ಕೆರೆಗುರುಳಿದ ಓಮ್ನಿ: 7 ಮಂದಿ ಪವಾಡಸದೃಶ ಪಾರು

KannadaprabhaNewsNetwork |  
Published : Jan 18, 2024, 02:00 AM IST
ಕೆರೆಗುರುಳಿದ ಮಾರುತಿ ವ್ಯಾನ್‌: ವ್ಯಾನ್‌ನಲ್ಲಿದ್ದ ಎಂಟು ಮಂದಿ ಪವಾಡಸದೃಶ ರೀತಿಯಲ್ಲಿ ಪಾರು! | Kannada Prabha

ಸಾರಾಂಶ

ಬುಧವಾರ ಸಂಜೆ ೪.೩೦ರ ಸಮಯದಲ್ಲಿ ಬೇಕನಳ್ಳಿಯಿಂದ ಸೋಮವಾರಪೇಟೆ ಕಡೆ ತೆರಳುತ್ತಿದ್ದ ನಿವೃತ್ತ ಉಪನ್ಯಾಸಕ ಶಿವಣ್ಣ ಚಲಾಯಿಸುತ್ತಿದ್ದ ಓಮ್ನಿ ಎದುರಿನಿಂದ ಬಂದ ಜೀಪಿಗೆ ದಾರಿ ಬಿಡಲು ಕೆರೆ ಬದಿಗೆ ಸರಿಸಿದರು. ಈ ಸಂದರ್ಭ ನಿಯಂತ್ರಣ ಕಳೆದುಕೊಂಡ ವ್ಯಾನ್‌ ನೇರವಾಗಿ ಕೆರೆಗೆ ಉರುಳಿದೆ. ಸ್ಥಳೀಯರ ಸಕಾಲಿಕ ಕಾರ್ಯಾಚರಣೆಯಲ್ಲಿ ಓಮ್ನಿಯಲ್ಲಿದ್ದ ಏಳು ಮಂದಿ ಅಪಾಯದಿಂದ ಪಾರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಇಲ್ಲಿಗೆ ಸಮೀಪದ ಯಡೂರು ಗ್ರಾಮದ ಮಾವಿನಕೆರೆ ಬಳಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಮಾರುತಿ ಓಮ್ನಿ ವ್ಯಾನ್‌ ಉರುಳಿದ್ದು, ವ್ಯಾನ್‌ನಲ್ಲಿದ್ದ ಏ‍ಳು ಮಂದಿ ಪವಾಡಸದೃಶ ರೀತಿಯಲ್ಲಿ ಪಾರಾಗಿರುವ ಘಟನೆ ಬುಧವಾರ ಸಂಜೆ ನಡೆದಿದೆ.ಸಂಜೆ ೪.೩೦ರ ಸಮಯದಲ್ಲಿ ಬೇಕನಳ್ಳಿಯಿಂದ ಸೋಮವಾರಪೇಟೆ ಕಡೆ ತೆರಳುತ್ತಿದ್ದ ನಿವೃತ್ತ ಉಪನ್ಯಾಸಕ ಶಿವಣ್ಣ ಚಲಾಯಿಸುತ್ತಿದ್ದ ಓಮ್ನಿ ಎದುರಿನಿಂದ ಬಂದ ಜೀಪಿಗೆ ದಾರಿ ಬಿಡಲು ಕೆರೆ ಬದಿಗೆ ಸರಿಸಿದರು. ಈ ಸಂದರ್ಭ ನಿಯಂತ್ರಣ ಕಳೆದುಕೊಂಡ ವ್ಯಾನ್‌ ನೇರವಾಗಿ ಕೆರೆಗೆ ಉರುಳಿದೆ. ವ್ಯಾನ್‌ನಲ್ಲಿದ್ದ ತೋಟದ ಕೆಲಸಕ್ಕೆ ಬಂದಿದ್ದ ಮಹಿಳಾ ಕಾರ್ಮಿಕರಾದ ಮದಲಾಪುರದ ಜ್ಯೋತಿ, ಲಕ್ಷ್ಮಿ, ಮನು, ಸೀತಮ್ಮ, ರತಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹೆಚ್ಚಿನ ಅಪಾಯದಿಂದ ಪಾರಾಗಿದ್ದಾರೆ.

ಶಿವಣ್ಣ ತಮ್ಮ ತೋಟದಲ್ಲಿ ಕಾಫಿ ಕೊಯ್ಲು ಮಾಡಿಸಿ, ಸಂಜೆ ಸಮಯದಲ್ಲಿ ಯಡೂರು ಮಾರ್ಗವಾಗಿ ಬರುವಾಗ ಗ್ರಾಮದ ದೇವರಕೆರೆಗೆ ಓಮ್ನಿ ಮಗುಚಿದೆ. ಶಿವಣ್ಣ ಅವರ ಪತ್ನಿ ನಿವೃತ್ತ ಮುಖ್ಯೋಪಾಧ್ಯಾಯಿನಿ ಲೀಲಾವತಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪಾರಾಗಿದ್ದಾರೆ.

ವ್ಯಾನ್‌ ಕೆರೆಗೆ ಉರುಳಿದ ಸಂದರ್ಭ ಮಾವಿನಕರೆಯ ಬಳಿಯಿರುವ ಗ್ರಾಮಸ್ಥರು ತಕ್ಷಣ ಸಹಾಯಕ್ಕೆ ಧಾವಿಸಿದರು. ಮುಳುಗಡೆ ಹಂತದಲ್ಲಿದ್ದ ವಾಹನದ ಹಿಂಭಾಗದ ಗಾಜು ಒಡೆದು ಎಲ್ಲರನ್ನೂ ರಕ್ಷಿಸಿದ್ದಾರೆ. ಇದರಿಂದಾಗಿ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ. ಕೂಡಲೇ ಗಾಯಗೊಂಡವರನ್ನು ಸೋಮವಾರಪೇಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ತಕ್ಷಣ ಸ್ಥಳೀಯರು ನೆರವಾಗದಿದ್ದಾರೆ ಭಾರಿ ಅನಾಹುತ ಸಂಭವಿಸುತ್ತಿತ್ತು ಎಂದು ಸ್ಥಳೀಯರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಗ್ರಾಮಸ್ಥರು ಮತ್ತು ನಾಗರಿಕರ ಸಹಾಯದಿಂದ ಕ್ರೇನ್‌ನ ಮೂಲಕ ವ್ಯಾನ್‌ ಹೊರತೆಗೆಯಲಾಯಿತು.ಅಪಾಯಕಾರಿ ಕೆರೆಗೆ ರಕ್ಷಣಾ ಬೇಲಿ ಇಲ್ಲ: ನೀರಾವರಿ ಕೆರೆಯಾಗಿರುವ ಕಾರಣ ಹೂಳೆತ್ತಿರುವುದರಿಂದ ತುಂಬ ಆಳವಾಗಿದೆ. ರಾಜ್ಯಹೆದ್ದಾರಿಯಲ್ಲಿ ಕೆರೆ ಇದ್ದರೂ ಕೆರೆಯ ತಟದಲ್ಲಿ ರೇಲಿಂಗ್ಸ್ ಅಳವಡಿಸದ ಹಿನ್ನೆಲೆಯಲ್ಲಿ ಅನಾಹುತಕ್ಕೆ ದಾರಿಯಾಗಿದೆ. ಮಲ್ಲಳ್ಳಿ ಜಲಪಾತ, ಪುಷ್ಪಗಿರಿ ಗೆ ತೆರಳಲು ಪ್ರವಾಸಿಗರು ಇದೇ ರಸ್ತೆ ಅವಲಂಬಿಸಬೇಕಾಗಿದೆ. ಇನ್ನಾದರೂ ಲೋಕೋಪಯೋಗಿ ಇಲಾಖೆ ಕೆರೆಯ ಸುತ್ತ ಭದ್ರತಾ ಬೇಲಿ ಅಳವಡಿಸಬೇಕೆಂದು ಯಡೂರು ಗ್ರಾಮಸ್ಥರು ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ