ರಟ್ಟೀಹಳ್ಳಿ: ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ನಿವೇದಿತ ಶೋಧ ಚಕ್ರ ವಾಹನ ವಿಜ್ಞಾನದ ವಿಷಯದ ಪ್ರಯೋಗಗಳ ಮೂಲಕ ಸಂಚರಿಸುತ್ತಿದೆ ಎಂದು ನಿವೇದಿತ ಶೋಧ ಚಕ್ರ ರಾಜ್ಯ ಸಂಚಾಲಕ ಗಜೇಂದ್ರ ಕೆ.ಎಸ್. ಅಭಿಪ್ರಾಯ ವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ವಿಜ್ಞಾನ ಹಾಗೂ ಗಣಿತ ವಿಷಯಗಳೆಂದರೆ ನುಂಗಲಾರದ ತುತ್ತೆಂದು ಭಾವಿಸಿ ಕಲಿಕೆಯಲ್ಲಿ ಹಿಂದೆ ಉಳಿಯುತ್ತಿರುವುದು ಮನಗಂಡು ಯುವ ಬ್ರಿಗೇಡ್ ವತಿಯಿಂದ ನಿವೇದಿತ ಶೋಧ ಚಕ್ರ ವಾಹನ ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ರಾಜ್ಯಾದ್ಯಂತ ಈಗಾಗಲೇ 5000ಕ್ಕೂ ಹೆಚ್ಚು ಕಿಲೋ ಮೀಟರ್ ಕ್ರಮಿಸಿ ಸುಮಾರು 350ಕ್ಕೂ ಹೆಚ್ಚು ಶಾಲೆಗಳಿಗೆ ಭೇಟಿ ನೀಡಿ ವಿಜ್ಞಾನ ಹಾಗೂ ಗಣಿತ ವಿಷಯದಲ್ಲಿ 150ಕ್ಕೂ ಹೆಚ್ಚು ಪ್ರಯೋಗಗಳನ್ನು ಮಾಡಿ ವಿಧ್ಯಾರ್ಥಿಗಳಿಗೆ ಸುಲಭವಾಗಿ ಮನನ ಮಾಡಿಕೊಳ್ಳಲು ಅನುಕೂಲವಾಗಿದೆ. ಇದರಿಂದ ವಿದ್ಯಾರ್ಥಿಗಳು ಹೆಚ್ಚು ಕುತೂಹಲದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿ ಇದರ ಸದಪಯೋಗ ಪಡೆದುಕೊಂಡಿದ್ದಾರೆಂದು ಸಂತಸ ವ್ಯಕ್ತ ಪಡಿಸಿದರು.
ರಾಣಿಬೆನ್ನೂರ 70 ಸರಕಾರಿ ಶಾಲೆಗೆ ಭೇಟಿ ನೀಡಲಾಗಿದ್ದು, ರಟ್ಟೀಹಳ್ಳಿ ತಾಲೂಕಿನಲ್ಲಿ 20 ಶಾಲೆಗಳಿಗೆ ಭೇಟಿ ನೀಡಿ ಪ್ರಯೋಗಗಳನ್ನು ಸುಲಭ ರೀತಿಯಲ್ಲಿ ವಿವರಿಸಲಾಗಿದೆ. ಮುಂದಿನ ಕೆಲವು ದಿನಗಳಲ್ಲಿ ತಾಲೂಕಿನ ಎಲ್ಲ ಸರಕಾರಿ ಶಾಲೆಗಳಿಗೆ ಭೇಟಿ ನೀಡಲಾಗುವುದು ಎಂದರು.ನಿವೇದಿತ ಶೋಧ ಚಕ್ರದ ಮೂಲಕ ಎಲೆಕ್ಟ್ರೋ ಮೆಗ್ನೇಟ್, ಆಮ್ಲ ಮತ್ತು ಪ್ರತ್ಯಾಮ್ಲ, ವಾಟರ ರಾಕೆಟ್, ಬೆಳಕಿನ ವಿದ್ಯಮಾನ ಹಾಗೂ ಪ್ರತಿಫಲನ ಹೀಗೆ 150ಕ್ಕೂ ಹೆಚ್ಚು ಸುಲಭ ರೀತಿಯಲ್ಲಿ ಪ್ರಯೋಗಗಳ ಮೂಲಕ ಮಕ್ಕಳ ಬುದ್ಧಿ ಮಟ್ಟಕ್ಕೆ ತಲುಪುವ ಉದ್ದೇಶ ಹೊಂದಲಾಗಿದೆ ಎಂದರು.
ಕುಮಾರೇಶ್ವರ ವಿದ್ಯಾಸಂಸ್ಥೆಯ ಪ್ರಾಚಾರ್ಯ ಎಸ್.ಪಿ. ಬೆನಕನಕೊಂಡ, ಬಾಲಿಕಾ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಎಂ. ಕುಬೇರಪ್ಪ, ಲಿಂಗರಾಜ ಮೂಲಿಮನಿ, ಪಿ.ಡಿ. ಪಾಟೀಲ್, ರಾಘವೇಂದ್ರ ಕುಲಕರ್ಣಿ, ಕರಿಯಣ್ಣನವರ, ಚೇತನ ಅಂಗರಟ್ಟಿ, ವಿಜಯಲಕ್ಷ್ಮೀ ಬಳ್ಳಾರಿ, ಸುಮಾ ಕುಲಕರ್ಣಿ, ಕುಸುಮಾ ಮೇಗಳಮನಿ, ತ್ಯಾಗರಾಜ ಯಲಿವಾಳ, ಎಚ್.ವಿ. ಪ್ರಕಾಶ, ನದಾಫ್, ರವಿ ಬೆಳಕೆರಿ, ನಾಗರಾಜ ಓಲೇಕಾರ, ಜಗದೀಶ, ಶರಣು ನ್ಯಾಮತಿ, ಕುಮಾರಸ್ವಾಮಿ ಗೌಡರ, ಮನೋಜ್ ಹುಲ್ಮನಿ ಮುಂತಾದವರು ಇದ್ದರು.