ಕನ್ನಡಪ್ರಭ ವಾರ್ತೆ ಕೋಲಾರ
ಕಂದಾಯ ಅಧಿಕಾರಿಗಳು ಸಂವೇದನಾ ಶೀಲತೆಯಿಂದ ಕಾರ್ಯನಿರ್ವಹಿಸಿದರೆ ಸಾರ್ವಜನಿಕರಿಗೆ ಅತ್ಯುತ್ತಮ ಸೇವೆ ನೀಡಬಹುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಭಿಪ್ರಾಯಪಟ್ಟರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ತಕರಾರು, ಪೈಕಿ ಪಹಣಿ ಹಾಗೂ ನಮೂನೆ ೫೩, ೫೭ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಿದ್ದು, ಈ ಎಲ್ಲಾ ಪ್ರಕರಣಗಳಿಗೆ ಕಾಲಮಿತಿಯೊಳಗೆ ಪರಿಹಾರ ನೀಡಬೇಕು. ಡೀಸಿ, ಎಸಿ ಹಾಗೂ ತಹಸೀಲ್ದಾರ್, ನ್ಯಾಯಾಲಯಗಳು ತ್ವರಿತಗತಿಯಲ್ಲಿ ಪ್ರಕರಣಗಳನ್ನು ಇತ್ಯರ್ಥಗೊಳಿಸಬೇಕು ಎಂದು ಅಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಸೂಚಿಸಿದರು.ಪೈಕಿ ಪಹಣಿ ಪ್ರಕರಣಗಳ ಸಂಖ್ಯೆ ಜಿಲ್ಲೆಯಲ್ಲಿ ಅಧಿಕವಾಗಿದ್ದು, ಹಲವು ಪ್ರಕರಣಗಳಲ್ಲಿ ಒಂದು ಸರ್ವೇ ನಂಬರ್ನಲ್ಲಿ ೫೦ ರಿಂದ ೧೦೦ ಜನರ ಹೆಸರುಗಳು ಇದ್ದು, ಕನಿಷ್ಠ ಕಲಂ ೩ ಮತ್ತು ೯ರ ನಡುವೆ ತಾಳೆ ಇರುವ ಪ್ರಕರಣಗಳಲ್ಲಿ ಸರ್ಕಾರವೇ ಕ್ಯಾಂಪೇನ್ ಮೂಲಕ ಪೋಡಿ ಮಾಡಿಕೊಡಲು ಸಿದ್ಧವಿದೆ. ಈ ಪ್ರಕರಣಗಳ ಜೊತೆಗೆ ನಮೂನೆ ೫೩, ೫೭ ಪ್ರಕರಣಗಳನ್ನೂ ಕಾಲಮಿತಿಯೊಳಗೆ ಅಧಿಕಾರಿಗಳು ಪರಿಹರಿಸಬೇಕು ಎಂದು ತಿಳಿಸಿದರು.
ಉತ್ತಮ ಹಾಗೂ ಜನಪರ ಆಡಳಿತ ನೀಡಲಿದೆ ಎಂಬ ವಿಶ್ವಾಸದಿಂದ ಮತದಾರರು ನಮ್ಮ ಸರ್ಕಾರಕ್ಕೆ ಬಹುಮತ ನೀಡಿದ್ದಾರೆ. ಹೀಗಾಗಿ ಜನಸ್ನೇಹಿ ಆಡಳಿತ ನೀಡಬೇಕು ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಶಯ. ಅಲ್ಲದೆ, ಕಂದಾಯ ಇಲಾಖೆ ಎಲ್ಲಾ ಇಲಾಖೆಗಳ ಮಾತೃ ಇಲಾಖೆ. ಹೀಗಾಗಿ ಈ ಇಲಾಖೆಯಲ್ಲೂ ಸಕಾರಾತ್ಮಕ ಬದಲಾವಣೆ ತರಬೇಕು ಎಂಬ ಕಾರಣದಿಂದಲೇ ನನಗೆ ಈ ಜವಾಬ್ದಾರಿಯನ್ನು ನೀಡಲಾಗಿದೆ. ಆದರೆ, ಅಧಿಕಾರಿಗಳ ಸಹಕಾರ ಇಲ್ಲದೆ ಯಾವ ಬದಲಾವಣೆಯೂ ಸಾಧ್ಯವಿಲ್ಲ. ಅಧಿಕಾರಿಗಳು ಉತ್ತಮ ಆಡಳಿತಕ್ಕೆ ಸಹಕರಿಸಿದರೆ ಎಲ್ಲರೂ ಒಟ್ಟಾಗಿ ಭ್ರಷ್ಟಾಚಾರ ಮುಕ್ತ ಜನಪರ ಸೇವೆ ನೀಡಬಹುದು ಎಂದು ಹೇಳಿದರು.ತಕರಾರು ಪ್ರಕರಣಗಳನ್ನು ಶೀಘ್ರ ಮತ್ತು ದಕ್ಷವಾಗಿ ಇತ್ಯರ್ಥಗೊಳಿಸಿ:
ಜಿಲ್ಲೆಯಲ್ಲಿ ಸಾವಿರಾರು ತಕರಾರು ಪ್ರಕರಣಗಳು ಬಾಕಿ ಇವೆ. ಈ ಎಲ್ಲಾ ಪ್ರಕರಣಗಳನ್ನೂ ಶೀಘ್ರದಲ್ಲೇ ವಿಲೇವಾರಿ ಮಾಡಬೇಕು. ಕೆಲವು ಜಿಲ್ಲೆಗಳಲ್ಲಿ ಈ ಪ್ರಕರಣಗಳು ಶೀಘ್ರ ಇತ್ಯರ್ಥವಾಗುತ್ತಿದ್ದು, ತಹಸೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿ ನ್ಯಾಯಾಲಯಗಳು ವಾರದಲ್ಲಿ ಕನಿಷ್ಠ ನಾಲ್ಕು ದಿನ ಕಾರ್ಯ ನಿರ್ವಹಿಸಬೇಕು ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದರು.ಎ.ಸಿ ನ್ಯಾಯಾಲಯಗಳಲ್ಲಿ ೩೧೭೦ ಪ್ರಕರಣಗಳು ಬಾಕಿ ಇವೆ. ೫ ವರ್ಷಗಳಿಗೂ ಹೆಚ್ಚಿನ ೮೦೬ ಪ್ರಕರಣಗಳು ಬಾಕಿ ಇವೆ, ೨೮೧ ಪ್ರಕರಣಗಳು ೨ ರಿಂದ ೫ ವರ್ಷಗಳಿಂದಲೂ ಬಾಕಿ ಇವೆ. ಡೀಸಿ ನ್ಯಾಯಾಲಯದಲ್ಲಿ ೫೩ ಪ್ರಕರಣಗಳು ಬಾಕಿ ಇವೆ, ಇವೆಲ್ಲವನ್ನೂ ೩ ತಿಂಗಳೊಳಗೆ ವಿಲೇ ಮಾಡಬೇಕೆಂದು ಸೂಚಿಸಲಾಯಿತು.
ಈಗಾಗಲೇ ಪೈಲಟ್ ಯೋಜನೆಯ ರೂಪದಲ್ಲಿ ೬ ತಾಲೂಕುಗಳಲ್ಲಿ ದಾಖಲೆ ಡಿಜಿಟಲೀಕರಣ ಮಾಡಲಾಗುತ್ತಿದೆ. ಎಲ್ಲಾ ದಾಖಲೆಗಳನ್ನೂ ಡಿಜಿಟಲೀಕರಣ ಮಾಡುವ ಮೂಲಕ ಜನರೂ ಸಹ ತಮ್ಮ ದಾಖಲೆಗಳನ್ನು ಆನ್ಲೈನ್ ಮೂಲಕ ನೋಡಬಹುದು. ಇದರಿಂದ ಜನರ ವಸೂಲಿ , ಶೋಷಣೆ ತಪ್ಪಿಸಬಹುದು ಎಂದು ಹೇಳಿದರು.ಅಲ್ಲದೆ, ಪ್ರಕೃತಿ ವಿಕೋಪ ವೇಳೆ ತುರ್ತು ಖರ್ಚುಗಳಿಗಾಗಿ ಜಿಲ್ಲಾಧಿಕಾರಿ ಖಾತೆಯಲ್ಲಿ ೨೦ ಕೋಟಿ ರು. ಹಣ ಇದೆ. ಈ ಹಣವನ್ನೂ ಸಹ ಅಗತ್ಯ ಕಾಮಗಾರಿಗಳಿಗೆ ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಇ- ಆಫೀಸ್ ಬಳಸುವಂತೆ ಅಧಿಕಾರಿಗಳಿಗೆ ಸೂಚನೆ:ಹಳೆಯ ಕಾಲದ ಪತ್ರ ವ್ಯವಹಾರವನ್ನು ಕೈಬಿಟ್ಟು ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳುವ ಹಾಗೂ ಕಡತಗಳ ಶೀಘ್ರ ವಿಲೇವಾರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಗಸ್ಟ್ ೧೫ರಿಂದ ಇ- ಆಫೀಸ್ ಅನುಷ್ಠಾನಗೊಳಿಸಲಾಗಿದೆ. ಎಲ್ಲಾ ಜಿಲ್ಲಾಧಿಕಾರಿಗಳೂ ಈಗಾಗಲೇ ಇ- ಆಫೀಸ್ ಮೂಲಕವೇ ಕಡತ ವಿಲೇವಾರಿ ಮಾಡುತ್ತಿದ್ದು, ತಹಸೀಲ್ದಾರ್ ಹಾಗೂ ವಿಭಾಗಾಧಿಕಾರಿಗಳೂ ನ.೧ರ ಒಳಗಾಗಿ ಇ- ಆಫೀಸ್ ಬಳಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಕಡತಗಳು ಇ- ಆಫೀಸ್ ನಲ್ಲಿ ನನ್ನ ಲಾಗಿನ್ಗೆ ಬಂದರೆ ೨ ದಿನದಲ್ಲಿ ವಿಲೇವಾರಿ ಮಾಡಿದ್ದೇನೆ. ಇ- ಆಫೀಸ್ ಸಹಜವಾಗಿ ಕಾರ್ಯ ದಕ್ಷತೆ ಹೆಚ್ಚಿಸಲಿದೆ. ಯಾವುದೇ ಸ್ಥಳದಲ್ಲಿಂದಲೂ ನೀವು ಕಡತ ವಿಲೇವಾರಿ ಮಾಡಬಹುದಾಗಿದೆ. ಸ್ವತ ನಾನು ಇ- ಆಫೀಸ್ ಮೂಲಕ ಕಡತ ವಿಲೇವಾರಿ ಮಾಡುತ್ತಿದ್ದೇನೆ. ಶಾಲೆ, ಗ್ರಾಪಂಗೆ ಜಮೀನು ನೀಡಲು ಆಗುತ್ತಿರುವ ವಿಳಂಬಕ್ಕೆ ಇ- ಆಫೀಸ್ ಮೂಲಕ ಪರಿಹಾರ ನೀಡಬಹುದು ಎಂದು ತಿಳಿಸಿದರು.ಸಭೆಯಲ್ಲಿ ಶಾಸಕರಾದ ಕೊತ್ತೂರು ಜಿ.ಮಂಜುನಾಥ್, ಕೆ.ವೈ.ನಂಜೇಗೌಡ, ಎಂಎಲ್ಸಿ ಅನಿಲ್ಕುಮಾರ್, ಕಂದಾಯ ಇಲಾಖೆ ಆಯುಕ್ತ ಸುನಿಲ್ ಕುಮಾರ್, ಜಿಲ್ಲಾಧಿಕಾರಿ ಅಕ್ರಂಪಾಷ ಇದ್ದರು.