ಬಿಎಸ್‌ಪಿಎಲ್ ಕಾರ್ಖಾನೆ ಆರಂಭಕ್ಕೆ ಅನುಮತಿ ಬೇಡ

KannadaprabhaNewsNetwork | Published : Mar 22, 2025 2:06 AM

ನಮ್ಮ ಗ್ರಾಮದ ಸುತ್ತಮುತ್ತಲು ಅನೇಕ ಉಕ್ಕು, ಕಬ್ಬಿಣ ಕಾರ್ಖಾನೆಗಳಿದ್ದು ಸ್ಪಾಂಜ್‌ ಉತ್ಪಾದನಾ ಘಟಕಗಳಿದ್ದು ಇವು ಹೊರಸೂಸುವ ಹೊಗೆಯಿಂದ ಕಪ್ಪು ಧೂಳು, ಹೊಗೆಯಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ.

ಕೊಪ್ಪಳ:

ಯಾವುದೇ ಕಾರಣಕ್ಕೂ ಬಿಎಸ್‌ಪಿಎಲ್ ಕಾರ್ಖಾನೆ ಆರಂಭಕ್ಕೆ ಅನುಮತಿ ನೀಡಬಾರದು ಹಾಗೂ ಈಗಿರುವ ಕಾರ್ಖಾನೆಗಳ ವಿರುದ್ಧ ಕ್ರಮಕೈಗೊಳ್ಳುವಂತೆ ತಾಲೂಕಿನ ಹಾಲವರ್ತಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ನಮ್ಮ ಗ್ರಾಮದ ಸುತ್ತಮುತ್ತಲು ಅನೇಕ ಉಕ್ಕು, ಕಬ್ಬಿಣ ಕಾರ್ಖಾನೆಗಳಿದ್ದು ಸ್ಪಾಂಜ್‌ ಉತ್ಪಾದನಾ ಘಟಕಗಳಿದ್ದು ಇವು ಹೊರಸೂಸುವ ಹೊಗೆಯಿಂದ ಕಪ್ಪು ಧೂಳು, ಹೊಗೆಯಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ. ಇದರಿಂದ ಬೆಳೆಗಳು ಬರುತ್ತಿಲ್ಲ. ಹೀಗಿರುವಾಗ ಬಿಎಸ್‌ಪಿಎಲ್ ಕಾರ್ಖಾನೆ ಸ್ಥಾಪಿಸಿದರೆ ಬದುಕೇ ದುಸ್ತರವಾಗಲಿದೆ ಎಂದು ಅಳಲು ತೋಡಿಕೊಂಡರು.

ಹೀಗಾಗಲೇ ಜ್ವರ, ನೆಗಡಿ, ಕೆಮ್ಮು, ಅಸ್ತಮಾ ಸೇರಿ ಇತರ ರೋಗಗಳು ಜನರಲ್ಲಿ ಹೆಚ್ಚುತ್ತಿವೆ. ಕೃಷಿ ಬೆಳೆಗಳ ಮೇಲೂ ಅಡ್ಡ ಪರಿಣಾಮ ಬೀರಿದೆ. ಸರಿಯಾಗಿ ಇಳುವರಿ ಬರುತ್ತಿಲ್ಲ. ತೋಟಗಾರಿಕೆ ಬೆಳೆಗಳು ಬೆಳೆಯುತ್ತಿಲ್ಲ. ಹಲವು ಕಾರ್ಖಾನೆಗಳು ಸರ್ಕಾರದ ನಿಯಮ ಗಾಳಿಗೆ ತೂರಿ ಕೆಲಸ ನಿರ್ವಹಿಸುತ್ತಿವೆ. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಕಠಿಣ ಕ್ರಮಕೈಗೊಂಡಿಲ್ಲ. ಆದರೆ, ಇದೀಗ ಗ್ರಾಮಕ್ಕೆ ಹೊಂದಿಕೊಂಡು ಮತ್ತೊಂದು ಬಿಎಸ್‌ಪಿಎಲ್ ಕಾರ್ಖಾನೆ ಆರಂಭಕ್ಕೆ ಸರ್ಕಾರ ಅನುಮತಿ ನೀಡಿದೆ. ಇದರಿಂದ ಹಾಲವರ್ತಿ ಹಾಗೂ ಕೊಪ್ಪಳ ನಗರ ಸೇರಿ ಇತರ ಗ್ರಾಮಗಳ ಪರಿಸರ ಹಾಳಾಗಲಿದೆ. ಗ್ರಾಮ ವರ್ಗಾವಣೆ ಮಾಡಬೇಕಾಗುವ ಸ್ಥಿತಿ ನಿರ್ಮಾಣವಾಗಲಿದೆ. ಆದರಿಂದ ಕಾರ್ಖಾನೆ ಆರಂಭಕ್ಕೆ ಅನುಮತಿ ನೀಡಬಾರದು. ಜತೆಗೆ ಈಗಿರುವ ಕಾರ್ಖಾನೆಗಳು ನಿಯಮಾನುಸಾರ ಕೆಲಸ ಮಾಡಬೇಕು. ಧೂಳು ನಿಯಂತ್ರಿಸಬೇಕು. ನೂತನ ತಂತ್ರಜ್ಞಾನ ಬಳಸಿ ಪರಿಸರ ಹಾನಿ ತಡೆಯುವಂತೆ ಸೂಚಿಸಬೇಕು. ನಿಯಮಾನುಸಾರ ಕಾರ್ಯನಿರ್ವಹಿಸದ ಕಾರ್ಖಾನೆಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಈ ವೇಳೆ ಹಾಲವರ್ತಿಯ ಗ್ರಾಮ ಪಂಚಾಯಿತಿ ಸದಸ್ಯರು, ಮುಖಂಡರಾದ ಬಾಳಪ್ಪ, ಮಾರ್ಕಂಡಯ್ಯ, ಭರಮಪ್ಪ, ಮಂಜು ಕೆಂಚನಗೌಡ್ರ, ಗವಿಸಿದ್ದಪ್ಪ ರೆಡ್ಡಿ, ಹನುಮಪ್ಪ, ಶಂಕ್ರಪ್ಪ, ದೇವಪ್ಪ, ದೊಡ್ಡಪ್ಪ, ಮಲ್ಲಪ್ಪ. ಕಲ್ಲಪ್ಪ, ನಾಗರಾಜ, ಹನಮಂತ, ನೀಲಮ್ಮ, ಹುಲಿಗೆವ್ವ, ಆನಂದಕುಮಾರ, ರಾಘವೇಂದ್ರ ಸೇರಿದಂತೆ ನೂರಾರು ಜನರು ಇದ್ದರು.