ಕನ್ನಡಪ್ರಭವಾರ್ತೆ ಪುತ್ತೂರು
ನೈತಿಕ ಪೊಲೀಸ್ ಗಿರಿಯಲ್ಲಿ ಭಾಗಿಯಾಗಿದ್ದ ಕಾರಣಕ್ಕೆ ಪುತ್ತೂರು ತಾಲೂಕಿನ ಐವರು ಬಜರಂಗದಳದ ಕಾರ್ಯಕರ್ತರಿಗೆ ಪೊಲೀಸ್ ಇಲಾಖೆ ಗಡಿಪಾರು ಶಿಫಾರಸ್ಸಿಗೆ ಕಾರಣ ಕೇಳಿಕೆ ನೋಟಿಸ್ ಜಾರಿಗೊಳಿಸಿದ್ದು, ನ.೨೨ರಂದು ಪುತ್ತೂರು ಸಹಾಯಕ ಆಯುಕ್ತರ ಮುಂದೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.ಬಜರಂಗದಳದಲ್ಲಿ ವಿವಿಧ ಜವಾಬ್ದಾರಿ ಹೊಂದಿರುವ ಅಟೋ ರಿಕ್ಷಾ ಚಾಲಕ ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ತಿಂಗಳಾಡಿ ನಿವಾಸಿ ದಿನೇಶ್, ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿರುವ ಆರ್ಯಾಪು ಗ್ರಾಮದ ಸಂಪ್ಯ ನಿವಾಸಿ ಪ್ರಜ್ವಲ್, ಲತೇಶ್ ಗುಂಡ್ಯ, ತಿಂಗಳಾಡಿ ನಿವಾಸಿ ನಿಶಾಂತ್ ಮತ್ತು ಅಜಲಡ್ಕ ನಿವಾಸಿ ಪ್ರದೀಪ್ ಅವರು ಆರೋಪಿಗಳು. ಈ ಪೈಕಿ ಲತೇಶ್ ಗುಂಡ್ಯ ಅವರು ಬಜರಂಗದಳದ ಪುತ್ತೂರು ಜಿಲ್ಲಾ ಸಹ ಸಂಯೋಜಕ್ ಆಗಿದ್ದಾರೆ. ಆರೋಪಿಗಳ ಮೇಲೆ ಕೋಮು ಗಲಭೆ, ದನಸಾಗಾಟ ಹಲ್ಲೆ, ನೈತಿಕ ಪೊಲೀಸ್ ಗಿರಿ ಸೇರಿ ಪ್ರಕರಣಗಳಲ್ಲಿ ಭಾಗಿಯಾದ ಆರೋಪವಿದೆ. ಪುತ್ತೂರು ನಗರ ಠಾಣೆ ಹಾಗೂ ಸುಳ್ಯ ಠಾಣೆಯಿಂದ ಗಡಿಪಾರಿಗೆ ಮನವಿ ಮಾಡಲಾಗಿದ್ದು, ಲತೇಶ್ಗೆ ಬಳ್ಳಾರಿ ಜಿಲ್ಲೆಗೆ, ಪ್ರಜ್ವಲ್ ಗೆ ಬಾಗಲಕೋಟೆ ಜಿಲ್ಲೆಗೆ ಗಡಿಪಾರು ಮಾಡಲು ಮನವಿ ಮಾಡಲಾಗಿದೆ.
ಕರ್ನಾಟಕ ಪೊಲೀಸ್ ಅಧಿನಿಯಮ ೧೯೫೩ರ ಕಲಂ ೫೫ರಡಿ ಗಡಿಪಾರು ನೋಟೀಸ್ ನೀಡಲಾಗಿದ್ದು, ನಿಮ್ಮನ್ನು ಯಾಕೆ ಗಡಿಪಾರು ಮಾಡಬಾರದು ಎಂದು ಆರೋಪಿಗಳಿಗೆ ಕಾರಣ ಕೇಳಿ ನೋಟೀಸ್ ಜಾರಿಗೊಳಿಸಲಾದೆ ಹಾಗೂ ಪುತ್ತೂರು ಸಹಾಯಕ ಆಯುಕ್ತರ ಎದುರು ಹಾಜರಾಗಲು ಸೂಚನೆ ನೀಡಲಾಗಿದೆ. ವಿಚಾರಣೆಗೆ ಹಾಜರಾದ ಬಳಿಕ ಅಧಿಕೃತವಾಗಿ ಒಂದು ವರ್ಷಗಳ ಕಾಲ ಗಡಿಪಾರು ಆದೇಶ ಸಾಧ್ಯತೆಯಿದೆ ಎನ್ನಲಾಗಿದೆ.---ಹಿಂದೂ ಕಾರ್ಯಕರ್ತರ ಮೇಲೆ ಗಡಿಪಾರಿನ ಅಸ್ತ್ರ ಪ್ರಯೋಗ: ನಳಿನ್ ವಾಗ್ದಾಳಿ ಪುತ್ತೂರು: ರಾಜ್ಯದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುವ ಕೆಲಸ ನಡೆಸುತ್ತಿರುವ ರಾಜ್ಯ ಸರ್ಕಾರವು ಗೂಂಡಾ ರಾಜ್ಯವಾಗಿ ಬದಲಾಗಿದೆ. ಯಾವುದೇ ಅಪರಾಧವಿಲ್ಲದಿದ್ದರೂ ಇದೀಗ ಸುಳ್ಯ ಹಾಗೂ ಪುತ್ತೂರು ಭಾಗದ ಕಾರ್ಯಕರ್ತರ ಮೇಲೆ ಗಡಿಪಾರಿನ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲೆಯ ಸಂಸದ ಹಾಗೂ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ವಾಗ್ದಾಳಿ ನಡೆಸಿದ್ದಾರೆ.
ಅವರು ಗುರುವಾರ ಪುತ್ತೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ರಾಜ್ಯ ಹಿಂದೂ ಕಾರ್ಯಕರ್ತರ ಮೇಲೆ ಗಡಿಪಾರಿನ ಅಸ್ತ್ರ ಪ್ರಯೋಗ ನಡೆಸಲಾಗುತ್ತಿದೆ. ಯಾವುದೇ ಅಪರಾಧವಿಲ್ಲದಿದ್ದರೂ, ಸುಳ್ಳು ಪ್ರಕರಣ ದಾಖಲು ಮಾಡಲಾಗುತ್ತಿದೆ. ಒಂದೇ ಒಂದು ಕೇಸ್ ಇಲ್ಲದವರನ್ನು ಗಡಿಪಾರು ಮಾಡಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದೇನೆ ಎಂದ ನಳಿನ್, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಿಂದ ದ್ವೇಷದ ರಾಜಕಾರಣ ನಡೆಯುತ್ತಿದೆ. ಸಿದ್ದರಾಮಯ್ಯ ರಾಜ್ಯದಲ್ಲಿ ಮುಖ್ಯಮಂತ್ರಿ ಆದ ಬಳಿಕ ಗೋಹತ್ಯೆ, ರೈತರ ಆತ್ಮಹತ್ಯೆ, ಗೂಂಡಾಗಳ ಹಾವಳಿ ಹೆಚ್ಚಾಗಿದೆ. ರಾಜ್ಯದಲ್ಲಿ ಗೂಂಡಾಗಳಿಗೆ ಹೆಚ್ಚಿನ ಲಾಭ ಆಗಿದೆ. ರಾಜ್ಯ ಇಂದು ಗೂಂಡಾರಾಜ್ಯವಾಗಿ ಬದಲಾಗಿದೆ ಎಂದು ಆರೋಪಿಸಿದರು.