- ನಮ್ಮ ಸಂಬಂಧ ಉತ್ತಮವಾಗಿತ್ತು: ಡಿ.ಕೆ. ಶಿವಕುಮಾರ್
ಕನ್ನಡಪ್ರಭ ವಾರ್ತೆ ಮೈಸೂರು
ಶ್ರೀನಿವಾಸಪ್ರಸಾದ್ ಅವರ ನಿಧನ ದುಃಖ ತಂದಿದೆ. ಅವರ ಆರೋಗ್ಯ ಸುಧಾರಿತ್ತೇ ಎಂದು ಭಾವಿಸಿದ್ದೆ. ಆದರೆ ವಿಧಿ ಆಟ ಬೇರೆಯಿತ್ತು. ಸ್ನೇಹಕ್ಕೆ ಮತ್ತೊಂದು ಹೆಸರು ಶ್ರೀನಿವಾಸಪ್ರಸಾದ್. ಅವರು ಯಾವುದೇ ಪಕ್ಷದಲ್ಲಿದ್ದರೂ ನನ್ನ ಅವರ ಸಂಬಂಧ ಉತ್ತಮವಾಗಿತ್ತು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.ಅಶೋಕಪುರಂ ಶಾಲೆ ಆವರಣದಲ್ಲಿ ಶ್ರೀನಿವಾಸಪ್ರಸಾದ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಅವಧಿ ಬಿಟ್ಟರೆ ಅವರು ನಾವು ಜೊತೆಗೆ ರಾಜಕಾರಣ ಮಾಡಿದವರು.
ಶ್ರೀನಿವಾಸಪ್ರಸಾದ್ ಸಂಸದರಾಗಿ, ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ನಾನು ವಿಶ್ವನಾಥ್ ಮುಂತಾದವರು ಅವರಿಗೆ ಕಾರ್ಯದರ್ಶಿಯಾಗಿದ್ದೇವು. ನಾನು ಮೊದಲ ಬಾರಿ ಶಾಸಕನಾಗಲು ಟಿಕೆಟ್ ಕೊಡಿಸಿದವರು ಪ್ರಸಾದ್. ರಾಜಕಾರಣದಲ್ಲಿ ನನ್ನ ಪರವಾಗಿ ಸದಾ ನಿಂತಿದ್ದ ವ್ಯಕ್ತಿ. ನಾನು ಸಚಿವನಾಗಲು ಶ್ರೀನಿವಾಸಪ್ರಸಾದ್ ಹೋರಾಟ ಮಾಡಿದ್ದರು. ನಂಬಿದ ವ್ಯಕ್ತಿಯನ್ನು ಎಂದು ಬಿಟ್ಟುಕೊಡುತ್ತಿರಲಿಲ್ಲ ಎಂದು ಅವರು ತಿಳಿಸಿದರು.