ಹುಬ್ಬಳ್ಳಿ:
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈವಾಡವಿದೆ ಎಂಬ ಆರೋಪ ಬಿಜೆಪಿ ನಾಯಕರ, ಸಿದ್ದರಾಮಯ್ಯ ವಿರೋಧಿಗಳ ಷಡ್ಯಂತ್ರವಾಗಿದೆ ಅಷ್ಟೇ. ಈ ಪ್ರಕರಣದಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡುವ ಪ್ರಶ್ನೆಯೇ ಹುಟ್ಟುವುದಿಲ್ಲ ಎಂದು ಸಚಿವ ಎಚ್.ಕೆ. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ಅಸಂವಿಧಾನಿಕವಾಗಿ ಪ್ರಾಸಿಕ್ಯೂಷನ್ಗೆ ಪರವಾನಗಿ ನೀಡಿದ್ದಾರೆ. ಇದು ರಾಜಕೀಯ ಪ್ರೇರಿತ. ರಾಜ್ಯಪಾಲರ ಅನ್ಯಾಯದ ಕ್ರಮವಾಗಿದೆ. ಇದನ್ನು ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.
ಭವಿಷ್ಯ ಹೇಳುತ್ತಾರೆಯೇ?10 ದಿನ ತಡೆಯಿರಿ ಸರ್ಕಾರ ಉಳಿಯುದಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಪ್ರಹ್ಲಾದ ಜೋಶಿ, ಶೋಭಾ ಕರಂದ್ಲಾಜೆ ಭವಿಷ್ಯ ನುಡಿಯುತ್ತಿದ್ದಾರೆ. ಇವರೇನು ಭವಿಷ್ಯ ಹೇಳುತ್ತಾರೆಯೇ? ಜ್ಯೋತಿಷಿಗಳಾ? ಕೇಂದ್ರ ಸರ್ಕಾರದ ಸಚಿವರು ರಾಜ್ಯಪಾಲರ ಮೇಲೆ ಒತ್ತಡ ತರುವುದು ಜನರಿಗೆ ಗೊತ್ತಾಗುವುದಿಲ್ಲವೇ? ಮೈಸೂರಿನಲ್ಲಿ ಸೇರಿದ ಜನ ನೋಡಿಯಾದರೂ ರಾಜ್ಯಪಾಲರು ತಮ್ಮ ನಿಲುವು ಬದಲಾಯಿಸಿಕೊಳ್ಳಬೇಕಿತ್ತು ಎಂದರು.
ತರಾತುರಿಯಲ್ಲಿ ನೋಟಿಸ್:ಜು. 26ರಂದು ದೂರು ನೀಡುತ್ತಾರೆ. ಆವಾಗಲೇ ನಮ್ಮಿಂದ ಉತ್ತರ ಹೋಗಿರುತ್ತದೆ. ಅದೇ ರಾತ್ರಿ ತರಾತುರಿಯಲ್ಲಿ ಶೋಕಾಸ್ ನೋಟಿಸ್ ಕೊಡುತ್ತಾರೆ. ರಾಜ್ಯಪಾಲರಿಗೆ ಹಿಂದಿನ ಎಚ್.ಡಿ. ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಮುರುಗೇಶ ನಿರಾಣಿ ಪ್ರಕರಣ ಗಮನಕ್ಕೆ ಬರಲಿಲ್ಲವೇ? ಸಿದ್ದರಾಮಯ್ಯ ಅವರನ್ನು ಗುರಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಕಾನೂನಾತ್ಮಕ ಹೋರಾಟ:ಐದು ಗ್ಯಾರಂಟಿ ಮೂಲಕ ರಾಜ್ಯದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಮುಖ್ಯಮಂತ್ರಿ ದಿಟ್ಟತನದಿಂದ ಹೇಳುತ್ತಾರೆ. ಒಕ್ಕೂಟ ರಾಜ್ಯ ವ್ಯವಸ್ಥೆಯಲ್ಲಿ ನಮ್ಮ ಹಕ್ಕು ಚಲಾಯಿಸಬಾರದೆ? ನಾವು ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ಇದು ಬಿಜೆಪಿ ಅವರ ಕುತಂತ್ರ. ಇದು ಬಿಜೆಪಿ ನಾಯಕರು, ಸಿದ್ದರಾಮಯ್ಯ ವಿರೋಧಿಗಳು ಮಾಡಿರುವ ಷಡ್ಯಂತ್ರ. ಎಲ್ಲ ಸಚಿವರು ಹಾಗೂ ಶಾಸಕರು ಸಿದ್ದರಾಮಯ್ಯ ಅವರಿಗೆ ಬೆಂಬಲ ಕೊಡುತ್ತಿದ್ದೇವೆ. ಪ್ರತಿ ಜಿಲ್ಲೆಗಳಲ್ಲಿ ಸಿಎಂಗೆ ಬೆಂಬಲಿಸಿದ್ದು ಬಿಜೆಪಿ ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಆ. 22ಕ್ಕೆ ಶಾಸಕಾಂಗ ಹಾಗೂ ಕ್ಯಾಬಿನೆಟ್ ಸಭೆ ಇದೆ. ಮುಖ್ಯಮಂತ್ರಿಗಳ ಹಿಂದೆ ನಾವು, ನಮ್ಮೆಲ್ಲ ಸಚಿವ, ಶಾಸಕರಿದ್ದಾರೆ ಎಂದರು.