ಹೊಸ ವರ್ಷಾಚರಣೆ: ಕಾಡು ಪ್ರಾಣಿಗಳಿಗೆ ಕಂಟಕ

KannadaprabhaNewsNetwork |  
Published : Dec 26, 2025, 01:00 AM IST
ಕಡೂರು ತಾಲೂಕಿನ ಬಾಸೂರು ಕೃಷ್ಣಮೃಗ ಸಂರಕ್ಷಿತ ಪ್ರದೇಶದಲ್ಲಿ ಗುಂಡೇಟಿನಿಂದ ಹತ್ಯೆಯಾಗಿರುವ ಕೃಷ್ಣಮೃಗ. | Kannada Prabha

ಸಾರಾಂಶ

ಹೊಸ ವರ್ಷಾಚರಣೆ ಕಾಡು ಪ್ರಾಣಿಗಳಿಗೆ ಕಂಟಕವಾಗುತ್ತಿದೆಯಾ ?ಈ ರೀತಿ ಪ್ರಶ್ನೆಯೊಂದು ಕಾಫಿ ನಾಡಿನಲ್ಲಿ ಹುಟ್ಟಿಕೊಂಡಿದೆ. ಕಾಡು ಪ್ರಾಣಿಗಳಿಗೂ ಹೊಸ ವರ್ಷಾಚರಣೆಗೂ ಏನು ಸಂಬಂಧ ವೆಂದು ಬಹಳಷ್ಟು ಮಂದಿ ಅಂದು ಕೊಳ್ಳಬಹುದು. ಹಿಂದಿನ ವರ್ಷಗಳಲ್ಲಿ ಹಾಗೂ ಕಳೆದ ಮೂರು ದಿನಗಳ ಹಿಂದೆ ಜಿಲ್ಲೆಯ ಕಡೂರು ತಾಲೂಕಿನ "ಬಾಸೂರು ಕೃಷ್ಣ ಮೃಗ ಸಂರಕ್ಷಿತ " ಪ್ರದೇಶಕ್ಕೆ ಹೊಂದಿಕೊಂಡಿರುವ ರಾಗಿ ಹೊಲದಲ್ಲಿ ಗುಂಡು ಹಾರಿಸಿ ಮೂರು (ಎರಡು ಹೆಣ್ಣು, ಒಂದು ಗಂಡು) ಕೃಷ್ಣಮೃಗಗಳನ್ನು ಹತ್ಯೆ ಮಾಡಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದರೆ ಕಾಡು ಪ್ರಾಣಿಗಳಿಗೆ ಕಂಟಕ ಎಂಬ ಪ್ರಶ್ನೆ ಸಹಜವಾಗಿ ಕಂಡು ಬರುತ್ತಿದೆ.

- ಕಾಡು ಪ್ರಾಣಿಗಳ ಮಾಂಸ ಪ್ರಿಯರಿಗೋಸ್ಕರ ಕಳ್ಳ ಬೇಟೆ । ಸಂಶಯಕ್ಕೆ ಎಡೆ ಮಾಡುತ್ತಿರುವ ಪ್ರಕರಣಗಳು

ಆರ್‌.ತಾರಾನಾಥ್‌

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಹೊಸ ವರ್ಷಾಚರಣೆ ಕಾಡು ಪ್ರಾಣಿಗಳಿಗೆ ಕಂಟಕವಾಗುತ್ತಿದೆಯಾ ?

ಈ ರೀತಿ ಪ್ರಶ್ನೆಯೊಂದು ಕಾಫಿ ನಾಡಿನಲ್ಲಿ ಹುಟ್ಟಿಕೊಂಡಿದೆ. ಕಾಡು ಪ್ರಾಣಿಗಳಿಗೂ ಹೊಸ ವರ್ಷಾಚರಣೆಗೂ ಏನು ಸಂಬಂಧ ವೆಂದು ಬಹಳಷ್ಟು ಮಂದಿ ಅಂದು ಕೊಳ್ಳಬಹುದು. ಹಿಂದಿನ ವರ್ಷಗಳಲ್ಲಿ ಹಾಗೂ ಕಳೆದ ಮೂರು ದಿನಗಳ ಹಿಂದೆ ಜಿಲ್ಲೆಯ ಕಡೂರು ತಾಲೂಕಿನ "ಬಾಸೂರು ಕೃಷ್ಣ ಮೃಗ ಸಂರಕ್ಷಿತ " ಪ್ರದೇಶಕ್ಕೆ ಹೊಂದಿಕೊಂಡಿರುವ ರಾಗಿ ಹೊಲದಲ್ಲಿ ಗುಂಡು ಹಾರಿಸಿ ಮೂರು (ಎರಡು ಹೆಣ್ಣು, ಒಂದು ಗಂಡು) ಕೃಷ್ಣಮೃಗಗಳನ್ನು ಹತ್ಯೆ ಮಾಡಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದರೆ ಕಾಡು ಪ್ರಾಣಿಗಳಿಗೆ ಕಂಟಕ ಎಂಬ ಪ್ರಶ್ನೆ ಸಹಜವಾಗಿ ಕಂಡು ಬರುತ್ತಿದೆ.

2017ರ ಡಿಸೆಂಬರ್‌ ಕೊನೆಯಲ್ಲಿ ಕೆಮ್ಮಣ್ಣಗುಂಡಿ ಸಮೀಪದಲ್ಲಿ ಎರಡು ಕಡವೆಗಳನ್ನು ಮಾಂಸಕ್ಕಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣ ಕೆಲವು ಪ್ರಭಾವಿ ರಾಜಕಾರಣಿಗಳ ಸಂಬಂಧಿಕರಿಗೆ ತಳುಕು ಹಾಕಿತ್ತು. ಹೊಸ ವರ್ಷಾಚರಣೆ ಸಂದರ್ಭದಲ್ಲಿ ನಡೆದಿರುವ ಪ್ರಕರಣ ಇದಾಗಿತ್ತು.

ಇದೀಗ ಕ್ರಿಸ್‌ಮಸ್‌ ರಜೆ ಆರಂಭಗೊಂಡಿದೆ. ವರ್ಷದ ಕೊನೆ ಹಾಗೂ ಹೊಸ ವರ್ಷಾಚರಣೆಗೆ ಕಾಫಿ ನಾಡಿಗೆ ರಾಜ್ಯದ ವಿವಿಧೆಡೆ ಯಿಂದ ಪ್ರವಾಸಿಗರು ಆಗಮಿಸಲಿದ್ದಾರೆ. ಇವರಲ್ಲಿ ಹಲವು ಮಂದಿ ಮೋಜು ಮಸ್ತಿ ಮಾಡಲು ಬರುವವರೇ ಹೆಚ್ಚು. ಹೀಗೆ ಬಂದಿರುವವರಿಗೆ ಹಂದಿ, ಜಿಂಕೆ, ಕಡವೆ, ಸಾರಂಗ ಸೇರಿದಂತೆ ಇತರೆ ಮಾಂಸಗಳ ಊಟದ ಆಸೆ ತೋರಿಸಿ ವಾಸ್ತವ್ಯಕ್ಕೆ ಆಹ್ವಾನಿಸುವವರು ಜಿಲ್ಲೆಯಲ್ಲಿ ಇದ್ದಾರೆ. ಅವರಿಗೆ ಕಾಡು ಪ್ರಾಣಿಗಳ ಮಾಂಸ ಸರಬರಾಜು ಮಾಡಲು ಕಾಡು ಪ್ರಾಣಿಗಳ ಭೇಟೆಯಾಡುವವರು ವರ್ಷದ ಕೊನೆ ಹಾಗೂ ಆರಂಭ ದಿನಗಳಲ್ಲಿ ಸಕ್ರಿಯರಾಗುತ್ತಾರೆ. ನಾಡ ಬಂದೂಕು: ಜಿಲ್ಲೆಯಲ್ಲಿ ಸುಮಾರು 10 ರಿಂದ 11 ಸಾವಿರ ಲೈಸನ್ಸ್‌ ಬಂದೂಕುಗಳು ಇವೆ. ಇವುಗಳ ಜತೆಗೆ ಅಕ್ರಮ ಬಂದೂಕುಗಳು ಸಹ ಮಲೆನಾಡಿನ ಜನರ ಕೈಯಲ್ಲಿ ಓಡಾಡುತ್ತಿವೆ. ಇವುಗಳನ್ನು ಕಾಡಿನಲ್ಲಿ ಮಾಂಸಕ್ಕಾಗಿ ಕಾಡು ಪ್ರಾಣಿಗಳ ಭೇಟೆಗೆ ಬಳಸುತ್ತಿರುವುದು ಹಲವು ಪ್ರಕರಣಗಳಲ್ಲಿ ಕಂಡು ಬಂದಿದೆ.

ರಾತ್ರಿ ವೇಳೆ ಕಾಡು ಪ್ರಾಣಿಗಳ ಭೇಟೆಗೆ ಹೋಗುವಾಗ ಲೈಸನ್ಸ್‌ ಬಂದೂಕು ತೆಗೆದುಕೊಂಡು ಹೋಗಿದ್ದೆಯಾದಲ್ಲಿ ಆಕಸ್ಮಿಕವಾಗಿ ಅದು ಕೈ ತಪ್ಪಿ ಕಾಡಿನಲ್ಲಿಯೇ ಬಿಟ್ಟು ಬಂದರೆ ಅದರ ಆಧಾರದ ಮೇಲೆ ತನಿಖೆ ನಡೆಸಿದರೆ ಸುಲಭವಾಗಿ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಲೈಸನ್ಸ್‌ ಹೊಂದಿರದ ನಾಡ ಬಂದೂಕು ಶಿಕಾರಿಗೆ ಬಳಸಿಕೊಳ್ಳುತ್ತಿದ್ದಾರೆ.ಮೊದಲ ಪ್ರಕರಣ: ಕಡೂರು ತಾಲೂಕಿನ "ಬಾಸೂರು ಕೃಷ್ಣ ಮೃಗ ಸಂರಕ್ಷಿತ " ಪ್ರದೇಶದ ಒಟ್ಟು ವಿಸ್ತೀರ್ಣ 1800 ಎಕರೆ, ಇದು, ಸಂರಕ್ಷಿತ ಪ್ರದೇಶವೆಂದು ಘೋಷಣೆಯಾಗಿದ್ದು 2012 ರಲ್ಲಿ. ಈ ಪ್ರದೇಶದಲ್ಲಿ ಉಷ್ಣ ವಲಯದಲ್ಲಿ ಜೀವಿಸುವ ತೋಳ, ನರಿ, ಕಾಡು ಬೆಕ್ಕು, ಚಿರತೆ, ಜಿಂಕೆ, ಕೃಷ್ಣ ಮೃಗ, ಹಂದಿ ಹಾಗೂ ವಿವಿಧ ಜಾತಿಯ ಹಕ್ಕಿಗಳು ಕೂಡ ಇವೆ.

ಬಾಸೂರು ಕೃಷ್ಣ ಮೃಗ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಹಿರೇನಲ್ಲೂರು ಗಸ್ತಿನ ಕಲ್ಲೇನಹಳ್ಳಿ ಗ್ರಾಮದ ಸರ್ವೆ ನಂ.11ರಲ್ಲಿ ಕಳೆದ 15 ದಿನಗಳ ಹಿಂದೆ ಕಟಾವು ಮಾಡಿದ ರಾಗಿ ಹೊಲದಲ್ಲಿ ಒಂದೂವರೆಯಿಂದ ಎರಡು ವರ್ಷ ಪ್ರಾಯದ ಮೂರು ಕೃಷ್ಣ ಮೃಗಗಳನ್ನು ಬೇಟೆಗಾರರು ಗುಂಡು ಹಾರಿಸಿ ಸೋಮವಾರ ಹತ್ಯೆ ಮಾಡಿದ್ದಾರೆ. ಸುಮಾರು ಒಂದು ಎಕರೆ ಸುತ್ತಳತೆಯಲ್ಲಿ ಎರಡು ಹೆಣ್ಣು, ಒಂದು ಗಂಡು ಕೃಷ್ಣಮೃಗಗಳನ್ನು ಹತ್ಯೆ ಮಾಡಲಾಗಿದೆ.

ರಾಣಿಬೆನ್ನೂರು, ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಜಯಮಂಗಲಿ, ಕೊಪ್ಪಳ, ಗದಗ, ಚಾಮರಾಜನಗರ, ಚಿತ್ರದುರ್ಗ ಜಿಲ್ಲೆಯಲ್ಲಿ ಕೃಷ್ಣಮೃಗಗಳ ತಾಣಗಳು ಇವೆ. ಅಳಿವಿನ ಅಂಚಿನಲ್ಲಿರುವ ಈ ಸಂತತಿ ಚಿಕ್ಕಮಗಳೂರು ಜಿಲ್ಲೆ ಬಾಸೂರು ಕೃಷ್ಣ ಮೃಗ ಸಂರಕ್ಷಿತ ಪ್ರದೇಶದಲ್ಲಿರುವುದು ಜಿಲ್ಲೆಯ ಹೆಮ್ಮೆಯ ಸಂಗತಿ. ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕಾಡು ಪ್ರಾಣಿಗಳನ್ನು ಹತ್ಯೆ ಮಾಡುವವರ ಮೇಲೆ ಅರಣ್ಯ ಇಲಾಖೆ ನಿಗಾ ಇಡಬೇಕೆಂದು ಪರಿಸರಾಸಕ್ತರು ಆಗ್ರಹಿಸಿದ್ದಾರೆ. 25 ಕೆಸಿಕೆಎಂ 1ಕಡೂರು ತಾಲೂಕಿನ ಬಾಸೂರು ಕೃಷ್ಣಮೃಗ ಸಂರಕ್ಷಿತ ಪ್ರದೇಶದಲ್ಲಿ ಗುಂಡೇಟಿನಿಂದ ಹತ್ಯೆಯಾಗಿರುವ ಕೃಷ್ಣಮೃಗ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಟಲ್ ಬಿಹಾರಿ ವಾಜಪೇಯಿ ಮೌಲ್ಯಾಧಾರಿತ ರಾಜಕಾರಣಿ
ಮಾಗಡಿಯಲ್ಲಿ ಪತ್ರಕರ್ತರ ಭವನಕ್ಕೆ ಭೂಮಿಪೂಜೆ