ಕನ್ನಡಪ್ರಭ ವಾರ್ತೆ ರಿಪ್ಪನ್ಪೇಟೆ(ಹೊಂಬುಜ)
ಶ್ರೀ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಆಗಮೋಕ್ತ ಶಾಸ್ತ್ರದನ್ವಯ ಪೂಜಾ ವಿಧಿಗಳು ನೆರವೇರಿದವು.
ಪೂರ್ವ ಪರಂಪರೆಯಂತೆ, ಆಗಮೋಕ್ತ ಶಾಸ್ತ್ರದನ್ವಯ ಇಂದ್ರಪ್ರತಿಷ್ಠೆ, ವಿಮಾನಶುದ್ಧಿ, ಯಕ್ಷಪ್ರತಿಷ್ಠೆ ಬಳಿಕ ಧ್ವಜಾರೋಹಣ ನೆರವೇರಿಸಲಾಯಿತು. ಮಹಾನೈವೇದ್ಯ ಪೂಜೆ, ನಾಂದಿಮಂಗಲ, ವಾಸ್ತುಶಾಂತಿ, ಮೃತ್ತಿಕಾ ಸಂಗ್ರಹ ವಿಧಿಗಳು ಜರುಗಿದವು.ಮಾ. 05ರಂದು ಶ್ರೀಕ್ಷೇತ್ರದ ಶ್ರೀಮಠದ ಬಸದಿ, ಶ್ರೀ ನೇಮಿನಾಥ ಸ್ವಾಮಿ ಸನ್ನಿಧಿಯಲ್ಲಿ ಗಣಧರ ವಲಯ ಆರಾಧನೆ, ಮಾ. 06ರಂದು ಮಕ್ಕಳ ಬಸದಿ ಶ್ರೀ ಪಾರ್ಶ್ವನಾಥ ಸ್ವಾಮಿ ಸನ್ನಿಧಿಯಲ್ಲಿ ಕಲ್ಯಾಣ ಮಂದಿರ ಆರಾಧನೆ, ಮಾ. 07ರಂದು ನಗರ ಜಿನಾಲಯ ಶ್ರೀ ಮಹಾವೀರ ಸ್ವಾಮಿ ಸನ್ನಿಧಿಯಲ್ಲಿ ಭಕ್ತಾಮರ ಆರಾಧನೆ, ಮಾ. 08 ಭೋಗಾರ ಬಸದಿಯಲ್ಲಿ ಚೌಷಟ್ ಋದ್ಧಿ ವಿಧಾನಗಳು ನೆರವೇರಿದವು. ಇಂದು ಸಂಜೆ ನಾಗವಾಹನೋತ್ಸವವು ಸಾಂಗವಾಗಿ ಪೂಜಾ ವಿಧಿಗಳೊಂದಿಗೆ ನೆರವೇರಿಸಿ, ನಗರ ಪ್ರದಕ್ಷಿಣೆಯ ಶ್ರೀ ವಿಹಾರ ನಡೆಯಿತು.