ಅಜೀಜಅಹ್ಮದ್ ಬಳಗಾನೂರಹುಬ್ಬಳ್ಳಿ:
ಯುದ್ಧ ಪ್ರಾರಂಭವಾದ ಹದಿನೈದು ದಿನದ ಬಳಿಕ ಇಂಧನದ ತೀವ್ರ ಸಮಸ್ಯೆಯಾಗಿತ್ತು. ಈ ವೇಳೆ ಸ್ವತಃ ಜಿಲ್ಲಾಧಿಕಾರಿ ಮುಂದೆ ನಿಂತು, ಪೆಟ್ರೋಲ್ ಬಂಕ್ಗಳಿಗೆ ಅಧಿಕಾರಿಗಳ ತಂಡ ಕರೆದುಕೊಂಡು ಹೋಗಿ ವಸ್ತುಸ್ಥಿತಿ ಅವಲೋಕಿಸಿ ಸಮಸ್ಯೆ ಪರಿಹರಿಸಿದ್ದರು. ನಿಗದಿಗಿಂತಲೂ ಹೆಚ್ಚಿನ ಪ್ರಮಾಣದ ಇಂಧನ ಸಂಗ್ರಹವಿದೆ. ಬಂಕ್ಗಳಿಗೆ ಇಂಧನ ಪೂರೈಕೆಯಲ್ಲಿ ಯಾವುದೇ ರೀತಿಯ ಸಮಸ್ಯೆಯಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ನಿಲ್ಲದ ಸಮಸ್ಯೆ:ಕಳೆದೊಂದು ವಾರದಿಂದ ಮತ್ತೆ ಬಂಕ್ಗಳಲ್ಲಿ ಇಂಧನ ಸಮಸ್ಯೆ ಎದುರಾಗಿದೆ. ಆದರೆ, ಈ ಸಮಸ್ಯೆ ಕೊಂಚ ಭಿನ್ನವಾಗಿದೆ. ಎಚ್ಪಿಸಿ, ಬಿಪಿಸಿ, ಐಒಸಿ ಡಿಪೋಗಳಲ್ಲಿ ಅಗತ್ಯ ಪ್ರಮಾಣದ ತೈಲ ಸಂಗ್ರಹವಿದ್ದರೂ ಬಂಕ್ಗಳಿಗೆ ಸಮರ್ಪಕವಾಗಿ ಪೂರೈಸದಿರುವುದು ಬಂಕ್ ಮಾಲೀಕರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಗಡವಾಗಿ ಹಣ ತುಂಬಿದರೂ ಇಂಧನ ಪೂರೈಕೆ ಮಾಡುತ್ತಿಲ್ಲ ಎಂಬುದು ಬಂಕ್ ಮಾಲಿಕರ ಆರೋಪ.
ಕಳೆದ 8-10 ದಿನಗಳಿಂದ ಈ ಸಮಸ್ಯೆ ಉದ್ಭವಿಸಿದ್ದು, ಅನಿವಾರ್ಯವಾಗಿ ಗ್ರಾಮೀಣ ಭಾಗದಲ್ಲಿರುವ ಹಲವು ಬಂಕ್ಗಳು ಬಂದ್ ಆಗಿವೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಹೊರತುಪಡಿಸಿ, ಕುಂದಗೋಳ, ನವಲಗುಂದ, ಕಲಘಟಗಿ, ನಗರದ ಹೊರಭಾಗ, ಅಂಚಟಗೇರಿ, ದಾಸ್ತಿಕೊಪ್ಪ ಸೇರಿದಂತೆ ಹಲವೆಡೆ ವಾರದಲ್ಲಿ 4 ದಿನ ತೆರೆದರೆ, 3 ದಿನ ಇಂಧನವಿಲ್ಲದೇ ಬಂದ್ ಮಾಡಲಾಗುತ್ತಿದೆ.
ಯುದ್ಧ ಪ್ರಾರಂಭವಾಗುವ ಮೊದಲು ರಜಾ ದಿನಗಳಲ್ಲಿ ಮುಂಗಡವಾಗಿ ಇಂಧನ ನೀಡಲಾಗುತ್ತಿತ್ತು. ಮಾರಾಟ ಮಾಡಿದ ಬಳಿಕ ಡಿಪೋಗಳಿಗೆ ಹಣ ನೀಡುತ್ತಿದ್ದೆವು. ಆದರೆ, ಇದೀಗ ಮುಂಗಡ ಹಣ ನೀಡಿದರೂ ಮೂರ್ನಾಲ್ಕು ದಿನ ಇಂಧನ ಪೂರೈಕೆಯಾಗುತ್ತಿಲ್ಲ.
ಜಿಲ್ಲೆಯಲ್ಲಿವೆ 204 ಬಂಕ್:
ಸಮರ್ಪಕವಾಗಿ ಇಂಧನ ಪೂರೈಕೆ ಆಗದಿರುವುದರಿಂದ ಪಟ್ಟಣ, ಗ್ರಾಮೀಣ ಪ್ರದೇಶದ ಜನರು ನಗರಕ್ಕೆ ಬಂದು ಇಂಧನ ಹಾಕಿಸಿಕೊಳ್ಳುತ್ತಿದ್ದಾರೆ. ಜತೆಗೆ ಕಳೆದ ಒಂದು ವಾರದಿಂದ ನಗರ ಪ್ರದೇಶದಲ್ಲೂ ಸಮರ್ಪಕ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಈ ಕುರಿತು ಜಿಲ್ಲಾಧಿಕಾರಿ ಭೇಟಿಯಾಗಿ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಲು ನಿರ್ಧರಿಸಿದ್ದೇವೆ.