ಕನ್ನಡಪ್ರಭ ವಾರ್ತೆ ಮಾಗಡಿ
ತಾಲೂಕಿನಲ್ಲಿ ವಿವಿಧ ಇಲಾಖೆಗಳಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ತಹಸೀಲ್ದಾರ್ ಅವರು ಅಧಿಕಾರಿಗಳಿಗೆ ರೈತರ ಪರವಾಗಿ ಕೆಲಸ ಮಾಡುವಂತೆ ತಾಕಿತು ಮಾಡಬೇಕು. ಅಧಿಕಾರಿಗಳು ರೈತರ ಕೆಲಸ ಮಾಡದಿದ್ದರೆ ಕಚೇರಿಯಿಂದ ಹೊರಬರಲು ಬಿಡುವುದಿಲ್ಲ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಲೋಕೇಶ್ ಎಚ್ಚರಿಕೆ ನೀಡಿದರು.ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ತಹಸೀಲ್ದಾರ್ ಶರತ್ ಕುಮಾರ್ ಅಧ್ಯಕ್ಷತೆಯಲ್ಲಿ ರೈತ ಸಂಘದ ಸಭೆಯಲ್ಲಿ ಮಾತನಾಡಿದ ಅವರು, ರೈತ ಸಂಘದ ನಿರಂತರ ಹೋರಾಟದ ಫಲವಾಗಿ ತಹಸೀಲ್ದಾರ್ ಅವರು ಅಧಿಕಾರಿಗಳ ಸಭೆಯನ್ನು ಕರೆದಿರುವುದಕ್ಕೆ ತಹಸೀಲ್ದಾರ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ. ತಾಲೂಕಿನಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಈಗಾಗಲೇ ಹೋರಾಟದ ಮೂಲಕ ಮನವಿ ಸಲ್ಲಿಸಿದ್ದು, ನಮ್ಮ ಬೇಡಿಕೆಗಳನ್ನು ಅಧಿಕಾರಿಗಳು ಬಗೆಹರಿಸುವ ಕೆಲಸ ಮಾಡಬೇಕು ಎಂದರು.
ಒಂದು ವೇಳೆ ರೈತರ ಕೆಲಸವನ್ನು ಅಧಿಕಾರಿಗಳು ಮಾಡದೆ ನಿರ್ಲಕ್ಷ್ಯ ಮಾಡಿದರೆ ಅಂತಹ ಅಧಿಕಾರಿಗಳ ವಿರುದ್ಧ ರೈತ ಸಂಘ ನಿರಂತರವಾಗಿ ಹೋರಾಟ ಮಾಡಬೇಕಾಗುತ್ತದೆ. ರೈತರ ಪರವಾಗಿ ಅಧಿಕಾರಿಗಳು ಕೆಲಸ ಮಾಡಿದರೆ ಸಲ್ಲಿಸುವ ಕೆಲಸವನ್ನು ಕೂಡ ಮಾಡುತ್ತೇವೆ ಎಂದು ತಿಳಿಸಿದರು.ಕೆಪಿಟಿಸಿಎಲ್ ವತಿಯಿಂದ ಕಳೆದ 40 ವರ್ಷಗಳ ಹಿಂದೆ ರೈತರ ಜಮೀನಿನಲ್ಲಿ ದೊಡ್ಡ ಕಂಬಗಳನ್ನು ಹಾಕಿ ಪರಿಹಾರವನ್ನು ಕೊಟ್ಟಿಲ್ಲ. ಈಗ ಮತ್ತೊಮ್ಮೆ ಹೊಸ ಕಂಬಗಳನ್ನು ಹಾಕಬೇಕಾಗಿದ್ದು ರೈತರಿಗೆ ಪರಿಹಾರ ನೀಡಿ ಹೊಸ ಕಂಬಗಳನ್ನು ಹಾಕುವ ಕೆಲಸವನ್ನು ಇಲಾಖೆಯವರು ಮಾಡಬೇಕು. ರೈತರ ಜಮೀನಿನಲ್ಲಿ ಹಾದು ಹೋಗಿರುವ ಎಲ್ಲಾ ರೈತರನ್ನು ಒಟ್ಟಿಗೆ ಸೇರಿಸುತ್ತೇವೆ. ಅಧಿಕಾರಿಗಳು ಬಂದು ರೈತರಿಗೆ ಪರಿಹಾರ ನೀಡುವ ಕೆಲಸ ಮಾಡಿ ಕಾಮಗಾರಿ ಆರಂಭಿಸಬೇಕು. ಇಲ್ಲವಾದರೆ ರೈತರ ಜಮೀನಿಗೆ ಯಾವುದೇ ಕಾರಣಕ್ಕೂ ಕೆಪಿಟಿಸಿಎಲ್ ಅಧಿಕಾರಿಗಳನ್ನು ಸೇರಿಸುವುದಿಲ್ಲ ಎಂದು ನೆಲಮಂಗಲ ಕೆಪಿಟಿಸಿಎಲ್ ಎಇಇ ಮ್ಯಾಕ್ಸ್ವೆಲ್ಗೆ ಲೋಕೇಶ್ ಎಚ್ಚರಿಕೆ ನೀಡಿದರು.ಎಇಇ ಮ್ಯಾಕ್ಸ್ ವೆಲ್ ಮಾತನಾಡಿ, ರೈತರ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರಲಾಗಿದ್ದು, ರೈತರಿಗೆ ಪರಿಹಾರ ನೀಡಿ ಹೊಸದಾಗಿ ಕಂಬ ಹಾಕುವಂತೆ ಅಧಿಕಾರಿಗಳು ಸೂಚನೆ ನೀಡಿದೆ. ಮೇಲಾಧಿಕಾರಿಗಳು ಯಾವಾಗ ದಿನಾಂಕ ನಿಗದಿ ಮಾಡುತ್ತಾರೆ ಅಂದು ರೈತರ ಜೊತೆ ಸಭೆ ಮಾಡಿ ಕಾಮಗಾರಿ ಆರಂಭಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ತಹಸೀಲ್ದಾರ್ ಶರತ್ ಕುಮಾರ್ ಮಾತನಾಡಿ, ರೈತರ ಬೇಡಿಕೆಯಂತೆ ಅಧಿಕಾರಿಗಳ ಸಭೆಯನ್ನು ಕರೆಯಲಾಗಿದ್ದು ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಪತ್ರ ಬರೆಯಲಾಗುತ್ತದೆ. ರೈತರು ನೀಡಿರುವ ಸಮಸ್ಯೆಗಳ ಬಗ್ಗೆ ಇಲಾಖೆಯ ಅಧಿಕಾರಿಗಳು ಆದಷ್ಟು ಬೇಗ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದರು.