ಆಪರೇಷನ್ ಸಿಂದೂರ ಯಶಸ್ವಿ; ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಅರ್ಚನೆ

KannadaprabhaNewsNetwork | Published : May 9, 2025 12:41 AM
ಆಪರೇಷನ್ ಸಿಂದೂರ ಯಶಸ್ವಿಗೊಳಿಸಿದ ಭಾರತೀಯ ಸೇನೆಗೆ ಒಳಿತಾಗಲಿ ಎಂದು ಹಾರೈಸಿ ಜಿಲ್ಲೆಯ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಗುರುವಾರ ವಿಶೇಷ ಪೂಜಾ ಕೈಂಕರ್ಯ ಜರುಗಿದವು.
Follow Us

ಕನ್ನಡಪ್ರಭ ವಾರ್ತೆ ಬಳ್ಳಾರಿ

ಆಪರೇಷನ್ ಸಿಂದೂರ ಯಶಸ್ವಿಗೊಳಿಸಿದ ಭಾರತೀಯ ಸೇನೆಗೆ ಒಳಿತಾಗಲಿ ಎಂದು ಹಾರೈಸಿ ಜಿಲ್ಲೆಯ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಗುರುವಾರ ವಿಶೇಷ ಪೂಜಾ ಕೈಂಕರ್ಯ ಜರುಗಿದವು.

ಸರ್ಕಾರದ ಆದೇಶ ಹಿನ್ನೆಲೆ ಇಲಾಖೆಯ ಅಧಿಕಾರಿಗಳು ಜಿಲ್ಲೆಯ ದೇವಸ್ಥಾನಗಳಲ್ಲಿ ಭಾರತೀಯ ಸೇನೆ ಹಾಗೂ ಯೋಧರ ಹೆಸರಿನಲ್ಲಿ ಪೂಜೆ, ಅಭಿಷೇಕ ಹಾಗೂ ಅರ್ಚನೆ ಜರುಗಿದವು.

ನಗರದ ಶ್ರೀ ಕನಕದುರ್ಗಮ್ಮ, ಬ್ರಾಹ್ಮಣಬೀದಿಯ ಲಕ್ಷ್ಮಿನಾರಾಯಣ, ತೇರುಬೀದಿಯ ನಾಗೇಶ್ವರಸ್ವಾಮಿ, ಅಗ್ನಿಶಾಮಕ ದಳ ಕಚೇರಿ ಬಳಿಯ ಶ್ರೀಕುಮಾರಸ್ವಾಮಿ ದೇವಸ್ಥಾನ, ಕೋಟೆ ಮಲ್ಲೇಶ್ವರಸ್ವಾಮಿ, ಕೋಟೆ ಆಂಜಿನೇಯಸ್ವಾಮಿ, ತಾಲೂಕಿನ ಎತ್ತಿನಬೂದಿಹಾಳು ಕಟ್ಟೆಬಸವೇಶ್ವರ, ರೂಪನಗುಡಿ ಶ್ರೀವೆಂಕಟರಮಣಸ್ವಾಮಿ, ಕುಡಿತಿನಿ ಆಂಜಿನೇಯಸ್ವಾಮಿ ದೇವಸ್ಥಾನ, ಸಿರುಗುಪ್ಪ ತಾಲೂಕಿನ ದರೂರು ವೀರಭದ್ರೇಶ್ವರ, ಬಲಕುಂದಿ ಬನ್ನಿಮಹಾಂಕಾಳಮ್ಮ, ತೆಕ್ಕಲಕೋಟೆಯ ವರವಿನ ಮಲ್ಲೇಶ್ವರಸ್ವಾಮಿ, ಸಂಡೂರು ತಾಲೂಕಿನ ಬೊಮ್ಮಘಟ್ಟ ಹುಲಿಕುಂಟೇಶ್ವರ, ಆಂಜಿನೇಯಸ್ವಾಮಿ ದೇವಸ್ಥಾನ, ಕುರುಗೋಡಿನ ಶ್ರೀ ದೊಡ್ಡಬಸವೇಶ್ವರ ದೇವಸ್ಥಾನ ಸೇರಿದಂತೆ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಜಿಲ್ಲೆಯ 619 ದೇವಸ್ಥಾನಗಳಲ್ಲಿ ಪೂಜೆ ಹಾಗೂ ಅರ್ಚನೆ ಜರುಗಿದವು. ಈ ಕುರಿತು ಕನ್ನಡಪ್ರಭ ಜೊತೆ ಮಾತನಾಡಿದ ಧಾರ್ಮಿಕ ದತ್ತಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ, ಸರ್ಕಾರದ ಆದೇಶದ ಹಿನ್ನೆಲೆ ಇಲಾಖೆ ವ್ಯಾಪ್ತಿಯ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು. ಸಾರ್ವಜನಿಕರು ಸಹ ಪೂಜೆಯಲ್ಲಿ ಪಾಲ್ಗೊಳ್ಳುವ ಮೂಲಕ ಭಾರತದ ಸೇನೆ ಹಾಗೂ ಭಾರತೀಯ ಯೋಧರಿಗೆ ಒಳಿತಾಗಲಿ ಎಂದು ಹಾರೈಸಿದರು ಎಂದು ತಿಳಿಸಿದರು. ಹೊಪಸೇಟೆಯ ದೇವಾಲಯಗಳಲ್ಲಿ ವಿಶೇಷ ಪೂಜೆ:

ಪಹಲ್ಗಾಂನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿದ ಉಗ್ರರ ಹೇಯ ಕೃತ್ಯಕ್ಕೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್‌ ಸಿಂದೂರ ಕಾರ್ಯಾಚರಣೆ ಹಿನ್ನೆಲೆ ಭಾರತೀಯ ಸೈನಿಕರಿಗೆ ದೇವರು ಬಲ ನೀಡಲಿ ಎಂದು ಹೊಸಪೇಟೆ ಜಿಲ್ಲೆಯ ಮುಜರಾಯಿ ಇಲಾಖೆಯ ದೇವಾಲಯಗಳಲ್ಲಿ ಅರ್ಚಕರು ವಿಶೇಷ ಪೂಜೆ ಸಲ್ಲಿಸಿದರು.ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇವಾಲಯ, ಮೈಲಾರದ ಶ್ರೀ ಮೈಲಾರಲಿಂಗೇಶ್ವರ ದೇಗುಲ, ಕುರುವತ್ತಿ ಮಲ್ಲಿಕಾರ್ಜುನ ಬಸವೇಶ್ವರ ದೇಗುಲ, ಮದಲಗಟ್ಟ ಆಂಜನೇಯ ದೇವಸ್ಥಾನ, ಕೊಟ್ಟೂರಿನ ಶ್ರೀ ಗುರು ಬಸವೇಶ್ವರ, ಬುಕ್ಕಸಾಗರದ ಏಳುಹೆಡೆ ನಾಗಪ್ಪ, ಮಲಪನಗುಡಿ ಗಾಳಮ್ಮ, ಹೊಸಪೇಟೆ ಊರಮ್ಮ ದೇವಸ್ಥಾನ, ಜಂಜಂಬುನಾಥೇಶ್ವರ ದೇವಾಲಯ, ವಡಕರಾಯ ದೇಗುಲ, ಹೊಸೂರಿನ ಶ್ರೀ ಹೊಸೂರಮ್ಮದೇವಿ ದೇವಾಲಯ, ಹೊಸಪೇಟೆಯ ಜಂಜಂಬುನಾಥೇಶ್ವರ, ಮರಿಯಮ್ಮನಹಳ್ಳಿ ಆಂಜನೇಯ ಮತ್ತು ಲಕ್ಷ್ಮೀ ನಾರಾಯಣ ದೇವಸ್ಥಾನ ಸೇರಿದಂತೆ ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು ಎಂದು ಶ್ರೀವಿರೂಪಾಕ್ಷೇಶ್ವರ ಮತ್ತು ಮೈಲಾರ ದೇವಾಲಯಗಳ ಇಒ ಹನುಮಂತಪ್ಪ ತಿಳಿಸಿದ್ದಾರೆ.