ಶೋಷಿತ ಸಮುದಾಯಗಳ ಜಾಗೃತಿಗಾಗಿ ಚಿತ್ರದುರ್ಗದಲ್ಲಿ ಜ.೨೮ರಂದು ಜಾಗೃತಿ ಸಮಾವೇಶ
ಅಪಾಯದ ಅಂಚಿನಲ್ಲಿರುವ ಸಂವಿಧಾನ ಉಳಿಸಿಕೊಳ್ಳಬೇಕಾಗಿರುವುದರಿಂದ ದಲಿತರು, ಹಿಂದುಳಿದವರು, ಶೋಷಿತರು, ಅಲ್ಪಸಂಖ್ಯಾತರು, ಆದಿವಾಸಿ, ಅಲೆಮಾರಿಗಳು ಒಗ್ಗಟ್ಟಿನಿಂದ ಇರಬೇಕಾಗುತ್ತದೆ. ಶೋಷಿತ ಸಮುದಾಯಗಳ ಜಾಗೃತಿಗಾಗಿ ಚಿತ್ರದುರ್ಗದಲ್ಲಿ ಜ.೨೮ರಂದು ಶೋಷಿತರ ಜಾಗೃತಿ ಸಮಾವೇಶ ಆಯೋಜಿಸಲಾಗಿದೆ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ .ರಾಮಚಂದ್ರಪ್ಪ ಹೇಳಿದರು.
ಇಲ್ಲಿನ ಜಿಲ್ಲಾ ಸರ್ಕಾರಿ ನೌಕರರ ಭವವನದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಶೋಷಿತರ ಜಾಗೃತಿ ಸಮಾವೇಶದ ಜಿಲ್ಲಾಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಚಿತ್ರದುರ್ಗದ ಮಾದರ ಚನ್ನಯ್ಯ ಗುರುಪೀಠದ ಪಕ್ಕದ ಮೈದಾನದಲ್ಲಿ ನಡೆಯುವ ಶೋಷಿತರ ಜಾಗೃತಿ ಸಮಾವೇಶ ಯಾರ ವಿರುದ್ಧವಾಗಿ ಅಲ್ಲ, ನಮ್ಮ ಹಕ್ಕು ಕಾಪಾಡಿಕೊಳ್ಳಲು ಮಾಡಲಾಗುತ್ತಿದೆ. ಕೆಲವರು ಕಾಂತರಾಜ್ ವರದಿಯನ್ನು ವಿರೋಧಿಸುವುದಾಗಿ ನಿರ್ಣಯ ತೆಗೆದುಕೊಳ್ಳುವ ಮೂಲಕ ನಮ್ಮ ಮೇಲೆ ಸವಾರಿ ಮಾಡುವುದಾಗಿ ಸಂದೇಶ ನೀಡಿದ್ದಾರೆ. ಈ ಸಮಾವೇಶವನ್ನು ಶೋಷಿತರು ಗಂಭೀರವಾಗಿ ತೆಗೆದುಕೊಳ್ಳಬೇಕು, ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯಗಳ ಜನರು ಭಾಗವಹಿಸಬೇಕೆಂದು ಮನವಿ ಮಾಡಿದರು.ಸಭೆಯಲ್ಲಿ ಅಖಿಲ ಕರ್ನಾಟಕ ಮಡಿವಾಳ ಸಮಾಜದ ರಾಜ್ಯಾಧ್ಯಕ್ಷ ನಂಜಪ್ಪ, ರಾಜ್ಯ ಕುರುಬರ ಸಂಘದ ಮಾಜಿ ಅಧ್ಯಕ್ಷ ಸುಬ್ರಮಣ್ಯ, ರಾಜ್ಯ ಮುಖಂಡರಾದ ರಾಮಕೃಷ್ಣ, ಕೃಷ್ಣಮೂರ್ತಿ ಕೆ.ಎಂ., ಕೃಷ್ಣಮೂರ್ತಿ ಜಿ, ಸ್ಥಳೀಯ ಮುಖಂಡರಾದ ರಮೇಶ ಆನವಟ್ಟಿ, ಬಸವರಾಜ ಹೆಡಿಗೊಂಡ, ಉಡಚಪ್ಪ ಮಾಳಗಿ, ರತ್ನಾಕರ ಕುಂದಾಪುರ, ಸಿದ್ದಣ್ಣ ಅಂಬಲಿ, ಸಂಜಯಗಾಂಧಿ ಸಂಜೀವಣ್ಣನವರ, ಬಸವರಾಜ ಹಾದಿಮನಿ, ಚಂದ್ರಣ್ಣ ಬೇಡರ, ಶ್ರೀಧರ ದೊಡ್ಡಮನಿ, ಹೊನಪ್ಪ ಮರಿಯಮ್ಮನವರ, ಹೊನ್ನಪ್ಪ ತಗಡಿಮನಿ, ಅಶೋಕ ಮರೆಣ್ಣನವರ ಇತರರು ಮಾತನಾಡಿದರು.
ಮಾಲತೇಶ ಅಂಗೂರ ಸ್ವಾಗತಿಸಿ, ಪ್ರಕಾಶ ಬಣಕಾರ ನಿರೂಪಿಸಿದರು. ನಾಗರಾಜ ಬಡಮ್ಮನವರ ವಂದಿಸಿದರು.