ಕನ್ನಡಪ್ರಭ ವಾರ್ತೆ ಭಾರತೀನಗರ ಪಟಾಕಿ, ತಮಟೆ, ನಗಾರಿ, ಹಾರ-ತುರಾಯಿಗಳು ನನಗೆ ಬೇಕಿಲ್ಲ. ಪ್ರೀತಿ ವಿಶ್ವಾಸದಿಂದ ಗ್ರಾಮಕ್ಕೆ ಬರಮಾಡಿಕೊಂಡರೆ ಸಾಕು ಎಂದು ಶಾಸಕ ಮಧು ಜಿ. ಮಾದೇಗೌಡ ಹೇಳಿದರು.
ನನ್ನ ತಂದೆ ಜಿ. ಮಾದೇಗೌಡರು ಸಹ ಸರಳ ಸಜ್ಜನಿಕೆಯಿಂದ ರಾಜಕಾರಣ ಮಾಡಿದ್ದಾರೆ. ಹಾಗಾಗಿ ನಾನು ಸಹ ಅವರ ಹಾದಿಯಲ್ಲೇ ನಡೆಯುತ್ತಿದ್ದೇನೆ. ಕ್ಷೇತ್ರದಲ್ಲಿ ಇಂದು ಸಹ ಜಿ. ಮಾದೇಗೌಡರ ಕಾಂಗ್ರೆಸ್ ಜೀವಂತವಾಗಿ ಉಳಿದಿದೆ. ಇದಕ್ಕೆ ಉದಾಹರಣೆ ಕ್ಷೇತ್ರದ ಜನರು ತೋರಿಸುತ್ತಿರುವ ಪ್ರೀತಿಯೇ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಕ್ಷೇತ್ರದಲ್ಲಿ ಜಿ. ಮಾದೇಗೌಡರ ಕಾಂಗ್ರೆಸ್ ಮತ್ತೆ ಒಗ್ಗಟ್ಟಾಗಬೇಕು ಎಂಬುವುದು ಕೆಲ ಕಾರ್ಯಕರ್ತರ ಒತ್ತಾಯವಾಗಿದೆ. ಪ್ರತೀ ಗ್ರಾಮಕ್ಕೂ ಕಾರ್ಯಕರ್ತರು ನಮ್ಮನ್ನು ಆಹ್ವಾನಿಸುತ್ತಿರುವುದು ನನಗೆ ಸಂತಸ ತರುತ್ತಿದೆ ಎಂದು ಹೇಳಿದರು.ಜಿ.ಮಾದೇಗೌಡರು ಸಾಮಾಜಿಕ ಕಳಕಳಿಯಿಂದ ಪ್ರಾಮಾಣಿಕವಾಗಿ ನಿಮ್ಮ ಪರ ನಿಂತಿದ್ದರು. ಅದರಂತೆ ನನಗೆ ರಾಜಕೀಯ ಶಕ್ತಿ ನೀಡಿದ್ದೀರಿ. ನೀವು ಸಹ ಗ್ರಾಮದ ಅಭಿವೃದ್ದಿಯನ್ನು ಮಾಡಿಸಿಕೊಳ್ಳಿ. ನಿಮ್ಮ ಜೊತೆ ಸದಾ ನಾನು ಇರುತ್ತೇನೆ. ನನಗೆ ನೀವು ಸಹ ನನ್ನ ಮನಸ್ಥಿತಿಯನ್ನು ಅರ್ಥಮಾಡಿಕೊಂಡು ನನಗೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.
ಈ ವೇಳೆ ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಲಿಂಗೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಕೆ.ಎಸ್.ದಯಾನಂದ್, ಮಾಜಿ ಸದಸ್ಯ ಕರೀಗೌಡ, ಜಯರಾಜು, ಮುಖಂಡರಾದ ಜಗದೀಶ್, ರಾಜೇಂದ್ರಸ್ವಾಮಿ, ದೇವಿಪ್ರಸಾದ್, ಕೆ.ಎಸ್. ನಂಜಪ್ಪ, ಪಾಪೇಗೌಡ, ಲೋಕೇಶ್, ನಂಜುಂಡಸ್ವಾಮಿ, ಈ. ರಾಮಣ್ಣ, ಸೋಮಣ್ಣ, ಶ್ರೀಧರ್, ಚೇತನ್ ಸೇರಿದಂತೆ ಹಲವರಿದ್ದರು.