ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಬುಧವಾರ ರಾಷ್ಟ್ರೀಯ ಸೇವಾ ಯೋಜನೆ ದಿನವನ್ನು ಆಚರಿಸಲಾಯಿತು.ವಿವಿಧ ಪ್ರಭೇದದ ಸುಮಾರು 200 ಸಸಿಗಳನ್ನು ಕಾಲೇಜು ಉದ್ಯಾನವನದಲ್ಲಿ ನೆಡಲಾಯಿತು. ಕಾಲೇಜಿನಲ್ಲಿರುವ ಎರಡು ಘಟಕಗಳ ಸುಮಾರು 200 ವಿದ್ಯಾರ್ಥಿಗಳು ಸಸಿಗಳನ್ನು ನೆಟ್ಟು ನೀರೆರೆದರು.
ಕಾಲೇಜಿನ ಅಧ್ಯಾಪಕರು ಮತ್ತು ಅಧ್ಯಾಪಕೇತರ ಸಿಬ್ಬಂದಿ ಸುಮಾರು 7 ಸಾವಿರ ರೂಪಾಯಿ ಮೌಲ್ಯದ ಸಸಿಗಳನ್ನು ಕೊಡುಗೆಯಾಗಿ ನೀಡಿದರು. ವಿದ್ಯಾರ್ಥಿಗಳು ಅವುಗಳನ್ನು ನೆಟ್ಟು ನೀರೆರೆದರು.ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೆ. ನಟರಾಜ್ ಗಿಡಗಳನ್ನು ಉಳಿಸಿ ಬೆಳೆಸಲು ಸಲಹೆ ನೀಡಿದರು.
ಗಿಡ ಮರಗಳು ನಮಗೆ ಜೀವ ಜೀವನ ಎರಡನ್ನು ನೀಡುತ್ತವೆ. ಹಾಗಾಗಿ ಜೀವ ನೀಡುವ ಜೀವಗಳನ್ನು ಸ್ವಾಭಾವಿಕವಾಗಿ ಕಾಪಾಡುವುದು ನಮ್ಮ ಆದ್ಯ ಕರ್ತವ್ಯ. ಅದನ್ನು ಮರೆತ ಕಾರಣ ಒಂದು ಕಾರ್ಯಕ್ರಮ ಮಾಡಿಗಿಡಗಳನ್ನು ನಾವು ನೆಡುವ ಸ್ಥಿತಿಗೆ ತಲುಪಿದ್ದೇವೆ. ಇದು ಅನಿವಾರ್ಯ. ಆದರೂ ಗಿಡ ನೆಟ್ಟು, ಉಳಿಸಿ ಬೆಳೆಸುವುದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಪ್ರೊ.ಎಂ. ಅಬ್ದುಲ್ ರಹಿಮಾನ್ ರಾಷ್ಟ್ರೀಯ ಸೇವಾ ಯೋಜನೆ ಮೂಲಕ ನಾವು ಕಾಡು ಉಳಿಸಿ ಬೆಳೆಸುವುದರ ಜತೆಗೆ ಗ್ರಾಮೀಣ ಭಾಗದಲ್ಲಿ ಜನರ ಸೇವೆ ಮತ್ತು ಸವಲತ್ತು ಕುರಿತು ಅರಿವು ಮೂಡಿಸಿ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಪಥದತ್ತ ಹೋಗಲು ಸಹಕಾರಿ ಆಗಬೇಕು ಎಂದು ಕರೆ ನೀಡಿದರು.ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಅಧಿಕಾರಿಗಳಾದ ಡಾ.ಬಿ. ಲಕ್ಷ್ಮಣ, ಪ್ರೊ.ಬಿ.ಎಸ್. ಶುಭಾ, ಅಧ್ಯಾಪಕ ಸಂಘದ ಕಾರ್ಯದರ್ಶಿ ಕೆ.ಎಲ್. ರಮೇಶ, ಸಾಂಸ್ಕೃತಿಕ ಸಮಿತಿ ಸಂಚಾಲಕ ಗೋವಿಂದರಾಜು, ಅಧ್ಯಾಪಕರಾದ ಸುಧಾ, ಲೀಲಾವತಿ, ಎಚ್.ಸಿ. ಪ್ರಮೀಳಾ, ಎನ್. ಬೃಂದಾ, ಮಧುಮತಿ, ಸುರೇಶ್, ಅಧ್ಯಾಪಕೇತರರು, ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿ ಪ್ರತಿನಿಧಿಗಳಾದ ರಮ್ಯಾ ಡಿ, ಶಿವಾಲಿ, ಸುಚಿತ್ರಾ, ಸ್ನೇಹ, ಸೌಂದರ್ಯ, ಆರ್. ರಂಜಿತ, ಸುಮಾರು 200 ಸ್ವಯಂ ಸೇವಕರು ಪಾಲ್ಗೊಂಡಿದ್ದರು.