ಕನ್ನಡಪ್ರಭ ವಾರ್ತೆ ತುಮಕೂರು
ಅವರು ಬಸವ ಕೇಂದ್ರ ಹಾಗೂ ಜಯದೇವ ವಿದ್ಯಾರ್ಥಿ ನಿಲಯ ಟ್ರಸ್ಟ್ ನಿಂದ ನಗರದ ಮುರುಘರಾಜೇಂದ್ರ ಸಭಾಂಗಣದಲ್ಲಿ ಶರಣ ಸಂಗಮ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಡಾ. ಡಿ.ಎನ್.ಯೋಗೀಶ್ವರಪ್ಪನವರ ‘ನೊಳಂಬ ಲಿಂಗಾಯತರು’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಕೃತಿಯನ್ನು ಕುರಿತು ಸಾಹಿತಿಗಳಾದ ಸುಶೀಲಾ ಸದಾಶಿವಯ್ಯ ಮಾತನಾಡಿ, ಬಸವಾದಿ ಶರಣರು ಸ್ಥಾಪಿಸಿದ್ದ ಜಾತ್ಯತೀತ ಲಿಂಗಾಯತ ಧರ್ಮವನ್ನು ಅಪ್ಪಿ ಒಪ್ಪಿಕೊಂಡು ಬಂದಿದ್ದ ಅನೇಕ ಸಮುದಾಯಗಳು ತಮ್ಮ ಸಾಮಾಜಿಕ ಅಂತಸ್ತನ್ನು ಹೆಚ್ಚಿಸಿಕೊಂಡರೂ ತಮ್ಮ ಮತಾಂತರ ಪೂರ್ವದ ವಾಸನೆಯನ್ನು ಬಿಡದೆ ಅತ್ತ ಪೂರ್ವ ಪರಂಪರೆಯನ್ನೂ, ಇತ್ತ ಬಸವಾದಿ ಶರಣರ ಆಚರಣೆಯನ್ನು ಪಾಲಿಸುತ್ತಾ ಬಂದಿರುವುದು ನೊಳಂಬ ಲಿಂಗಾಯತ ಸಮಾಜದಲ್ಲಿ ಹಾಸುಹೊಕ್ಕಾಗಿರುವುದನ್ನು ಲೇಖಕರು ಈ ಕೃತಿಯಲ್ಲಿ ವಿಶ್ಲೇಷಿಸಿದ್ದಾರೆ ಎಂದರು.ಮೈಸೂರು ಭಾಗದಲ್ಲಿ ಲಿಂಗಾಯತ ಸಮುದಾಯವನ್ನು ಜನಗಣತಿ ಕಾಲಕ್ಕೆ ಶೂದ್ರ ಸಮೂಹಕ್ಕೆ ಸೇರಿಸಿದಾಗ ಸಹಜವಾಗಿಯೇ ರೊಚ್ಚಿಗೆದ್ದ ಲಿಂಗಾಯತ ಹಿರಿಯರು ಪ್ರತಿಭಟನೆಗೆ ಮುಂದಾಗಿ ತಮ್ಮನ್ನು ಲಿಂಗಿ ಬ್ರಾಹ್ಮಣರೆಂದು ದಾಖಲಿಸಬೇಕೆಂದು ಒತ್ತಾಯಿಸಿ, ನಾಲ್ವಡಿ ಕೃಷ್ಣರಾಜ ಒಡೆಯರಿಂದ ಅನುಮತಿ ಪಡೆದ ಹೋರಾಟಗಳನ್ನು ಈ ಕೃತಿ ಒಳಗೊಂಡಿದೆ. ಲಿಂಗಾಯತರಲ್ಲಿ 98 ಒಳಪಂಗಡಗಳು ಇದ್ದು ಅವುಗಳಲ್ಲೇ ತಾರತಮ್ಯವಿದ್ದುದನ್ನು ಈ ಕೃತಿ ದಾಖಲಿಸಿದೆ ಎಂದರು.
ಕೃತಿಯ ಲೇಖಕ ಡಾ. ಡಿ.ಎನ್.ಯೋಗೀಶ್ವರಪ್ಪ ಮಾತನಾಡಿ, ಲಿಂಗಾಯತರಲ್ಲಿ 98 ಒಳಪಂಗಡಗಳಿದ್ದು, ಅವುಗಳಲ್ಲಿ ನೊಳಂಬ ಲಿಂಗಾಯತರು ಎಂಟು ಜಿಲ್ಲೆಗಳಲ್ಲಿ ಗಣನೀಯವಾಗಿ ನೆಲೆಸಿದ್ದಾರೆ. ಕೆಲ ಜಿಲ್ಲೆಗಳಲ್ಲಿ ರಾಜಕೀಯವಾಗಿ ಪ್ರಭಾವಶಾಲಿಗಳಾಗಿದ್ದಾರೆ. ಬಹುಮುಖಿ ಸಂಸ್ಕೃತಿಯ ಆರಾಧಕರಾಗಿದ್ದ ಇವರ ಸಂಸ್ಕೃತಿ ಇತ್ತೀಚಿನ ದಿನಗಳಲ್ಲಿ ಅಳಿಸಿಹೋಗುತ್ತಿರುವುದನ್ನು ಗಮನಿಸಿದ ನಾನು, ಆ ಸಂಸ್ಕೃತಿಯನ್ನು ದಾಖಲಿಸುವ ಉದ್ದೇಶದಿಂದ ಈ ಕೃತಿ ರಚನೆ ಮಾಡಿದ್ದೇನೆ ಎಂದರು.
ವೇದಿಕೆಯಲ್ಲಿ ಕಲಾಶ್ರೀ ಡಾ. ಲಕ್ಷ್ಮಣದಾಸ್, ಪ್ರಕಾಶಕ ಸತೀಶ್ ಹೆಬ್ಬಾಕ ಹಾಜರಿದ್ದರು. ಬಸವ ಕೇಂದ್ರದ ಅಧ್ಯಕ್ಷರಾದ ಸಿದ್ಧಗಂಗಮ್ಮ ಅಧ್ಯಕ್ಷತೆ ವಹಿಸಿದ್ದರು.
ನಗರದ ಜಯದೇವ ಮುರುಘರಾಜೇಂದ್ರ ಸಭಾಂಗಣದಲ್ಲಿ ಡಾ. ಡಿ.ಎನ್.ಯೋಗೀಶ್ವರಪ್ಪನವರ ನೊಳಂಬ ಲಿಂಗಾಯತರು ಕೃತಿಯನ್ನು ಬಸವರಾಜಪ್ಪ ಬಿಡುಗಡೆ ಮಾಡಿದರು. ಚಿತ್ರದಲ್ಲಿ ಕೆ.ಎಸ್.ಸಿದ್ದಲಿಂಗಪ್ಪ, ಸುಶೀಲಾ ಸದಾಶಿವಯ್ಯ, ಡಾ. ಗೋವಿಂದರಾಯ, ಡಾ. ಡಿ.ಎನ್.ಯೋಗೀಶ್ವರಪ್ಪ, ಸಿದ್ಧಗಂಗಮ್ಮ, ಚಂದ್ರಶೇಖರ್, ಕಲ್ಪನಾ ಉಮೇಶ್ ಇತರರಿದ್ದರು.