ಕನ್ನಡಪ್ರಭ ವಾರ್ತೆ ಜಮಖಂಡಿ
ಹರಿಹರ ಪಂಚಮಸಲಿ ಪೀಠದ ಅಧ್ಯಕ್ಷ, ಶ್ವಾಸಯೋಗ ಸಂಸ್ಥೆಯ ವಚನಾನಂದ ಸ್ವಾಮೀಜಿ ನೇತೃತ್ವದಲ್ಲಿ ವೇದಘೋಷಗಳೊಂದಿಗೆ ಶಾಸ್ತ್ರೋಕ್ತವಾಗಿ ಮುರುಗೇಶ ನಿರಾಣಿಯವರಿಗೆ ಪುಣ್ಯಸ್ನಾನದ ಸಂಕಲ್ಪ ಮಾಡಿಸಿ ಕೃಷ್ಣಾ ನದಿಯಲ್ಲಿ ಹಾಲು, ಮೊಸರು, ತುಪ್ಪ, ಜೇನುತುಪ್ಪ ಅಭಿಷೇಕ ಸ್ನಾನ ಮಾಡಿಸಲಾಯಿತು. ನಂತರ ಸಾಲಂಕೃತ ಮಂಟಪದಲ್ಲಿ ಭಸ್ಮ, ಅರಿಶಿನ, ಕುಂಕುಮ, ಗಂಧಸ್ನಾನ ಮಾಡಿಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತಾಧಿಗಳು ನಾಗಾಸಾಧುಗಳ ದರ್ಶನ ಪಡೆದರು.
ನಾಗಾ ಸಾಧುಗಳ ಭವ್ಯ ಮೆರವಣಿಗೆ : ತಾಲೂಕಿನ ಹಿಪ್ಪರಗಿ ಗ್ರಾಮದ ಪ್ರವೇಶದ್ವಾರದಿಂದ ನಾಗಾ ಸಾಧುಗಳನ್ನು ರಥಗಳಲ್ಲಿ ಕಳ್ಳರಿಸಿ, ದೇವರ ಪಲ್ಲಕ್ಕಿಗಳು, 108 ಕುಂಭಹೊತ್ತ ಮಹಿಳೆಯರು, ಡೊಳ್ಳು, ಕರಡಿ ಮಜಲು, ಶಹನಾಯಿ, ಕೊಂಬು ಮುಂತಾದ ಮಂಗಳ ವಾದ್ಯಗಳ ಸಮೇತ ಸಂಗಮೇಶ್ವರ ಮಹಾರಾಜರ ಮಠದವರೆಗೆ ಮೆರವಣಿಗೆ ಮೂಲಕ ಕರೆ ತರಲಾಯಿತು. ರಸ್ತೆಯುದ್ದಕ್ಕೂ ಇಕ್ಕೆಲಗಳಲ್ಲಿ ಅಭಿಮಾನಿಗಳು, ಭಕ್ತರು ಪುಷ್ಪವೃಷ್ಟಿಗೈದರು. ಮಾಜಿ ಸಚಿವ ಮುರುಗೇಶ ನಿರಾಣಿ ಅವರು ಮೆರವಣಿಗೆಯ ನೇತೃತ್ವ ವಹಿಸಿ ತೆರೆದ ವಾಹನದಲ್ಲಿ ಅಭಿಮಾನಿಗಳತ್ತ ಕೈ ಬೀಸುತ್ತ ಮುಂದೆ ಸಾಗಿದರು.ವಿಶೇಷ ಪೂಜೆ : ಮಾಜಿ ಸಚಿವ ಮುರುಗೇಶ ನಿರಾಣಿ ಅವರ ಷಷ್ಟಿಪೂರ್ತಿ ನಿಮಿತ್ತ ಸಂಗಮೇಶ್ವರ ದೇವಸ್ಥಾನ ಸೇರಿದಂತೆ ಗ್ರಾಮದ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ನಿರ್ಮಾಲ್ಯ ವಿಸರ್ಜನ, ಅಭಿಷೇಕ, ಅಲಂಕಾರ, ಮಂಗಳಾರತಿ ಸೇರಿದಂತೆ ವಿಶೇಷ ಪೂಜಾಕೈಂಕರ್ಯಗಳು ನಡೆದವು. ಸಹೋದರರಾದ ಲಕ್ಮಣ ನಿರಾಣಿ, ಸಂಗಮೇಶ ನಿರಾಣಿ, ಹಣಮಂತ ನಿರಾಣಿ ಸಹಕುಟುಂಬ ಪರಿವಾರ ಸಮೇತರಾಗಿ ಪೂಜೆ ಹಾಗೂ ಪುಣ್ಯನ್ನಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
25ಕ್ಕೂ ಅಧಿಕ ನಾಗಾ ಸಾಧುಗಳು: ದೇವಗಿರಿ ಬಾಬಾ ನೇತೃತ್ವದಲ್ಲಿ ಸುಮಾರು 25ಕ್ಕೂ ಹೆಚ್ಚು ನಾಗಾ ಸಾಧುಗಳು, ವಿವಿಧ ಗ್ರಾಮಗಳಿಂದ ಆಗಮಿಸಿದ ಸಾಧು, ಸಂತರು ಕೃಷ್ಣಾ ಪುಣ್ಯಸ್ನಾನದಲ್ಲಿ ಭಾಗವಹಿಸಿ ನಿರಾಣಿ ಪರಿವಾರ ಹಾಗೂ ಭಕ್ತ ಸಮೂಹಕ್ಕೆ ಆಶೀರ್ವದಿಸಿದರು.ಈ ಸಂದರ್ಭದಲ್ಲಿ ವೆಂಕಟೇಶ ಜಂಬಗಿ, ಪ್ರಭು ಜನವಾಡ ಎಂ.ಆರ್.ಎನ್ ಫೌಂಡೇಶನ್ ಪದಾಧಿಕಾರಿಗಳು ಹಾಗೂ ಸಿಬ್ಬಂದಿ, ರೈತ ಮುಖಂಡರಾದ ಪಿ.ಎನ್. ಪಾಟೀಲ, ಪಿ.ಆರ್. ಪಾಲಭಾವಿ, ಸೋಮನಾಥಗೌಡ ಪಾಟೀಲ. ಚಂದ್ರಶೇಖರ ಆದಬಸಪ್ಪಗೋಳ, ಶಂಕರಗೌಡ ಪಾಟೀಲ, ಭಿಮಪ್ಪ ಹನಗಂಡಿ, ಗುಳಪ್ಪ ಶಿವಪೂಜಿ ಇತರರು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು. ಪೊಲೀಸ್ ಸಿಬ್ಬಂದಿ ಹಾಗೂ ನಿರಾಣಿ ಸಕ್ಕರೆ ಕಾರ್ಖಾನೆಯ ಸೆಕ್ಯೂರಿಟಿ ಗಾರ್ಡ್ಗಳು ಬಂದೋಬಸ್ತ್ ಏರ್ಪಡಿಸಿದ್ದರು.