ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ತಾಪಂ ಆವರಣದಲ್ಲಿ ಆರಂಭಗೊಂಡ ಸಾವಯವ ಸಂತೆಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಚಾಲನೆ ನೀಡಿದರು. ಸಾವಯವ ಬೇಸಾಯ ಪದ್ಧತಿ ಮೂಲಕ ಬೆಳೆದ ತರಕಾರಿ, ಹಣ್ಣುಗಳು, ಧಾನ್ಯಗಳನ್ನು ಸಂತೆಯಲ್ಲಿ ಮಾರಾಟ ಮಾಡಲಾಯಿತು. ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧಡೆಯಿಂದ ಆಗಮಿಸಿದ ರೈತರು ತಾವು ಬೆಳೆದ ತರಕಾರಿ ಹಣ್ಣುಗಳನ್ನು ಮಾರಾಟ ಮಾಡುವ ಮೂಲಕ ರೈತರು ಹಾಗೂ ಸಾರ್ವಜನಿಕರಿಗೆ ಸಾವಯವ ಬೇಸಾಯದ ಬಗ್ಗೆ ಅರಿವು ಮೂಡಿಸಿದರು.
15 ದಿನಕ್ಕೊಮ್ಮೆ ಸೋಮವಾರ ತಾಪಂ ಆವರಣದಲ್ಲಿ ಸಾವಯವ ಸಂತೆ ನಡೆಸಲು ತೀರ್ಮಾನಿಸಲಾಗಿದ್ದು, ರೈತರು ಸಾವಯವ ಬೇಸಾಯ ಮಾಡಿ ಬೆಳೆದ ಬೆಳೆಗಳು, ಹಣ್ಣು, ಧಾನ್ಯಗಳನ್ನು, ಬೆಲ್ಲ, ಸಿಹಿತಿಂಡಿ ತಿನ್ನಿಸ್ಸು, ಸೋಪ್ಪು-ತರಕಾರಿಗಳನ್ನು ಮಾರಾಟ ಮಾಡಬಹುದಾಗಿದೆ.ಸಾವಯವ ಸಂತೆ ಬೆಳಗೂಳದ ರೈತ ಡಾ.ರಾಮಕೃಷ್ಣ ಅವರು ಸುಮಾರು 71 ತಳಿಯ ಮಾತುಗಳನ್ನು ತಂದು ಪ್ರದರ್ಶನಕ್ಕಿಟ್ಟಿದ್ದರು. ಅದರಲ್ಲಿ ಜಪಾನ್ ದೇಶದ ತಳಿಯಾದ ಮಿಯಾಜಾಕಿ ಎಂಬ ವಿಶೇಷ ತಳಿ ಪ್ರದರ್ಶನ ಮಾಡಿದ್ದರು. ಅಲ್ಲದೇ, ವಿವಿಧಡೆಯಿಂದ ಆಗಮಿಸಿದ್ದ ರೈತರು ಸಾವಯವ ಬೇಸಾಯದ ಮುಖಾಂತರ ಬೆಳೆದ ಭತ್ತ, ರಾಗಿ, ವಿವಿಧ ಧಾನ್ಯಗಳು, ಬೆಲ್ಲ, ಸಿಹಿತಿಂಡಿ, ಅಲಸು,ಮಾವು, ಬಾಳೆಹಣ್ಣು, ತರಕಾರಿಗಳು, ಸೋಪ್ಪುಗಳನ್ನು ಸಹ ಮಾರಾಟ ಮಾಡುವ ಮೂಲಕ ಗಮನ ಸೆಳೆದರು.
ಈ ವೇಳೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಸರ್ಕಾರ ಪಾಂಡವಪುರವನ್ನು ಸಾವಯವ ತಾಲೂಕು ಎಂಬುದಾಗಿ ಘೋಷಣೆ ಮಾಡಿದೆ. ಹಾಗಾಗಿ ನಮ್ಮ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸಾವಯವ ಕೃಷಿಯ ಕಡೆಗೆ ಮುಖ ಮಾಡಬೇಕು ಎಂದು ಮನವಿ ಮಾಡಿದರು.
ರೈತರು ಸ್ವಾವಲಂಬಿ ಬದುಕು ನಡೆಸುವ ಜತೆಗೆ ಆರ್ಥಿಕವಾದ ಸುಭದ್ರ ಬದುಕು ಕಟ್ಟಿಕೊಳ್ಳಬೇಕಾದರೆ ಸಾವಯವ ಕೃಷಿ ಅಗತ್ಯತೆ ಇದೆ. ಮನುಷ್ಯರ ಆರೋಗ್ಯದ ದೃಷ್ಟಿಯಿಂದ ಸಾವಯವ ಕೃಷಿಯ ಕಡೆಗೆ ಮುಖಮಾಡಿ ರೈತರಿಗೆ ಕಿವಿಮಾತು ಹೇಳಿದರು.
ಈ ವೇಳೆ ತಾಪಂ ಇಓ ವೀಣಾ, ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ಮಂಜುನಾಥ್, ಮಹಿಳಾ ಘಟಕದ ಅಧ್ಯಕ್ಷೆ ರೂಪನಿತಿನ್, ಪುರಸಭೆ ನಾಮಿನಿ ಸದಸ್ಯ ಮುರುಳಿ ಸೇರಿದಂತೆ ಅನೇಕರು ಹಾಜರಿದ್ದರು.