ಶಿಕ್ಷಣದ ಮುಂದೆ ಬೇರ್‍ಯಾವ ಸಂಪತ್ತು ಶಾಶ್ವತವಲ್ಲ: ಜೋಗಪ್ಪ

KannadaprabhaNewsNetwork | Published : Jun 10, 2024 12:53 AM

ಸಾರಾಂಶ

ಹಿರಿಯೂರು ತಾಲೂಕಿನ ಖಂಡೇನಹಳ್ಳಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಹಳೆಯ ವಿದ್ಯಾರ್ಥಿಗಳ ಬಳಗದಿಂದ ಗುರುವಂದನಾ ಮತ್ತು ಅಪೂರ್ವ ಸ್ನೇಹ ಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಹಿರಿಯೂರು

ದೇಶದ ಅಭ್ಯುದಯಕ್ಕೆ ಶಿಕ್ಷಣ, ಶಿಕ್ಷಕ ಮತ್ತು ಸಮಾಜವು ಪೂರಕವಾಗಿ ಕೆಲಸ ಮಾಡಬೇಕಿದೆ ಎಂದು ನಿವೃತ್ತ ಮುಖ್ಯ ಶಿಕ್ಷಕ-ರೋಟರಿ ಸಂಸ್ಥೆ ಕಾರ್ಯದರ್ಶಿ ಎಸ್.ಜೋಗಪ್ಪ ಹೇಳಿದರು.

ತಾಲೂಕಿನ ಖಂಡೇನಹಳ್ಳಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ 1998-99ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ಬಳಗವತಿಯಿಂದ ಆಯೋಜಿಸಿದ್ದ ಗುರುವಂದನಾ ಮತ್ತು ಅಪೂರ್ವ ಸ್ನೇಹ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಕ ಮತ್ತು ವಿದ್ಯಾರ್ಥಿಗಳ ಸಂಬಂಧ ಭಾವನಾತ್ಮಕವಾಗಿದೆ. ನಾವು ಗಳಿಸಿದ ಆಸ್ತಿ, ಅಂತಸ್ತು ಸಂಪತ್ತು ಯಾವುದೂ ಕೊನೆಯವರೆಗೂ ಉಳಿಯೊಲ್ಲ. ಗುರುಗಳು ಕಲಿಸಿದ ಅಕ್ಷರದ ಜ್ಞಾನ ನಮ್ಮಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂದರು.

ನಿವೃತ್ತ ಮುಖ್ಯ ಶಿಕ್ಷಕ ಹೊಸಕೆರೆ ಹನುಮಂತರಾಯಪ್ಪ ಮಾತನಾಡಿ, ಭಾರತೀಯ ಸಂಸ್ಕೃತಿ ಜಗತ್ತಿನಲ್ಲಿಯೇ ಶ್ರೇಷ್ಠವಾಗಿದ್ದು, ಗುರುಗಳನ್ನು ಗೌರವಿಸುವ ಏಕೈಕ ಪರಂಪರೆ ಹೊಂದಿದೆ. ಗುರು ಕರುಣೆ ಪಡೆದ ಶಿಷ್ಯಂದಿರ ಭವಿಷ್ಯ ನಿಜಕ್ಕೂ ಉಜ್ವಲವಾಗುತ್ತದೆ ಎಂದರು.

ನಿವೃತ್ತ ಹಿಂದಿ ಭಾಷೆ ಶಿಕ್ಷಕ ಜಿ.ಎನ್.ನರಸಿಂಹಮೂರ್ತಿ ಮಾತನಾಡಿ, ದೇಶಕ್ಕೆ ಉತ್ತಮ ನಾಗರಿಕರನ್ನು ರೂಪಿಸಿಕೊಡುವಲ್ಲಿ ಗುರುವಿನ ಪಾತ್ರ ಮಹತ್ವದ್ದಾಗಿದೆ. ನಮ್ಮಲ್ಲಿರುವ ಅಜ್ಞಾನ ಹೊರ ಹಾಕಲು ಶಿಕ್ಷಕರು ಮಾರ್ಗದರ್ಶಿಯಾಗುತ್ತಾರೆ. ಗುರು ಎಂಬ ಶಬ್ಧದ ಅರ್ಥವೂ ಸಹ ಇದನ್ನೇ ಹೇಳುತ್ತದೆ. ಅಂಧಕಾರ ದೂರಾಗಿಸುವವನು ಎಂದು. ಪ್ರತಿಯೊಬ್ಬರ ಜೀವನದ ಏಳು-ಬೀಳಿಗೆ ಗುರು ಪ್ರತ್ಯಕ್ಷ-ಪರೋಕ್ಷವಾಗಿ ಕಾರಣನಾಗುತ್ತಾನೆ ಎಂದರು.

ಈ ವೇಳೆ ಗ್ರಾಪಂ ಅಧ್ಯಕ್ಷೆ ಸಾವಿತ್ರಮ್ಮ ಈಶ್ವರಪ್ಪ, ನಿವೃತ್ತ ಮುಖ್ಯ ಶಿಕ್ಷಕ ಜಿ.ಗುಜ್ಜಾರಪ್ಪ, ನಿವೃತ್ತ ದೈಹಿಕ ಶಿಕ್ಷಕ ಜಿ.ಎ.ಬಸಪ್ಪ, ಗ್ರಾಪಂ ಉಪಾಧ್ಯಕ್ಷ ಕೆ.ಟಿ.ಶ್ರೀನಿವಾಸ್, ಸದಸ್ಯರಾದ ಮಂಗಳಾ ಯೋಗೇಶ್, ಸೌಮ್ಯಾ, ಬಸವರಾಜ್, ರಾಘವೇಂದ್ರ, ಎಸ್‍ಡಿಎಂಸಿ. ಅಧ್ಯಕ್ಷ ಲಾಲಾ ಸಾಬ್, ಮುಖ್ಯ ಶಿಕ್ಷಕಿ ಕಮಲಮ್ಮ, ಅಂಗನವಾಡಿ ನಿವೃತ್ತ ಸಹಾಯಕಿ ಪುಟ್ಟಮ್ಮ, ನಿವೃತ್ತ ಶಿಕ್ಷಕರಾದ ಬಸವರಾಜಪ್ಪ, ಗೋವಿಂದಪ್ಪ, ಹನುಮಂತರಾಯಪ್ಪ, ಇಸಾಕ್, ಎನ್.ಬಿ.ಬಸವರಾಜ್, ಕೆ.ಎಸ್.ರವಿಕುಮಾರ್, ಹಳೆಯ ವಿದ್ಯಾರ್ಥಿ ಬಳಗದ ಸಿ.ಕುಮಾರ್, ಹೇಮಾವತಿ, ಸುವರ್ಣಾ, ಉಮಾದೇವಿ, ರಂಗಸ್ವಾಮಿ, ಆನಂದ್, ಟಿ.ಶ್ರೀನಿವಾಸ್, ಮಧು, ಮಹೇಶ್, ತಿಮ್ಮರಾಜ್, ರುದ್ರಮುನಿ, ಸೌಮ್ಯಾ, ಎಂ.ಎಸ್.ತಿಪ್ಪಮ್ಮ, ಗಿರಿಜಮ್ಮ, ಸುಜಾತಾ ಮುಂತಾದವರು ಇದ್ದರು.

Share this article