ಕದರಪ್ಪನಹಟ್ಟಿಗೆ ಏಳು ದಶಕಗಳಿಂದ ಸೌಲಭ್ಯಗಳೇ ಕಲ್ಪಿಸಿಲ್ಲ!

KannadaprabhaNewsNetwork |  
Published : May 17, 2024, 12:36 AM IST
16ಕೆಡಿವಿಜಿ1, 2-ದಾವಣಗೆರೆ ತಾ. ಗುಡಾಳ್ ಗ್ರಾಪಂ ಪಿಡಿಓಗೆ ಕದಿರಪ್ಪನಹಳ್ಳಿಗೆ ಶುದ್ಧ ನೀರು ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವಂತೆ ಎಐಕೆಕೆಎಂಎಸ್ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿರುವುದು. | Kannada Prabha

ಸಾರಾಂಶ

ಕಳೆದ 7 ದಶಕದಿಂದಲೂ ಮೂಲಸೌಕರ್ಯ ವಂಚಿತವಾದ ತಾಲೂಕಿನ ಗುಡಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕದರಪ್ಪನಹಟ್ಟಿ ಗ್ರಾಮಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವ ಜೊತೆಗೆ ಗ್ರಾಮಸ್ಥರ ಸಮಸ್ಯೆ ಪರಿಹರಿಸಲು ಒತ್ತಾಯಿಸಿ ಎಐಕೆಕೆಎಂಎಸ್ ಜಿಲ್ಲಾ ಮುಖಂಡರಾದ ಮಧು ತೊಗಲೇರಿ, ನಾಗಸ್ಮಿತಾ ನೇತೃತ್ವದಲ್ಲಿ ಗ್ರಾಮಸ್ಥರು ಗ್ರಾಪಂ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದ್ದಾರೆ.

- ಎಐಕೆಕೆಎಂಎಸ್ ಮುಖಂಡ ಮಧು ತೊಗಲೇರಿ ಆರೋಪ । ಗುಡಾಳ್‌ ಗ್ರಾಪಂ ಕಚೇರಿ ಎದುರು ಪ್ರತಿಭಟನೆ- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಕಳೆದ 7 ದಶಕದಿಂದಲೂ ಮೂಲಸೌಕರ್ಯ ವಂಚಿತವಾದ ತಾಲೂಕಿನ ಗುಡಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕದರಪ್ಪನಹಟ್ಟಿ ಗ್ರಾಮಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವ ಜೊತೆಗೆ ಗ್ರಾಮಸ್ಥರ ಸಮಸ್ಯೆ ಪರಿಹರಿಸಲು ಒತ್ತಾಯಿಸಿ ಎಐಕೆಕೆಎಂಎಸ್ ಜಿಲ್ಲಾ ಮುಖಂಡರಾದ ಮಧು ತೊಗಲೇರಿ, ನಾಗಸ್ಮಿತಾ ನೇತೃತ್ವದಲ್ಲಿ ಗ್ರಾಮಸ್ಥರು ಗ್ರಾಪಂ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಮಧು ತೊಗಲೇರಿ ಮಾತನಾಡಿ, ಕದರಪ್ಪನಹಳ್ಳಿ ಗ್ರಾಮ 7 ದಶಕದಿಂದ ಮೂಲಸೌಕರ್ಯ ವಂಚಿತವಾಗಿದೆ. ಆಳುವ ಸರ್ಕಾರಗಳು, ಅಧಿಕಾರಿಗಳು, ಜನಪ್ರತಿನಿಧಿಗಳಲ್ಲಿ ಜನಪರ ಕಾಳಜಿ ಎಷ್ಟಿದೆ ಎಂಬುದಕ್ಕೆ ಈ ಗ್ರಾಮ ಸಾಕ್ಷಿ. ಇಡೀ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣಿಸುತ್ತಿದೆ. ಕುಡಿಯುವ ನೀರಿನ ಘಟಕ ಹಾಳಾಗಿ ಎಷ್ಟೋ ದಿನ ಕಳೆದಿದೆ. ಆದರೂ, ಯಾವೊಬ್ಬ ಅಧಿಕಾರಿ, ಜನಪ್ರತಿನಿಧಿಗಳು ಸಹ ಅದನ್ನು ಸರಿಪಡಿಸಲು ಮುಂದಾಗಿಲ್ಲ ಎಂದರು.

ಬರಗಾಲದಿಂದ ಇಡೀ ರಾಜ್ಯವೇ ತತ್ತರಿಸಿದೆ. ಗ್ರಾಮದಲ್ಲಿ ಸಮಸ್ಯೆಗಳೂ ಉಲ್ಭಣಿಸುತ್ತಿವೆ. ಇದೇ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಕನಿಷ್ಠ ಶೌಚಾಲಯ ವ್ಯವಸ್ಥೆಯೂ ಇಲ್ಲ. ಮಕ್ಕಳು ಶೌಚಕ್ಕಾಗಿ ಬಯಲಿಗೆ ಹೋಗುವ ಸ್ಥಿತಿ ಇದೆ. ಹೆಣ್ಣುಮಕ್ಕಳು ಬಯಲಿಗೆ ಹೋಗಲು ಹಿಂಜರಿಯುತ್ತಿದ್ದು, ಇದು ಶಿಕ್ಷಣ ಇಲಾಖೆಯಷ್ಟೇ ಅಲ್ಲ, ಸರ್ಕಾರವೇ ತಲೆತಗ್ಗಿಸುವ ಸಂಗತಿ. ಒಂದು ಶಾಲೆಗೆ ತರಗತಿ ಕೊಠಡಿಗಳು ಎಷ್ಟು ಮುಖ್ಯವೋ, ಶೌಚಾಲಯವೂ ಅಷ್ಟೇ ಮುಖ್ಯ. ಈ ಕನಿಷ್ಠ ಅರಿವು, ಜ್ಞಾನ ಇಲಾಖೆಗಳ ಅಧಿಕಾರಿಗಳಿಗೆ ಇಲ್ಲವೇ ಎಂದು ಪ್ರಶ್ನಿಸಿದರು.

ಕದರಪ್ಪನಹಟ್ಟಿ ಗ್ರಾಮಕ್ಕೆ ಹೊಂದಿಕೊಂಡಿರುವ ಕೆರೆಯಲ್ಲಿ ಹೂಳು ತುಂಬಿ ಶತಮಾನಗಳೇ ಕಳೆದಿವೆ. ಇಂದಿಗೂ ಕೆರೆ ಹೂಳೆತ್ತುವ, ಅಭಿವೃದ್ಧಿಪಡಿಸುವ ಕೆಲಸಗಳನ್ನು ಗ್ರಾಪಂ ಮಾಡಿಲ್ಲ. ಹೂಳೆತ್ತಿದರೆ ಕೆರೆಯಲ್ಲಿ ನೀರು ಸಂಗ್ರಹವಾಗಿ, ಅಂತರ್ಜಲ ವೃದ್ಧಿಯಾಗುವ ಮೂಲಕ ಗ್ರಾಮದ ಜನ, ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆಯಾದರೂ ಕಡಿಮೆ ಆಗುತ್ತದೆ. ತಕ್ಷಣ‍ವೇ ಗ್ರಾಮದ ನೀರಿನ ಘಟಕ ದುರಸ್ತಿಪಡಿಸಿ, ಜನರಿಗೆ ನೀರೊದಗಿಸಬೇಕು. ಘಟಕ ದುರಸ್ತಿಪಡಿಸುವವರೆಗೆ ಟ್ಯಾಂಕರ್ ಮೂಲಕ ಕುಡಿಯುವ ನೀರೊದಗಿಸುವ ಕೆಲಸ ಗ್ರಾಪಂ ಮಾಡಬೇಕು ಎಂದು ತಾಕೀತು ಮಾಡಿದರು.

ಸಂಘಟನೆ ಮುಖಂಡರಾದ ನಾಗಸ್ಮಿತ ಮಾತನಾಡಿ, ಕದರಪ್ಪನಹಳ್ಳಿ ಶಾಲೆಗೆ ತಕ್ಷಣ ಶೌಚಾಲಯ ಕಟ್ಟಿಕೊಡಬೇಕು. ಗ್ರಾಮ ರಸ್ತೆ ಅಗಲೀಕರಣ ಮಾಡಿ, ಮಳೆನೀರು ಸರಾಗವಾಗಿ ಹರಿದುಹೋಗುವಂತೆ ಚರಂಡಿ, ಒಳಚರಂಡಿ ನಿರ್ಮಿಸಬೇಕು. ಜಾನುವಾರುಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆಗೆ ಲಭ್ಯವಾಗುವಂತೆ ಪಶುವೈದ್ಯರು, ಸಿಬ್ಬಂದಿ ಒದಗಿಸಬೇಕು. ಈ ಬೇಡಿಕೆಗಳನ್ನು ಪ್ರಥಮಾದ್ಯತೆ ಮೇಲೆ ಈಡೇರಿಸಲು ಸ್ಪಂದಿಸದಿದ್ದರೆ ಉಗ್ರ ಹೋರಾಟ ನಿಶ್ಚಿತ ಎಂದು ಎಚ್ಚರಿಸಿದರು.

ಗುಡಾಳ್‌ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮೂಲಕ ದಾವಣಗೆರೆ ತಾಲೂಕು ಪಂಚಾಯಿತಿ ಇಒ ಹಾಗೂ ಜಿಪಂ ಸಿಇಒ ಅವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಗ್ರಾಪಂ ಪಿಡಿಒ ಅವರು, ತಕ್ಷಣವೇ ಗ್ರಾಮದ ನೀರಿನ ಸಮಸ್ಯೆ ಪರಿಹರಿಸಲು ನಿತ್ಯವೂ 4 ಟ್ಯಾಂಕರ್ ಮೂಲಕ ನೀರೊದಗಿಸುವ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ಮಂಜುನಾಥ ರೆಡ್ಡಿ, ಬಸವರಾಜಪ್ಪ ನೀರ್ಥಡಿ, ಹುಣಸೇಕಟ್ಟೆ ರುದ್ರಪ್ಪ, ಸುರೇಶ ಕದಿರಪ್ಪನಹಟ್ಟಿ, ವೆಂಕಟೇಶ, ನಾಗರಾಜ, ತಿಪ್ಪೇಶ ನೀರ್ಥಡಿ, ಗುಡಾಳ ರಾಜಪ್ಪ ಸೇರಿದಂತೆ ಗ್ರಾಮದ ಹಿರಿಯರು, ಮಹಿಳೆಯರು, ವಿದ್ಯಾರ್ಥಿಗಳು, ಯುವಜನರು ಇದ್ದರು.

- - - -16ಕೆಡಿವಿಜಿ1, 2:

ಗುಡಾಳ್ ಗ್ರಾಪಂನ ಕದಿರಪ್ಪನಹಳ್ಳಿಗೆ ಶುದ್ಧ ನೀರು ಸೇರಿದಂತೆ ಮೂಲ ಸೌಕರ್ಯಗಳನ್ನು ಶೀಘ್ರ ಕಲ್ಪಿಸುವಂತೆ ಒತ್ತಾಯಿಸಿ ಎಐಕೆಕೆಎಂಎಸ್ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎರಡು ಪೋಲಿಯೊ ಹನಿ ಮಕ್ಕಳಿಗೆ ಜೀವಾಮೃತ: ಶಾಸಕ ಪ್ರಸಾದ್ ಅಬ್ಬಯ್ಯ
₹22267 ಕೋಟಿ ವೆಚ್ಚದಲ್ಲಿ 16.75 ಕಿ.ಮೀ ಸುರಂಗ ರಸ್ತೆ ನಿರ್ಮಿಸಲು ಅದಾನಿ ಗ್ರೂಪ್ ಬಿಡ್‌ ಸಲ್ಲಿಕೆ