ಕೊಪ್ಪಳ: ಬಲ್ಡೋಟಾ ವಿರುದ್ಧ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇವೆ. ಕಂಪನಿ ವ್ಯಾಪ್ತಿಯಲ್ಲಿರುವ ೪೪ ಎಕರೆ ಪ್ರದೇಶದಲ್ಲಿ ಬಸಾಪುರ ಕೆರೆಯನ್ನು ಕೇವಲ ೩೩ ಲಕ್ಷಕ್ಕೆ ಲೀಜ್ ನೀಡಿರುವುದು ಅನ್ಯಾಯ. ಹಿಂದೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವಧಿಯಲ್ಲಿ ಕೆರೆ ಲೀಜ್ ನೀಡಲಾಗಿತ್ತು. ಕೆರೆಗಾಗಿ ಗವಿಸಿದ್ದೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ ದೊಡ್ಡ ಹೋರಾಟ ನಡೆಸಿದ್ದೇವೆ. ಈ ಭಾಗದಲ್ಲಿ ಹೊಸ ಕಾರ್ಖಾನೆಗಳಿಗೆ ಅವಕಾಶ ನೀಡಬಾರದು ಎಂದು ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.
ಬಸಾಪುರ ಕೆರೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು. ತುಂಗಭದ್ರಾ ನದಿಗೆ ಕಾರ್ಖಾನೆಯಿಂದ ಮಾಲಿನ್ಯದ ನೀರು ಹರಿಯುತ್ತಿದ್ದು, ಅದನ್ನು ತಡೆಯಬೇಕು. ರೈತರ ಬೆಳೆ ಹಾನಿಗೆ ಪರಿಹಾರ ಪ್ಯಾಕೇಜ್ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಜಿ.ಎಂ. ವೀರಸಂಗಯ್ಯ ಮಾತನಾಡಿ, ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಮೋದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪ್ರಧಾನಿಯು ರಾಜಿನಾಮೆ ನೀಡುವಂತೆ ಆಗ್ರಹಿಸಿದರು.ಜನಶಕ್ತಿ ಸಂಘಟನೆಯ ಶ್ರೀಧರ್ ಮಾತನಾಡಿ, ಕರ್ನಾಟಕದಲ್ಲಿ ಹಿಂದೆ ಹಲವು ದೊಡ್ಡ ಚಳವಳಿ ನಡೆದಿದ್ದರೂ ಈಗ ಚಳವಳಿಗಳ ಶಕ್ತಿ ಕುಗ್ಗಿದೆ. ಕೆಲವೇ ಕಂಪನಿಗಳು ದೇಶದ ಸಂಪತ್ತು ಹಾಗೂ ಸಾರ್ವಜನಿಕ ಆಸ್ತಿಗಳ ಮೇಲೆ ಹಿಡಿತ ಸಾಧಿಸುತ್ತಿವೆ. ಭೂಮಿ, ಬೆಳೆ ಹಾಗೂ ಸಾರ್ವಜನಿಕ ಸ್ವತ್ತಿನ ಮೇಲೆ ಕಾರ್ಪೊರೇಟ್ ಕಣ್ಣಿಟ್ಟಿದೆ. ಆಳುವ ಸರ್ಕಾರಗಳು ಜನರಿಗೆ ದ್ರೋಹ ಮಾಡುತ್ತಿವೆ ಎಂದರು.
ಕೆಆರ್ಎಸ್ ಪಕ್ಷದ ರವಿಕೃಷ್ಣಾ ರೆಡ್ಡಿ ಮಾತನಾಡಿ, ಸರ್ಕಾರ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದೆ. ಬಸಾಪುರ ಕೆರೆ ಸಾರ್ವಜನಿಕ ಸ್ವತ್ತು. ಅದನ್ನು ಖಾಸಗಿಯವರಿಗೆ ಬಿಟ್ಟುಕೊಡುವುದನ್ನು ನಮ್ಮ ಪಕ್ಷ ವಿರೋಧಿಸುತ್ತದೆ ಎಂದರು.
ಸಮಾವೇಶದಲ್ಲಿ ರೈತ ಸಂಘವು ಒಕ್ಕೋರಲಿನ ಒತ್ತಾಯ ಮಾಡಿ 21 ನಿರ್ಣಯಗಳ ಕುರಿತು ಡಿಸಿ ಡಾ. ಸುರೇಶ ಇಟ್ನಾಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸರ್ಕಾರದ ಸೂಚನೆಯಂತೆ ಬಲ್ಡೋಟಾ ಕಾರ್ಖಾನೆಗೆ ಜಮೀನು ಕೊಟ್ಟಿರುವ ವಾಸ್ತವ ವರದಿ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಈ ಕುರಿತು ಮೂರು ಸುತ್ತಿನ ಸಭೆ ನಡೆಸಲಾಗಿದೆ. ಕಾನೂನು ಇಲಾಖೆಗೂ ವರದಿ ಸಲ್ಲಿಸಲಾಗಿದೆ. ಕೆರೆ ಸಂಬಂಧಿಸಿದಂತೆ ಕಾನೂನು ಹೋರಾಟಕ್ಕೆ ಅವಕಾಶವಿದೆ. ನಾನೇ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಅಗತ್ಯ ನೆರವು ನೀಡುವೆ ಎಂದು ಕೊಪ್ಪಳ ಡಿಸಿ ಡಾ.ಸುರೇಶ್ ಇಟ್ನಾಳ ತಿಳಿಸಿದ್ದಾರೆ.
ಐಜಿಪಿ ಹರ್ಷ ಭೇಟಿ: ಬಲ್ಡೋಟಾ ಕಾರ್ಖಾನೆ ಗಲಾಟೆ ಪ್ರಕರಣದ ಹಿನ್ನೆಲೆ ಬಳ್ಳಾರಿ ವಲಯ ಐಜಿಪಿ ಪಿ.ಎಸ್.ಹರ್ಷ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಯ ಸಂಪೂರ್ಣ ಮಾಹಿತಿ ಹಾಗೂ ಕೈಗೊಂಡಿರುವ ಪೊಲೀಸ್ ಕ್ರಮಗಳ ಕುರಿತು ಎಸ್ಪಿ ಡಾ.ರಾಮ್ ಅರಸಿದ್ದಿ ಅವರಿಂದ ಮಾಹಿತಿ ಪಡೆದು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮ ಮುಂದುವರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.