ಹುಬ್ಬಳ್ಳಿ: ಈ ಹಿಂದೆ ಜಾಗದ ಕುರಿತು ಮಾಡಿಕೊಳ್ಳಲಾಗಿದ್ದ ಒಡಂಬಡಿಕೆಗೆ ತಕ್ಕಂತೆ ನಡೆದುಕೊಳ್ಳದ ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ ನೋಟಿಸ್ ನೀಡುವುದು ಹಾಗೂ ಪಾಲಿಕೆ ನೀಡಿದ್ದ ಜಾಗದಲ್ಲಿ ಕೈಗೊಳ್ಳಲಾಗುತ್ತಿರುವ ಕಾಮಗಾರಿ ಸ್ಥಗಿತಗೊಳಿಸಿ ಕಾನೂನು ಹೋರಾಟ ಕೈಗೊಳ್ಳುವ ಕುರಿತು ಗುರುವಾರ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಸದಸ್ಯ ಈರೇಶ ಅಂಚಟಗೇರಿ ಮಾತನಾಡಿ, ಜಾಗದ ಕೊರತೆಯಿದ್ದಾಗಲೂ ಶಿಕ್ಷಣದ ದೃಷ್ಟಿಯಿಂದ ಹಾಗೂ ಹಳೆಯ ಕೋರ್ಟ್ ಕಟ್ಟಡ ಪಾಲಿಕೆಗೆ ದೊರೆಯುತ್ತದೆ ಎಂದು ಜಾಗ ನೀಡಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿಯೇ ಒಪ್ಪಂದವಾಗಿತ್ತು. ಕೊಟ್ಟ ಜಾಗ ಮರಳಿ ಪಡೆದು, ಅಲ್ಲಿ ಪೌರ ಕಾರ್ಮಿಕರಿಗೆ ಮನೆ ಕಟ್ಟಿಸಿಕೊಡೋಣ ಎಂದರು. ಅದಕ್ಕೆ ಸದಸ್ಯರಾದ ಶಿವು ಹಿರೇಮಠ, ರಾಜಣ್ಣ ಕೊರವಿ, ತಿಪ್ಪಣ್ಣ ಮಜ್ಜಗಿ ದನಿಗೂಡಿಸಿದರು.
ನೋಟಿಸ್ಗೆ ಸೂಚನೆಈ ಕುರಿತು ಮಾತನಾಡಿದ ಮೇಯರ್ ಜ್ಯೋತಿ ಪಾಟೀಲ, ಈಗಾಗಲೇ ಪಾಲಿಕೆ ನೀಡಿದ್ದ ಜಾಗದಲ್ಲಿ ಕಾನೂನು ವಿವಿ ಕಾಮಗಾರಿ ಕೈಗೊಂಡಿರುವುದು ಗಮನಕ್ಕೆ ಬಂದಿದೆ. ಈ ಕೂಡಲೇ ಅಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ತಕ್ಷಣ ನೋಟಿಸ್ ನೀಡುವಂತೆ ಪಾಲಿಕೆಯ ಆಯುಕ್ತ ಡಾ. ರುದ್ರೇಶ ಘಾಳಿಗೆ ಸೂಚಿಸಿದರು.