ನಗರಸಭೆ ಸಾಮಾನ್ಯ ಸಭೆಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಈ ಹಿಂದೆ 3 ಬೀಡಾಡಿ ದನಗಳನ್ನು ಸಾಕಲಾಗಿತ್ತು. ಈಗ ಅವು ಕಾಣುತ್ತಿಲ್ಲ, ಹೀಗಾಗಿ ಮಾರಾಟ ಮಾಡಲಾಗಿದೆ ಎಂದು ನಗರಸಭೆ ಎಲ್ಲಾ ಸದಸ್ಯರು ಆರೋಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಶಿರಾನಗರಸಭೆ ಸಾಮಾನ್ಯ ಸಭೆಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಈ ಹಿಂದೆ 3 ಬೀಡಾಡಿ ದನಗಳನ್ನು ಸಾಕಲಾಗಿತ್ತು. ಈಗ ಅವು ಕಾಣುತ್ತಿಲ್ಲ, ಹೀಗಾಗಿ ಮಾರಾಟ ಮಾಡಲಾಗಿದೆ ಎಂದು ನಗರಸಭೆ ಎಲ್ಲಾ ಸದಸ್ಯರು ಆರೋಪಿಸಿದ್ದಾರೆ. ಈ ಹಿನ್ನೆಲೆ ಸಮಜಾಯಿಷಿ ನೀಡುವಂತೆ ಪೌರಾಯುಕ್ತ ರುದ್ರೇಶ್ ಪರಿಸರ ಅಭಿಯಂತರ ಪಲ್ಲವಿ, ಆರೋಗ್ಯ ನಿರೀಕ್ಷಕರಾದ ಮಾರೇಗೌಡ, ಅಪ್ಸಿಯಾ ಭಾನು, ಜಗನಾಥ್ ಆರ್.ಗೆ ನೋಟಿಸ್ ಜಾರಿ ಮಾಡಿದ್ದಾರೆ.
ಹೊರಗುತ್ತಿಗೆ ಸಿಬ್ಬಂದಿಯಿಂದ ಮಾಹಿತಿ: ಕಳೆದ 6 ತಿಂಗಳ ಹಿಂದೆ ನಗರಸಭೆಯವರು ನಗರದಲ್ಲಿ ರಸ್ತೆ ಸಂಚಾರಕ್ಕೆ ತೊಂದರೆ ಮಾಡುತ್ತಿದ್ದ ಬೀಡಾಡಿ ದನಗಳನ್ನು ಹಿಡಿದು ಕಸ ವಿಲೇವಾರಿ ಘಟಕದಲ್ಲಿ ಸಾಕುತ್ತಿದ್ದರು. ವಾರಸುದಾರರು ಬಂದಂತಹ ಸಂದರ್ಭದಲ್ಲಿ ಅವರಿಗೆ ಹಸುಗಳನ್ನು ಹಸ್ತಾಂತರ ಮಾಡುತ್ತಿದ್ದರು. ಆದರೆ 3 ಹಸುಗಳ ವಾರಸುದಾರರು 3 ತಿಂಗಳಾದರೂ ಯಾರೂ ಬರದೇ ಹಾಗೇ ಉಳಿದಿದ್ದು, ಅವುಗಳನ್ನು ಅಲ್ಲಿನ ಸಿಬ್ಬಂದಿ ಸಾಕುತ್ತಿದ್ದರು. ಆದರೆ ಕೆಲ ದಿನಗಳ ಹಿಂದೆ ಇದ್ದಕ್ಕಿದ್ದ ಹಾಗೆ 3 ಹಸುಗಳು ಕಾಣೆಯಾಗಿದವು. ಈ ಬಗ್ಗೆ ಅನುಮಾನಗೊಂಡ ನಗರಸಭೆ ಸದಸ್ಯರು ಸಾಮಾನ್ಯ ಸಭೆಯಲ್ಲಿ ಹಸುಗಳು ಕಾಣುತ್ತಿಲ್ಲ. ಇವುಗಳನ್ನು ಇಲ್ಲಿನ ಆರೋಗ್ಯ ನಿರೀಕ್ಷಕರು ಬಕ್ರಿದ್ ಹಬ್ಬದ ಸಂದರ್ಭದಲ್ಲಿ ಖಸಾಯಿ ಖಾನೆಗೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದರು.
ಆ ನಂತರ ಇದಕ್ಕೆ ಪುಷ್ಟಿ ಕೊಡುವಂತೆ ಕಸ ವಿಲೇವಾರಿ ಘಟಕದಲ್ಲಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡುವ ರಮೇಶ್ ಹಾಗೂ ರಾಮು ನಗರಸಭೆ ಆರೋಗ್ಯ ನಿರೀಕ್ಷಕ ಮಾರೇಗೌಡ ಆದೇಶದ ಮೇರೆಗೆ ಹಸುಗಳನ್ನು ಅವರು ಹೇಳಿದವರಿಗೆ ಆಟೋದಲ್ಲಿ ತುಂಬಿ ಕಳುಹಿಸಿಕೊಟ್ಟಿದ್ದೇವೆ. ಅವರು ನೀಡಿದ್ದ 45000 ರು. ಪಡೆದು ಆರೋಗ್ಯ ನಿರೀಕ್ಷಕರಿಗೆ ನೀಡಿದ್ದೇವೆ ಎಂದು ಹೇಳಿದ್ದಾರೆ.
ಹಿಂದೂ ಜಾಗರಣ ವೇದಿಕೆಯಿಂದ ಮನವಿ: ನಗರಸಭೆ ಆರೋಗ್ಯ ನಿರೀಕ್ಷಕರು 3 ಹಸುಗಳನ್ನು ಮಾರಾಟ ಮಾಡಿದ್ದಾರೆ ಎಂದು ಆರೋಪ ಬಂದ ಹಿನ್ನೆಲೆಯಲ್ಲಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹಿಂದೂ ಜಾಗರಣಾ ವೇದಿಕೆಯ ರಾಜ್ಯ ಸಹ ಸಂಚಾಲಕ ಮಂಜುನಾಥ್ ಪೌರಾಯುಕ್ತ ರುದ್ರೇಶ್ಗೆ ಮನವಿ ಸಲ್ಲಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.