ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಯಾರಿಂದಲೂ 370 ವಾಪಸ್‌ ತರಲು ಸಾಧ್ಯವಿಲ್ಲ: ಜೋಶಿ

KannadaprabhaNewsNetwork | Published : May 5, 2024 2:01 AM

ರಾಹುಲ್ ಗಾಂಧಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆರ್ಟಿಕಲ್ 370 ವಾಪಸ್ ತರುತ್ತೇವೆ ಎಂದೇ ಘೋಷಿಸುತ್ತಿದ್ದಾರೆ. ಆದರೆ ಅದು ಯಾರಿಂದಲೂ ಸಾಧ್ಯವಿಲ್ಲ.

ಹುಬ್ಬಳ್ಳಿ:

ಜಮ್ಮು ಕಾಶ್ಮೀರದಲ್ಲಿ ರಾಹುಲ್ ಬಾಬಾ ಅಲ್ಲ. ಅವರ ತಾತ, ಮುತ್ತಾತ ಬಂದರೂ ಆರ್ಟಿಕಲ್ 370 ವಾಪಸ್ ತರಲು ಆಗಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ನಗರದಲ್ಲಿ ಬಿಜೆಪಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ರಾಹುಲ್ ಗಾಂಧಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆರ್ಟಿಕಲ್ 370 ವಾಪಸ್ ತರುತ್ತೇವೆ ಎಂದೇ ಘೋಷಿಸುತ್ತಿದ್ದಾರೆ. ಆದರೆ ಅದು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು. ಕಾಂಗ್ರೆಸ್ ಪಕ್ಷ, ಇಂಡಿಕೂಟ ತನ್ನ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸುವ ಧೈರ್ಯ ತೋರಲಿ ಮೊದಲು ಎಂದು ಜೋಶಿ ಸವಾಲೆಸೆದರು.ರಾಹುಲ್ ಬಾಬಾ ಮೇಲೆ ಇಂಡಿ ಕೂಟದ ಯಾರಿಗೂ ನಂಬಿಕೆಯಿಲ್ಲ. ಸ್ವತಃ ಕಾಂಗ್ರೆಸ್ಸಿಗರಿಗೇ ವಿಶ್ವಾಸವಿಲ್ಲ. ಇಂಡಿ ಕೂಟದ ಸ್ಥಿತಿ ಇಂದು ದಿಲ್ಲಿ ಮೇ ದೋಸ್ತಿ- ಕೋಲ್ಕತ್ತಾ ಮೇ ಕುಸ್ತಿ ಎನ್ನುವಂತಿದೆ ಎಂದು ಜೋಶಿ ಲೇವಡಿ ಮಾಡಿದರು.

ಸಿಎಂ ಸಿದ್ದರಾಮಯ್ಯ ಅಕ್ಕ-ಪಕ್ಕದಲ್ಲಿ ಇರುವವರು ಹಿಂದೂ ಧರ್ಮವನ್ನು ಸಂಪೂರ್ಣ ನಿರ್ನಾಮ ಮಾಡುತ್ತೇವೆಂದು ಹೇಳಿದ್ದಾರೆ. ಸಿದ್ದರಾಮಯ್ಯ ಅವರ ರೂಪದಲ್ಲೇ ಇದ್ದಾರೆ ಹಿಂದೂ ವಿರೋಧಿಗಳು ಎಂದು ಆರೋಪಿಸಿದರು.

ನವಲಗುಂದದಲ್ಲಿ ಸಮಾವೇಶ:

ನವಲಗುಂದ ಕ್ಷೇತ್ರದ ಕಿರೇಸೂರು, ಕುಸುಗಲ್‌, ಹೆಬಸೂರಲ್ಲಿ ಮತಯಾಚಿಸಿದ ಜೋಶಿ, ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಗ್ಯಾರಂಟಿ ಎಂದು ತನ್ನ ಬೆನ್ನು ತಾನೇ ತಟ್ಟಿಕೊಳ್ಳುತ್ತಿದೆ. ಕಾಂಗ್ರೆಸ್‌ ಗ್ಯಾರಂಟಿಗಳ ವಾಸ್ತವವೇ ಬೇರೆ, ಒಂದನ್ನು ಫ್ರೀ ಕೊಡುತ್ತಿದ್ದರೆ ಮತ್ತೊಂದರಲ್ಲಿ ಅದರ ಹತ್ತರಷ್ಟು ಜನರಿಂದ ಪೀಕುತ್ತಿದೆ. ರಾಜ್ಯದಲ್ಲಿ ಇನ್ನೂ ಶೇ. 50ರಷ್ಟು ಜನಕ್ಕೂ ಗ್ಯಾರಂಟಿ ತಲುಪಿಲ್ಲ. ಇಲ್ಲಸಲ್ಲದ ನಿಯಮ, ನೆಪ ಹೇಳಿ ಬಚಾವಾಗಲು ನೋಡುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರತಿಯೊಬ್ಬ ವ್ಯಕ್ತಿಯಿಂದ ₹ 10000 ಕಿತ್ತುಕೊಂಡು ₹ 2000 ನೀಡುತ್ತಿದೆ. ಈಗ ಕಾಂಗ್ರೆಸ್ ಹೊಸದಾಗಿ ₹ 1 ಲಕ್ಷ ಕೊಡುವ ಘೋಷಣೆ ಮಾಡಿದ್ದು, ಇದಂತೂ ಜನರನ್ನು ಮರುಳು ಮಾಡುವ ಪಕ್ಕಾ ಪೊಳ್ಳು ಗ್ಯಾರಂಟಿ ಎಂದು ಹೇಳಿದರು.

ನಮಗೆ ಗ್ಯಾಸ್ ರಷ್ಯಾ, ಇರಾನ್, ಇರಾಕ್‌ ನಿಂದ ಬರುತ್ತಿದ್ದು, ಅಲ್ಲಿನ ಯುದ್ಧದ ಸಂದರ್ಭದಲ್ಲೂ ನಾವು ₹ 600ರಿಂದ ₹ 900ಗೆ ಕೊಟ್ಟಿದ್ದೇವೆ. ಆದರೆ, ಯುಪಿಎ ಸರ್ಕಾರ ಯಾವುದೇ ಯುದ್ಧ ಇಲ್ಲದಾಗ್ಯೂ ₹ 1250ಗೆ ಹೆಚ್ಚಿಸಿತ್ತು. ರಾಜ್ಯದಲ್ಲಿ ಈಗಲೂ ಅದೇ ದರ ಮುಂದುವರಿದಿದೆ ಎಂದರು.

ಹತ್ತು ಕೆಜಿ ಅಕ್ಕಿ ಬೇಕಾ.. ಬೇಡ್ವಾ..? ಅಂತಾರೆ ಸಿಎಂ ಸಿದ್ದರಾಮಯ್ಯ. ಆದರೆ, ಕೇಂದ್ರದ ಮೋದಿ ಸರ್ಕಾರ ದೇಶದ 80 ಕೋಟಿ ಜನಕ್ಕೆ ಇವತ್ತಿಗೂ 5 ಕೆಜಿ ಅಕ್ಕಿ ಕೊಡುತ್ತಿದೆ. ಅದನ್ನೇ ತಮ್ಮದೆಂದು ಸುಳ್ಳು ಪ್ರಚಾರ ಪಡೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಪ್ರಚಾರ ಸಭೆಯಲ್ಲಿ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಪ್ರಮುಖರಾದ ಷಣ್ಮುಖ ಗುರಿಕಾರ, ಗದಿಗಪ್ಪ ಹೆಲವರ, ರಾಮಚಂದ್ರ ಹೊಂಡದಕಟ್ಟೆ, ಪಿ.ಎಸ್. ನೆಲ್ಲೂರು, ರಮೇಶ ಕೊಟ್ಟಿಗೇರಿ, ರಾಮಣ್ಣ ಮೂಲಿಮನಿ, ಮೃತ್ಯುಂಜಯ ಹಿರೇಮಠ, ಸೇರಿದಂತೆ ಹಲವರು ಇದ್ದರು.