್ವಚ್ಛಗೊಳಿಸಲು ನೀರಿನ ಕಟ್ಟೆಗೆ ಇಳಿದಿದ್ದ ವ್ಯಕ್ತಿಯೋರ್ವ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲೂಕಿನ ಸೊಪ್ಪಿನಹಳ್ಳಿ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಸೊಪ್ಪನಹಳ್ಳಿ ಗ್ರಾಮದ ನಿವಾಸಿ ಮಂಜುನಾಥ್ (48) ಮೃತ ದುರ್ದೈವಿ. ಈತ ಗುರುವಾರದಂದು ಆಯುಧ ಪೂಜೆಯ ನಿಮ್ಮಿತ್ತ ಮನೆಯ ಟ್ರ್ಯಾಕ್ಟರ್ನ್ನು ಊರಿನ ಕಟ್ಟೆಯಲ್ಲಿ ತೊಳೆಯಲು ಹೋಗಿದ್ದಾರೆ. ಆ ವೇಳೆ ಮಂಜುನಾಥ್ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾರೆ. ಅಕ್ಕಪಕ್ಕದ ರೈತರು ಕಂಡು ನೀರಿನೊಳಗೆ ಹುಡುಕಲು ಪ್ರಯತ್ನಿಸಿದ್ದಾರೆ. ಆದರೆ ಪ್ರಯತ್ನ ಫಲ ನೀಡದಿದ್ದರಿಂದ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ದಂಡಿನಶಿವರ ಪೊಲೀಸರು, ತಾಲೂಕು ಅಗ್ನಿಶಾಮಕ ಸಿಬ್ಬಂದಿಗಳಿಂದ ಶವ ಹುಡುಕಾಟ ನಡೆಸಿದ್ದಾರೆ. ಸಂಜೆಯಾದ್ದರಿಂದ ಮತ್ತು ಸುಮಾರು 30 ಅಡಿ ಆಳ ಇದ್ದರಿಂದ ಪತ್ತೆ ಕಾರ್ಯ ಸಾಧ್ಯವಾಗಲಿಲ್ಲ. ಶುಕ್ರವಾರ ಬೆಳಗ್ಗೆಯೂ ಅಗ್ನಿಶಾಮಕ ಸಿಬ್ಬಂದಿಗಳು ಬೋಟ್ ಸಹಾಯದಿಂದ ಸಂಜೆಯ ತನಕವೂ ಶವ ಶೋಧ ಕಾರ್ಯ ನಡೆಸಿದರೂ ಸಹ ಪ್ರಯೋಜನವಾಗಿರಲಿಲ್ಲ. ಶನಿವಾರ ಬೆಳಗ್ಗೆ ಇದ್ದಕ್ಕಿದ್ದಂತೆ ಶವ ನೀರಿನ ಮೇಲೆ ತೇಲತೊಡಗಿದ್ದರಿಂದ ಅಗ್ನಿಶಾಮಕ ಸಿಬ್ಬಂದಿಗಳ ಸಹಯದಿಂದ ಶವವನ್ನು ಹೊರ ತೆಗೆಯಲಾಯಿತು. ಮೃತ ಮಂಜುನಾಥ್ಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ.
ತಹಸೀಲ್ದಾರ್ ಎನ್.ಎ.ಕುಂಞ ಅಹಮದ್, ದಂಡಿನಶಿವರ ಪಿಎಸ್.ಐ ಕೆ.ವಿ.ಮೂರ್ತಿ, ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಶಶಿಧರ್, ತಾಲೂಕು ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಚನ್ನಾಚಾರಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.