ಕನ್ನಡಪ್ರಭ ವಾರ್ತೆ ಭಾರತೀನಗರ
ಜಿಲ್ಲೆಯ ಪ್ರವಾಸಿತಾಣ ಹಾಗೂ ಧಾರ್ಮಿಕ ಕ್ಷೇತ್ರ ಹನುಮಂತನಗರದ ಶ್ರೀಆತ್ಮಲಿಂಗೇಶ್ವರ, ದೊಡ್ಡರಸಿನಕೆರೆ ಸಣ್ಣಕ್ಕಿರಾಯಸ್ವಾಮಿ, ಅಂತರವಳ್ಳಿ ಬೆಟ್ಟದ ಸಿದ್ದೇಶ್ವರ ಪುಣ್ಯ ಕ್ಷೇತ್ರದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ.5 ದಿನಗಳ ಕಾಲ ಅದ್ಧೂರಿಯಾಗಿ ಜರುಗುವ ಜಾತ್ರೆಗೆ ಸುತ್ತ-ಮುತ್ತಲ ಗ್ರಾಮಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಲಿದೆ.
32ನೇ ವರ್ಷದ ಭಾರಿ ದನಗಳ ಜಾತ್ರೆಗೆ ಶಿವರಾತ್ರಿ ಅಂಗವಾಗಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಿಗೆ ಬುಧವಾರ ಚಾಲನೆ ದೊರೆತಿದೆ. ಜಾತ್ರೆ ಹಿನ್ನೆಲೆಯಲ್ಲಿ ಮಾರ್ಚ್ 8ರ ಮಹಾಶಿವರಾತ್ರಿಯ ಅಂಗವಾಗಿ ಬೆಳಗ್ಗೆ ಗಣಪತಿ ಪೂಜೆ, ಶ್ರೀಆತ್ಮಲಿಂಗೇಶ್ವರಸ್ವಾಮಿಗೆ ಪಂಚಾಮೃತಾಭಿಷೇಕ ಮತ್ತು ಪೂಜಾ ಅಲಂಕಾರಗಳು, ರುದ್ರಹೋಮ, ಮಹಾ ಮಂಗಳಾರತಿ, ನಂತರ ಸಂಜೆಯಿಂದ ಬೆಳಗಿನ ಜಾವದ ವರೆಗೆ ಪೂಜಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ.ಪಾಂಡವಪುರದ ಗ್ರಾಮ ರಂಗ ಸಾಂಸೃತಿಕ ವೇದಿಕೆಯಿಂದ ಭಕ್ತಿ ಮತ್ತು ಜಾನಪದ ಗೀತೆ, 10 ಗಂಟೆಗೆ ಭೂಕೈಲಾಸ ಹರಿಕಥೆ ಮತ್ತು ದೇವಿಪುರ ಶ್ರೀರಾಮಾಂಜನೇಯ ಕಲಾ ಸಂಘದ ವತಿಯಿಂದ ದೊಣ್ಣೆವರಸೆ ತಳಗವಾದಿ ಶ್ರೀ ಚೌಡೇಶ್ವರಿ ಕಲಾ ಸಂಘದಿಂದ ಕೋಲಾಟ ಮತ್ತು ಮುಟ್ಟನಹಳ್ಳಿ, ಕರಡಕೆರೆ, ಗೌಡಯ್ಯನದೊಡ್ಡಿ, ಮಣಿಗೆರೆ, ತಳಗವಾದಿ, ಪಾಂಡವಪುರ ಮಂಡ್ಯದ ಹೊಸಹಳ್ಳಿ ಗ್ರಾಮದವರಿಂದ ಅಖಂಡ ಭಜನೆ ಮತ್ತು ಭಕ್ತ ಪ್ರದಾನ ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿದೆ.
ಮಾ.10 ರಂದು ರಥೋತ್ಸವ ಜೊತೆ ಕೆ.ಶೆಟ್ಟಹಳ್ಳಿ ಶ್ರೀ ಬೈರವೇಶ್ವರ ಸ್ವಾಮಿ ಮತ್ತು ಮಾರಮ್ಮ, ಬಿದರಹಳ್ಳಿ ಶ್ರೀ ಕಬ್ಬಾಳಮ್ಮ, ಮಾದರಹಳ್ಳಿ ದೇವಮ್ಮ ಮತ್ತು ಕಾಳಮ್ಮ, ಚಿಕ್ಕರಸಿನಕೆರೆ ಶ್ರೀ ಕಾಲಬೈರವೇಶ್ವರ, ಅರೇಚಾಕನಹಳ್ಳಿ ಶ್ರೀ ಶಂಭುಲಿಂಗೇಶ್ವರ, ಕರಡಕೆರೆ ಶ್ರೀ ಆಂಜನೇಯ ಸ್ವಾಮಿಯ ಬಿರುದುಗಳು ಮತ್ತು ವೀರಗಾದೆ ಕುಣಿತ ಪಾಲ್ಗೊಳ್ಳಲಿವೆ. ಸಂಜೆ 4.30ಕ್ಕೆ ಕ್ಕೆ ಶ್ರೀಆತ್ಮಲಿಂಗೇಶ್ವರ ಧರ್ಮದರ್ಶಿ ಮಂಡಳಿ ವತಿಯಿಂದ ಉತ್ತಮ ರಾಸುಗಳಿಗೆ ಬಹುಮಾನ ವಿತರಿಸಲಾಗುವುದು.ತೆಪ್ಪೋತ್ಸವ:
ಮಾ.11 ರಂದು ರಾತ್ರಿ ಪಾವನ ಗಂಗಾದಲ್ಲಿ ತೆಪ್ಪೋತ್ಸ ಹಾಗೂ ಶಯನೋತ್ಸವ ಜರುಗಲಿದೆ ಎಂದು ಭಾರತೀ ಎಜುಕೇಷನ್ ಟ್ರಸ್ಟ್ನ ಅಧ್ಯಕ್ಷ ಹಾಗೂ ಶ್ರೀಆತ್ಮಲಿಂಗೇಶ್ವರ ಕ್ಷೇತ್ರದ ಅಧ್ಯಕ್ಷ ಮಧು ಜಿ.ಮಾದೇಗೌಡ ತಿಳಿಸಿದ್ದಾರೆ.ಮಹಾಶಿವರಾತ್ರಿ ಅಂಗವಾಗಿ ದೊಡ್ಡರಸಿನಕೆರೆ ಸಣ್ಣಕ್ಕಿರಾಯಸ್ವಾಮಿ, ಅಂತರವಳ್ಳಿ ಶ್ರೀ ಭೈರೇಶ್ವರ, ಸಿದ್ದೇಶ್ವರ ಸ್ವಾಮಿ , ಶಂಭುಲಿಂಗೇಶ್ವರ ದೇವರುಗಳಿಗೆ ಪೂಜೆ , ಮಾರನೇ ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ.