ಕನ್ನಡಪ್ರಭ ವಾರ್ತೆ ಮಂಗಳೂರು
ಕರಾವಳಿಯಲ್ಲಿ ವಿಧಾನಸಭೆ, ಲೋಕಸಭೆ ಸೇರಿದಂತೆ ಕಳೆದ 2-3 ಚುನಾವಣೆಗಳಲ್ಲಿ ಹೊಸ ಮುಖಗಳಿಗೆ ಬಿಜೆಪಿ ಮಣೆ ಹಾಕುವ ಸಂಪ್ರದಾಯ ಈ ಉಪಚುನಾವಣೆಯಲ್ಲೂ ಮುಂದುವರಿದಿದೆ.
ಆರೆಸ್ಸೆಸ್ ಕಟ್ಟಾಳು ಕಿಶೋರ್ ಕುಮಾರ್:ಕಿಶೋರ್ ಕುಮಾರ್ ಪುತ್ತೂರು ಮೂಲತಃ ಆರೆಸ್ಸೆಸ್ ಕಟ್ಟಾಳು. ಪುತ್ತೂರಿನ ಸರ್ವೆ ಗ್ರಾಮದ ಬೊಟ್ಯಾಡಿಯವರು. 1979ರಲ್ಲಿ ಜನನ, ಎಂಎ ರಾಜ್ಯಶಾಸ್ತ್ರ ಪದವೀಧರರು. ಆರೆಸ್ಸೆಸ್ ಕಲ್ಪನೆ ಶಾಖೆಯ ಹೆಡ್ ಟ್ರೈನರ್ ಆಗಿದ್ದ ಅವರು, 1994ರಿಂದ 1998ರವರೆಗೆ ಪುತ್ತೂರಿನ ನರಿಮೊಗರು ಪ್ರದೇಶದ ಆರೆಸ್ಸೆಸ್ ಮಂಡಲ ಪ್ರವಾಸಿಯಾಗಿ ಕಾರ್ಯ ನಿರ್ವಹಿಸಿದ್ದರು. 2000ರಿಂದ 2004ರವರೆಗೆ ಎಬಿವಿಪಿ ತಾಲೂಕು ಪ್ರಮುಖ್ ಆಗಿ ವಿವಿಧ ವಿದ್ಯಾರ್ಥಿ ಚಳವಳಿಗಳನ್ನು ಸಂಘಟಿಸಿದ್ದರು.
ಈ ನಡುವೆ ಕಿಶೋರ್ ಕುಮಾರ್ ಅವರು ಸೌತ್ ಕೆನರಾ ಆರ್ಟಿಐ ಕಾರ್ಯಕರ್ತರ ಘಟಕದ ಜಿಲ್ಲಾಧ್ಯಕ್ಷರಾಗಿ, ಪುತ್ತೂರು ಸಾಹಿತ್ಯ ಸಂಗಮದ ಗೌರವಾಧ್ಯಕ್ಷರಾಗಿ, ದ.ಕ. ಜಿಲ್ಲಾ ಕಟ್ಟಡ ಸಾಮಗ್ರಿಗಳ ಪೂರೈಕೆದಾರರ ಸಂಘಟನೆ ಗೌರವಾಧ್ಯಕ್ಷರಾಗಿ, 2021ರಿಂದ 2023ರವರೆಗೆ ಮೆಸ್ಕಾಂನ ನಾಮನಿರ್ದೇಶಿತ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಜತೆಗೆ ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್ನ ವಿದ್ಯಾರ್ಥಿ ಕಲ್ಯಾಣಾಧಿಕಾರಿಯಾಗಿಯೂ ಆಗಿದ್ದರು.
ಕಿಶೋರ್ ಕುಮಾರ್ ಪುತ್ತೂರು ಅವರಿಗೆ ಟಿಕೆಟ್ ಘೋಷಣೆ ಮಾಡುವುದರೊಂದಿಗೆ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಅವರ ಪ್ರಯತ್ನ ಈ ಬಾರಿಯೂ ಕೈಗೂಡಿಲ್ಲ. ದ.ಕ. ಲೋಕಸಭೆ ಕ್ಷೇತ್ರದ ಇತಿಹಾಸದಲ್ಲೇ ದಾಖಲೆಯ ಮತ ಗಳಿಕೆ ಮಾಡಿದ ಹೆಗ್ಗಳಿಕೆ ಇದ್ದರೂ ಕಳೆದ ಲೋಕಸಭೆ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಈ ಉಪಚುನಾವಣೆಯಲ್ಲಾದರೂ ಟಿಕೆಟ್ ಸಿಗಲೇಬೇಕು ಎಂಬ ಶತಪ್ರಯತ್ನ ಮಾಡಿದ್ದರೂ ಈಗಲೂ ನಿರಾಸೆಯಾಗಿದೆ.
ನಳಿನ್ ಕುಮಾರ್ ಕಟೀಲು, ಪ್ರಮೋದ್ ಮಧ್ವರಾಜ್, ಸತೀಶ್ ಕುಂಪಲ, ಉದಯಕುಮಾರ್ ಶೆಟ್ಟಿ ಜತೆಯಲ್ಲಿ ಕಿಶೋರ್ ಕುಮಾರ್ ಹೆಸರು ಬಿಜೆಪಿಗೆ ಹೈಕಮಾಂಡ್ಗೆ ಹೋಗಿತ್ತು. ಈ ನಡುವೆ ಅರುಣ್ ಕುಮಾರ್ ಪುತ್ತಿಲ ಹೆಸರೂ ಕೇಳಿಬಂದಿದ್ದು, ಆರೋಪ ಬಂದ ಮೇಲೆ ಅವರ ಹೆಸರು ಹಿನ್ನೆಲೆಗೆ ಸರಿದಿತ್ತು. ಈಗ ಕಿಶೋರ್ ಕುಮಾರ್ ಅವರ ಆಯ್ಕೆ ಪಕ್ಷದ ಮುಖಂಡರನ್ನೇ ಅಚ್ಚರಿಗೆ ತಳ್ಳಿದೆ. ಅದರಲ್ಲೂ ಟಿಕೆಟ್ಗಾಗಿ ಪ್ರಯತ್ನ ನಡೆಸಿದವರಿಗೆ ತೀವ್ರ ನಿರಾಸೆಯಾಗಿದೆ.
ಕಿಶೋರ್ ಕುಮಾರ್ ಕರಾವಳಿಯ ಸಣ್ಣ ಸಮುದಾಯವಾದ ಸವಿತಾ ಸಮಾಜಕ್ಕೆ ಸೇರಿದವರು. ಅವರ ಆಯ್ಕೆ ಆರೆಸ್ಸೆಸ್ ಪ್ರಭಾವದ ಮೂಲಕ ನಡೆದಿದೆ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ. ಬಹುಸಂಖ್ಯಾತ ಬಂಟ, ಬಿಲ್ಲವ, ಮೊಗವೀರ ಸಮುದಾಯದ ಅಭ್ಯರ್ಥಿಗಳಿದ್ದರೂ, ಅವರನ್ನು ಕೈಬಿಟ್ಟು ಸಣ್ಣ ಒಬಿಸಿ ಸಮುದಾಯಕ್ಕೆ ಮಣೆ ಹಾಕಿರುವುದು ಮತ್ತೊಂದು ಅಚ್ಚರಿಯ ಸಂಗತಿ.
ಕಪ್ಪು ಚುಕ್ಕೆ ಇಲ್ಲದಂತೆ ಕೆಲಸ ನಿರ್ವಹಿಸುತ್ತೇನೆ: ಕಿಶೋರ್
3ರಂದು ನಾಮಪತ್ರ ಸಲ್ಲಿಕೆ
ಕಿಶೋರ್ ಕುಮಾರ್ ಅವರು ಅ.3ರಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಎರಡು ಜಿಲ್ಲೆಗಳ ಜಿಲ್ಲಾಧ್ಯಕ್ಷರು, ಎಲ್ಲ ಶಾಸಕರು, ಸಂಸದರು, ಹಿರಿಯ ಮುಖಂಡರು, ಕಾರ್ಯಕರ್ತರ ಜತೆಗೂಡಿ ನಾಮಪತ್ರ ಸಲ್ಲಿಸುವುದಾಗಿ ಕಿಶೋರ್ ಕುಮಾರ್ ತಿಳಿಸಿದ್ದಾರೆ.