ರೈಲ್ವೆ ಹುದ್ದೆ ಬಡ್ತಿ ಪರೀಕ್ಷೆಯಲ್ಲೂ ಕನ್ನಡವಿಲ್ಲ

KannadaprabhaNewsNetwork |  
Published : Jul 02, 2024, 01:40 AM ISTUpdated : Jul 02, 2024, 06:25 AM IST
PAPER | Kannada Prabha

ಸಾರಾಂಶ

ನೈಋತ್ಯ ರೈಲ್ವೆಯಿಂದ ನಡೆಸಲಾಗುತ್ತಿರುವ ಸೀಮಿತ ವಿಭಾಗೀಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು (ಎಲ್‌ಡಿಸಿಇ) ಕೇವಲ ಹಿಂದಿ, ಇಂಗ್ಲಿಷ್‌ನಲ್ಲಿ ಬರೆಯುವ ಆಯ್ಕೆ ನೀಡುತ್ತಿರುವುದರಿಂದ ಕನ್ನಡಿಗರಿಗೆ ಉನ್ನತ ಹುದ್ದೆ, ಬಡ್ತಿ ಕೈತಪ್ಪುವಂತಾಗಿದೆ.

ಮಯೂರ್‌ ಹೆಗಡೆ

 ಬೆಂಗಳೂರು/ :  ನೈಋತ್ಯ ರೈಲ್ವೆಯಿಂದ ನಡೆಸಲಾಗುತ್ತಿರುವ ಸೀಮಿತ ವಿಭಾಗೀಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು (ಎಲ್‌ಡಿಸಿಇ) ಕೇವಲ ಹಿಂದಿ, ಇಂಗ್ಲಿಷ್‌ನಲ್ಲಿ ಬರೆಯುವ ಆಯ್ಕೆ ನೀಡುತ್ತಿರುವುದರಿಂದ ಕನ್ನಡಿಗರಿಗೆ ಉನ್ನತ ಹುದ್ದೆ, ಬಡ್ತಿ ಕೈತಪ್ಪುವಂತಾಗಿದೆ.

ಒಂದೆಡೆ ಕನ್ನಡಪರ ಸಂಘಟನೆಗಳು ಕರ್ನಾಟಕದ ನೆಲದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಿ ಎಂದು ಹೋರಾಡುತ್ತಿವೆ. ಇನ್ನೊಂದೆಡೆ ರಾಜ್ಯದ ರೈಲ್ವೆಯಲ್ಲಿ ಮೇಲ್ಮಟ್ಟದ ಹುದ್ದೆಗಳು ಕನ್ನಡಿಗರಿಂದ ದೂರವಾಗಿ ಉತ್ತರ ಭಾರತೀಯರ ಪಾಲಾಗುತ್ತಿವೆ.

ನೈಋತ್ಯ ರೈಲ್ವೆ ಬೆಂಗಳೂರು ವಿಭಾಗೀಯ ಎಲೆಕ್ಟ್ರಿಕಲ್‌ ಸೆಕ್ಷನ್‌ನಿಂದ ಬಡ್ತಿ ಮೀಸಲಿಗೆ 11 ಕಿರಿಯ ಎಂಜಿನಿಯರ್‌ ಹುದ್ದೆಗಳಿಗೆ ಕಳೆದ ತಿಂಗಳು ಪರೀಕ್ಷೆಗೆ ಅಧಿಸೂಚನೆ ಪ್ರಕಟವಾಗಿದೆ. ಕಳೆದ ವರ್ಷ ಮೈಸೂರು ವಿಭಾಗದಲ್ಲಿ 167 ಸಹಾಯಕ ಲೋಕೋಪೈಲಟ್‌ ಹುದ್ದೆಗಳಿಗಾಗಿ ಸೀಮಿತ ವಿಭಾಗೀಯ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗಿತ್ತು. ಈ ಪರೀಕ್ಷೆಗಳನ್ನು ಬರೆಯಲು ಕೇವಲ ಹಿಂದಿ, ಇಂಗ್ಲಿಷ್‌ ಆಯ್ಕೆ ಮಾತ್ರ ನೀಡಲಾಗುತ್ತಿದೆ. ಕನ್ನಡದಲ್ಲಿ ಪರೀಕ್ಷೆ ಬರೆಯುವ ಅವಕಾಶವಿಲ್ಲ. ಹೀಗಾಗಿ ಕನ್ನಡಿಗ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ.

ಹಿಂದಿವಾಲಾಗಳಿಗೆ ಅನುಕೂಲ:

ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಮಾತನಾಡಿ, ಕೆಳಹಂತದ ಹುದ್ದೆಗಳಲ್ಲಿರುವ ಉತ್ತರ ಭಾರತೀಯ ಹಿಂದಿ ಭಾಷಿಕರಿಗೆ ಇಂಗ್ಲಿಷ್‌ ಜ್ಞಾನ ಅಷ್ಟಕ್ಕಷ್ಟೇ ಇರುತ್ತದೆ. ಆದರೆ, ಅಂತಹವರು ಹಿಂದಿ ಪರೀಕ್ಷೆಯ ಅನುಕೂಲ ಪಡೆದು ಪಾಸಾಗಿ ಸಲೀಸಾಗಿ ಮೇಲಿನ ಹುದ್ದೆಗಳಿಗೆ ಬಡ್ತಿ ಪಡೆಯುತ್ತಿದ್ದಾರೆ. ಆದರೆ, ಇಂಗ್ಲಿಷ್‌ ಸಮಸ್ಯೆ ಇರುವ ಕನ್ನಡಿಗರಿಗೆ ಈ ಅವಕಾಶವಿಲ್ಲ. ಕನ್ನಡ ಭಾಷಿಕ ನೌಕರರಿಗೆ ತಮ್ಮ ಮಾತೃಭಾಷೆಯಲ್ಲಿ ಪರೀಕ್ಷೆ ಬರೆಯುವ ಈ ಆಯ್ಕೆ ಇಲ್ಲದೆ ಮೇಲಿನ ಹುದ್ದೆಗೆ ಹೋಗುವ ಆಸೆ ಕಮರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಪರೀಕ್ಷೆಗಳಲ್ಲಿ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿಗೆ ಮೀಸಲು ಇರುತ್ತದೆ. ಕನ್ನಡದ ಆಯ್ಕೆ ನೀಡಿದಲ್ಲಿ ಸ್ಥಳೀಯರಿಗೂ ಪರೀಕ್ಷೆ ಬರೆಯಲು ಅನುಕೂಲವಾಗುತ್ತದೆ. ಈ ರೀತಿಯ ಪರೀಕ್ಷೆಗಳು ಬಹು ಆಯ್ಕೆ ಉತ್ತರ ಮಾದರಿಯಲ್ಲಿ ಕಂಪ್ಯೂಟರ್‌ ಆಧಾರಿತವಾಗಿ ನಡೆಯುತ್ತವೆ. ಹಿಂದಿ, ಇಂಗ್ಲಿಷ್‌ ಮಾತ್ರ ಆಯ್ಕೆ ಇರುವುದರಿಂದ ಕನ್ನಡಿಗರು ಪರೀಕ್ಷೆ ಬರೆದರೂ ಅನುತ್ತೀರ್ಣರಾಗಿ ಮೇಲಿನ ಹುದ್ದೆಗಳಿಗೆ ಏರಲು ಸಾಧ್ಯವಾಗುತ್ತಿಲ್ಲ ಎಂದರು. 

ಕಾನೂನು ಏನು ಹೇಳುತ್ತದೆ?:

ರೈಲ್ವೆ ಮಂಡಳಿಯು 2019ರ ಡಿ.19ರಂದು ಹೊರಡಿಸಿರುವ ಸುತ್ತೋಲೆ ಪ್ರಕಾರ 31ರ (ಎಂಸಿ.31) ಪ್ರಕಾರ ಭಾರತೀಯ ರೈಲ್ವೆಯಲ್ಲಿ ಗ್ರೂಪ್‌ ಸಿ (ನಾನ್‌ ಗೆಜೆಟೆಡ್‌) ನೌಕರರನ್ನು ಮುಂಬಡ್ತಿಗೆ ಆಯ್ಕೆ ಮಾಡುವಾಗ ಇಂಗ್ಲಿಷ್‌ ಜೊತೆಗೆ ಪ್ರಾದೇಶಿಕ ಭಾಷೆ ಅಂದರೆ ರಾಜ್ಯದ ಅಧಿಕೃತ ಭಾಷೆಯನ್ನು ಆಯ್ಕೆ ಮಾಡಬೇಕು ಎಂದಿದೆ. ಆದರೆ, ನೈಋತ್ಯ ರೈಲ್ವೆ ವಲಯದಲ್ಲಿ ನಡೆಸಲಾಗುತ್ತಿರುವ ಸೀಮಿತ ವಿಭಾಗೀಯ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇದು ಪಾಲನೆಯಾಗುತ್ತಿಲ್ಲ ಎಂದು ಆರೋಪಿಸಲಾಗುತ್ತಿದೆ.

ಈ ಹಿಂದೆ ನೈಋತ್ಯ ರೈಲ್ವೆ ಬೆಂಗಳೂರು ವಿಭಾಗದಿಂದ ಕರೆಯಲಾಗಿದ್ದ ಸೀಮಿತ ವಿಭಾಗೀಯ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಹೀಗೆ ಆಗಿದೆ. ಆಗ ನೌಕರರು, ಕನ್ನಡಪರ ಸಂಘಟನೆಗಳು ಧ್ವನಿ ಎತ್ತಿದರೂ ಪರಿಸ್ಥಿತಿ ಮಾತ್ರ ಬದಲಾಗಿಲ್ಲ ಎಂಬ ಬೇಸರ ನೌಕರ ವಲಯದಲ್ಲಿದೆ.

ಕನ್ನಡ ಕಡ್ಡಾಯಗೊಳಿಸಿ:

ಮುಂದಿನ 6-8 ತಿಂಗಳಿನಲ್ಲಿ ಭಾರತೀಯ ರೈಲ್ವೆ 18,799 ಸಹಾಯಕ ಲೋಕೋ ಪೈಲಟ್‌ಗಳ ನೇಮಕಾತಿ ಮಾಡಿಕೊಳ್ಳಲಿದೆ. ಕರ್ನಾಟಕದ ಬಹುತೇಕ ಜಿಲ್ಲೆಗಳು ನೈಋತ್ಯ ರೈಲ್ವೆ ವಲಯದ ವ್ಯಾಪ್ತಿಗೆ ಒಳಪಡುತ್ತವೆ. ಮೊದಲು ನೈಋತ್ಯ ವಲಯಕ್ಕೆ 473 ಹುದ್ದೆಗಳನ್ನು ಹಂಚಿಕೆ ಮಾಡಲಾಗಿತ್ತು. ಆದರೆ ಈಗ ಪರಿಷ್ಕೃತ ಆದೇಶದಂತೆ 1,576 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಈ ಹಂತದಲ್ಲಿ ಸಾಮಾನ್ಯ ವಿಭಾಗೀಯ ಪರೀಕ್ಷೆ (ಕನ್ನಡ ಆಯ್ಕೆ ಇರುತ್ತದೆ) ಜೊತೆಗೆ ಇಲಾಖೆಯೊಳಗೆ ಬಡ್ತಿ ಮೀಸಲು ಹುದ್ದೆಗಾಗಿ ಸೀಮಿತ ವಿಭಾಗೀಯ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯುತ್ತವೆ. ಈ ವೇಳೆ ಕಡ್ಡಾಯವಾಗಿ ಕನ್ನಡದಲ್ಲಿ ಪರೀಕ್ಷೆ ಬರೆಯುವ ಆಯ್ಕೆ ನೀಡಬೇಕು ಎಂಬ ಒತ್ತಾಯ ಹೆಚ್ಚಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಚೇರಿಯಲ್ಲೇ ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಆತ್ಮ*ತ್ಯೆ
ಡಿಜಿ ಅರೆಸ್ಟ್‌ನಿಂದ ₹15 ಕೋಟಿ ಕಳೆದುಕೊಂಡ ವೃದ್ಧ ಉದ್ಯಮಿ!