ಅಧಿಕಾರಿಗಳೇ ರೈತರಿಗೆ ಅಗತ್ಯ ಸಲಹೆ, ಮಾರ್ಗದರ್ಶನ ನೀಡಿ: ಶಾಸಕ ಎಚ್ .ಟಿ.ಮಂಜು

KannadaprabhaNewsNetwork | Published : Dec 28, 2023 1:45 AM

ಸಾರಾಂಶ

ಕೃಷಿ ಅಧಿಕಾರಿಗಳು ಪ್ರತಿ ಗ್ರಾಪಂ ವ್ಯಾಪ್ತಿಯಲ್ಲೂ ಮಾದರಿ ಪ್ರಗತಿಪರ ರೈತ ಸಮೂಹ ನಿರ್ಮಿಸುವ ಕೆಲಸಕ್ಕೆ ಒತ್ತು ನೀಡಬೇಕು. ಅಭಿವೃದ್ಧಿ ವಿಚಾರದಲ್ಲಿ ನಾನು ಎಂದಿಗೂ ಪಕ್ಷ ರಾಜಕಾರಣ ಮಾಡಲ್ಲ. ಕೃಷಿ ಇಲಾಖೆ ಸರ್ಕಾರದ ಸವಲತ್ತುಗಳ ವಿತರಣೆ ಮಾಡುತ್ತಿದೆ. ಕೃಷಿಕ ಸಮಾಜದ ಸದಸ್ಯರು ಇದಕ್ಕೆ ಕೈಜೋಡಿಸಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆಸರ್ಕಾರದ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸುವ ಮಧ್ಯವರ್ತಿಗಳ ಕೆಲಸಕ್ಕೆ ಸೀಮಿತವಾಗದೇ ಕೃಷಿ ಇಲಾಖೆ ಅಧಿಕಾರಿಗಳು ರೈತರ ಜಮೀನುಗಳಿಗೆ ತೆರಳಿ ರೈತರಿಗೆ ಅಗತ್ಯ ಸಲಹೆ ಹಾಗೂ ಮಾರ್ಗದರ್ಶನ ನೀಡಿ ಕೃಷಿ ಕ್ಷೇತ್ರವನ್ನು ಲಾಭದಾಯಕವನ್ನಾಗಿ ಮಾಡಲು ಒತ್ತು ನೀಡಬೇಕು ಎಂದು ಶಾಸಕ ಎಚ್.ಟಿ.ಮಂಜು ಸಲಹೆ ನೀಡಿದರು.

ಪಟ್ಟಣದ ಕೃಷಿ ಇಲಾಖೆ ಆವರಣದಲ್ಲಿ ಫಲಾನುಭವಿ ರೈತರಿಗೆ ಲಘು ನೀರಾವರಿ ಯೋಜನೆಯಡಿ ಮಂಜೂರಾಗಿರುವ ಪೈಪ್‌ಗಳು ಮತ್ತು ಸ್ಪಿಂಕ್ಲರ್ ಸಲಕರಣೆ ವಿತರಿಸಿ ಮಾತನಾಡಿ, ಕೃಷಿ ಅಧಿಕಾರಿಗಳು ಪ್ರತಿ ಗ್ರಾಪಂ ವ್ಯಾಪ್ತಿಯಲ್ಲೂ ಮಾದರಿ ಪ್ರಗತಿಪರ ರೈತ ಸಮೂಹವನ್ನು ನಿರ್ಮಿಸುವ ಕೆಲಸಕ್ಕೆ ಒತ್ತು ನೀಡಬೇಕು ಎಂದರು.

ಗ್ರಾಮೀಣ ಪ್ರದೇಶದಲ್ಲಿ ಹೈನುಗಾರಿಕೆ, ಅರಣ್ಯ ಕೃಷಿ, ತೋಟಗಾರಿಕಾ ಬೆಳೆಗಳು ಸೇರಿದಂತೆ ವಾಣಿಜ್ಯ ಬೆಳೆಗಳನ್ನು ಬೆಳೆಯುವುದು, ಕುರಿ ಮತ್ತು ಮೇಕೆ ಸಾಕಾಣಿಕೆ, ಹಂದಿ ಸಾಕಾಣಿಕೆ, ಅಣಬೆ ಬೇಸಾಯ ಮತ್ತಿತರ ಕೃಷಿ ಚಟುವಟಿಕೆಗಳ ಬಗ್ಗೆಯೂ ರೈತ ಸಮೂಹಕ್ಕೆ ಅರಿವು ಮೂಡಿಸಿ ಜಾಗೃತಿಗೊಳಿಸಿ, ಉತ್ತೇಜಿಸಬೇಕು ಎಂದರು.

ಅಭಿವೃದ್ಧಿ ವಿಚಾರದಲ್ಲಿ ನಾನು ಎಂದಿಗೂ ಪಕ್ಷ ರಾಜಕಾರಣ ಮಾಡಲ್ಲ. ಕೃಷಿ ಇಲಾಖೆ ಸರ್ಕಾರದ ಸವಲತ್ತುಗಳ ವಿತರಣೆ ಮಾಡುತ್ತಿದೆ. ಕೃಷಿಕ ಸಮಾಜದ ಸದಸ್ಯರೂ ಇದಕ್ಕೆ ಕೈಜೋಡಿಸಬೇಕು. ಕೃಷಿಕ ಸಮಾಜದ ರೈತ ಪರವಾದ ಎಲ್ಲ ಕಾರ್ಯಯೋಜನೆಗಳಿಗೂ ನನ್ನ ಸಹಕಾರ ಇರುತ್ತದೆ ಎಂದರು.

ನರೇಗಾ ಯೋಜನೆಯಡಿ ಕೃಷಿಹೊಂಡ ನಿರ್ಮಾಣವನ್ನು ಕೈಬಿಟ್ಟಿರುವ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಯಾವುದೇ ಯೋಜನೆಗಳು ಜಾರಿಗೊಂಡರೂ ಅದರಲ್ಲಿ ಒಂದಷ್ಟು ಲೋಪಗಳು ಇದ್ದೇ ಇರುತ್ತವೆ. ಅಧಿಕಾರಿಗಳು ಯೋಜನೆಗಳ ಅನುಷ್ಠಾನದ ವೇಳೆ ಕಂಡು ಬರುವ ಲೋಪ ಸರಿಪಡಿಸಬೇಕು. ಅದನ್ನು ಬಿಟ್ಟು ಯೋಜನೆಯನ್ನೆ ಸ್ಥಗಿತಗೊಳಿಸುವುದು ಸರಿಯಲ್ಲ ಎಂದರು.

ಕೃಷಿ ಇಲಾಖೆ ಕೃಷಿ ಭಾಗ್ಯ ಯೋಜನೆಯಡಿ ಕೃಷಿಹೊಂಡ, ಬದುಗಳ ನಿರ್ಮಾಣ ಮತ್ತಿತರ ಕಾರ್ಯ ಯೋಜನೆಗಳನ್ನು ರೂಪಿಸಿದ್ದು ಇವುಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಜಿಲ್ಲೆಯಲ್ಲಿ ರೈತರು ಅತಿ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ಬೆಳೆ ಬೆಳೆಯುತ್ತಿದ್ದಾರೆ. ಅಡಿಕೆ ಬೆಳೆಗೆ ಮಂಡ್ಯ ಜಿಲ್ಲೆಯ ವಾಯುಗುಣವೂ ಸಹಕಾರಿಯಾಗಿದೆ ಎಂದರು.

ಮಂಡ್ಯ ಜಿಲ್ಲೆಯನ್ನು ಅಡಿಕೆ ಬೆಳೆ ಪ್ರದೇಶ ಎಂದು ಪರಿಗಣಿಸದಿರುವುದರಿಂದ ಅಡಿಕೆ ಬೆಳೆಗಾರರಿಗೆ ಸರ್ಕಾರದ ಯಾವುದೇ ಸವಲತ್ತುಗಳು ದೊರಕುತ್ತಿಲ್ಲ. ಈ ಬಗ್ಗೆ ರಾಜ್ಯ ಕೃಷಿ ಮತ್ತು ತೋಟಗಾರಿಕಾ ಸಚಿವರೊಂದಿಗೆ ಪ್ರಸ್ತಾಪಿಸಿ ಮಂಡ್ಯ ಜಿಲ್ಲೆಯನ್ನು ಅಡಿಕೆ ಕೃಷಿ ಕ್ಷೇತ್ರದ ವ್ಯಾಪ್ತಿಗೆ ತರಲು ಪ್ರಯತ್ನಿಸುತ್ತೇನೆ ಎಂದರು.

ಈ ವೇಳೆ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ್, ಸಹಾಯಕ ಕೃಷಿ ಅಧಿಕಾರಿ ಶ್ರೀಧರ್, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎ.ಎನ್.ಜಾನಕೀರಾಂ, ಉಪಾಧ್ಯಕ್ಷ ವಿ.ಎಸ್.ಸುಬ್ಬೇಗೌಡ, ರೈತ ಮುಖಂಡ ಎಲ್.ಬಿ.ಜಗದೀಶ್ , ಮಾಜಿ ಅಧ್ಯಕ್ಷ ಎ.ಎಸ್.ರಮೇಶ್ ಸೇರಿದಂತೆ ಹಲವರು ಇದ್ದರು.

Share this article