ಒಂದು ರಾಷ್ಟ್ರ-ಒಂದು ಚುನಾವಣೆ ಭಾರತೀಯರ ಹೃದಯ ಬಡಿತ

KannadaprabhaNewsNetwork | Published : Mar 25, 2025 12:47 AM

ಸಾರಾಂಶ

ಚಿತ್ರದುರ್ಗದ ಡಾನ್ ಬಾಸ್ಕೋ ಕಾಲೇಜಿನಲ್ಲಿ ಏರ್ಪಡಿಸಿದ್ದ ವಿಕಸಿತ ಭಾರತ ಯುವ ಸಂಸತ್ತು ಯುವಕರ ಭಾಷಣ ಸ್ಪರ್ದೆ ಕಾರ್ಯಕ್ರಮದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ಸಂಸದ ಗೋವಿಂದ ಕಾರಜೋಳ ನೀಡಿದರು.

ವಿಕಸಿತ ಭಾರತ ಯುವ ಸಂಸತ್ತು ಯುವಕರ ಭಾಷಣ ಸ್ಪರ್ಧೆ ಕಾರ್ಯಕ್ರಮದಲ್ಲಿ ಸಂಸದ ಗೋವಿಂದ ಕಾರಜೋಳಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಲೋಕಸಭೆ ಹಾಗೂ ಎಲ್ಲಾ ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವುದೇ ಒಂದು ರಾಷ್ಟ್ರ-ಒಂದು ಚುನಾವಣೆಯ ಪ್ರಮುಖ ಉದ್ದೇಶವಾಗಿದೆ, ಇದು ನರೇಂದ್ರ ಮೋದಿಜಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಾ ಯೋಜನೆಯಾಗಿದ್ದು ಇದು ಕೇವಲ ಒಂದು ಘೋಷಣೆಯಲ್ಲ ಬದಲಾಗಿ 140 ಕೋಟಿ ಭಾರತೀಯರ ಹೃದಯ ಬಡಿತವಾಗಿದೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.

ಚಿತ್ರದುರ್ಗದ ಡಾನ್ ಬಾಸ್ಕೋ ಕಾಲೇಜಿನಲ್ಲಿ ಭಾರತ ಸರ್ಕಾರದ ಕ್ರೀಡಾ ಸಚಿವಾಲಯ, ನೆಹರು ಯುವಕೇಂದ್ರ, ದಾವಣಗೆರೆ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಏರ್ಪಡಿಸಿದ್ದ ವಿಕಸಿತ ಭಾರತ ಯುವ ಸಂಸತ್ತು ಯುವಕರ ಭಾಷಣ ಸ್ಪರ್ಧೆ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.

ದೇಶದಲ್ಲಿ ಚುನಾವಣೆ ಪ್ರಕ್ರಿಯೆಯನ್ನು ಸುಗಮಗೊಳಿಸುವ ಪದೇ ಪದೇ ಚುನಾವಣೆಗಳು ನಡೆಯುವುದಕ್ಕೆ ತಡೆ ಒಡ್ಡುವ ಸಮಯ ಹಾಗೂ ಸಂಪನ್ಮೂಲಗಳನ್ನು ಉಳಿಸುವ ಉದ್ದೇಶ ಈ ಯೋಜನೆಯ ಹಿಂದಿದೆ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ಭಾರತದಲ್ಲಿ ಈಗಾಗಲೇ ಅತ್ಯಂತ ಯಶಸ್ವಿಯಾಗಿ ಚುನಾವಣೆಗಳನ್ನು ನಡೆಸಿರುವ ಹಿನ್ನೆಲೆಯಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆ ಪ್ರಕ್ರಿಯೆ ನಮ್ಮ ದೇಶಕ್ಕೆ ಸವಾಲಾಗಲಾರದು ಎನ್ನುವುದು ನನ್ನ ಅನಿಸಿಕೆಯಾಗಿದೆ ಎಂದರು.

ದೇಶದಲ್ಲಿ ದುಡಿಯುವ ಯುವಕರ ಸಂಖ್ಯೆ ಅಂದರೆ 16 ರಿಂದ 24ನೇ ವಯಸ್ಸಿನ ದುಡಿಯುವ ಯುವಕರ ಸಂಖ್ಯೆ ಒಟ್ಟಾರೆ ಜನಸಂಖ್ಯೆಯ ಶೇ.61 ರಷ್ಟಿದೆ, ಇಡೀ ಪ್ರಪಂಚದಲ್ಲಿಯೇ ಅತಿ ಹೆಚ್ಚು ದುಡಿಯುವ ಯುವಕರನ್ನು ಹೊಂದಿರುವ ದೇಶ ಭಾರತವಾಗಿದೆ. ಈ ಸಂಖ್ಯೆಯನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂಬುದು ಮೋದಿ ಯವರ ಬಯಕೆಯಾಗಿದೆ. ಈ ಉದ್ದೇಶಕ್ಕಾಗಿಯೇ ಪ್ರತಿಯೊಂದು ಜಿಲ್ಲೆಗಳನ್ನು ಪ್ರಧಾನಮಂತ್ರಿ ಕೌಶಲ್ಯ ಕೇಂದ್ರಗಳನ್ನು ತೆರೆದು ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಕೌಶಲ್ಯ ತರಬೇತಿಯನ್ನು ನೀಡಿ ದುಡಿಯುವ ಕೈಗಳಿಗೆ ಉದ್ಯೋಗ ದೊರಕಿಸಿಕೊಡುವ ಕೆಲಸವನ್ನು ಮೋದಿಜಿ ಮಾಡಿದ್ದಾರೆ. ಯಾವ ರೀತಿ ಅಮೇರಿಕಾದಲ್ಲಿ ವಿಶ್ವದ ಎಲ್ಲಾ ದೇಶಗಳ ಜನರು ಉದ್ಯೋಗ ಮಾಡುತ್ತಿದ್ದಾರೋ ಅದೇ ರೀತಿ 2030 ರ ವೇಳೆಗೆ ವಿಶ್ವದ 195 ದೇಶಗಳಲ್ಲಿಯೂ ಭಾರತದ ಕೌಶಲ್ಯ ಭರಿತ ಯುವಕರು ಕೆಲಸ ಮಾಡುವಂತಾಗಬೇಕು ಎಂಬುದು ಮೋದಿಜಿಯವರ ಕನಸಾಗಿದೆ. ಭಾರತವನ್ನು ವಿಶ್ವದ ಕೌಶಲ್ಯ ರಾಜಧಾನಿಯನ್ನಾಗಿ ಮಾಡುವುದು ಮೋದಿಜಿ ಕನಸಾಗಿದೆ ಎಂದು ಹೇಳಿದರು.

ಇಂದಿನ ಯುವಕರು ತಮ್ಮ ತಮ್ಮ ಬದುಕನ್ನು ರೂಪಿಸಿಕೊಂಡರೇ ಮಾತ್ರ ಸಾಲದು, ಯುವಕರು ಈ ದೇಶದ ಅಭಿವೃದ್ದಿಯಲ್ಲಿ ಪಾಲುದಾರರಾಗಬೇಕು. ಭಾರತದ ಭವಿಷ್ಯದ ರಾಯಭಾರಿಗಳಾಬೇಕು, ಈಗಾದಾಗ ಮಾತ್ರ ಸಮೃದ್ಧ ಭಾರತವನ್ನು ನಿರ್ಮಾಣ ಮಾಡಲು ಸಾಧ್ಯ, ಈ ನಿಟ್ಟಿನಲ್ಲಿ ಪ್ರಧಾನಿಗಳು 2024ರ ಸ್ವಾತಂತ್ರೋತ್ಸವ ಭಾಷಣದಲ್ಲಿ ಈ ದೇಶದ 1 ಲಕ್ಷ ಯುವಕರನ್ನು ರಾಜಕಾರಣ ಮಾಡಲು ಆಹ್ವಾನಿಸಿದರು. ಯುವಕರು ಹೆಚ್ಚು ಹೆಚ್ಚು ರಾಜಕಾರಣಕ್ಕೆ ಬರಬೇಕು, ಶುದ್ಧ ರಾಜಕಾರಣದ ಅವಶ್ಯಕತೆ ಈ ದೇಶಕ್ಕೆ ತುಂಬಾ ಇದೆ ಎಂದು ಹೇಳಿದ್ದರು ಎಂದು ಸಂಸದರು ಸ್ಮರಿಸಿದರು.

ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯಿಂದ ಭಾಗವಹಿಸಿದ್ದ ಸುಮಾರು 200 ವಿದ್ಯಾರ್ಥಿ-ವಿದ್ಯಾರ್ಥಿನಿರಲ್ಲಿ 10 ಜನರು ರಾಜ್ಯ ಮಟ್ಟಕ್ಕೆ ಆಯ್ಕೆಯಾದರು, ಇವರನ್ನೆಲ್ಲಾ ಅಭಿನಂದಿಸಿದ ಸಂಸದರು ನಿಮ್ಮ ಪಯಣ ಉಜ್ವಲವಾಗಿರಲಿ ಎಂದು ಹಾರೈಸಿದರು. ಇದೇ ಸಂದರ್ಭದಲ್ಲಿ ಆಯ್ಕೆಯಾದ 10 ಜನ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಹಾಗೂ ತೀರ್ಪುಗಾರರಾಗಿ ಕೆಲಸ ನಿರ್ವಹಿಸಿದವರನ್ನು ಸನ್ಮಾನಿಸಿದರು.

ಸಮಾರಂಭದಲ್ಲಿ ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜಪೀರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಮಾಧುರಿ ಗಿರೀಶ್, ಮದುಗಿರಿ ಅಧ್ಯಕ್ಷ ಹನುಮಂತೇಗೌಡ, ವಿ.ಎಂ.ಮ್ಯಾಥ್ಯೂ, ಆಡಳಿತಾಧಿಕಾರಿಗಳು ಡಾನ್‌ ಬಾಸ್ಕೋ ಕಾಲೇಜು, ಸುಹಾಸ್ ನೆಹರು ಯುವ ಕೇಂದ್ರ ಚಿತ್ರದುರ್ಗ ಸೇರಿದಂತೆ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Share this article