ಲಾಠಿ ಚಾರ್ಜ್ ಖಂಡಿಸಿ ಪಂಚಮಸಾಲಿ ಸಮಾಜದಿಂದ ಪ್ರತಿಭಟನೆ

KannadaprabhaNewsNetwork |  
Published : Dec 13, 2024, 12:45 AM IST
ಬೆಳಗಾವಿಯಲ್ಲಿ ಪಂಚಮಸಾಲಿ ಸಮಾಜದವರ ಪ್ರತಿಭಟನೆ ವೇಳೆ ಲಾಠಿ ಚಾರ್ಜ್ ಖಂಡಿಸಿ ಗಜೇಂದ್ರಗಡದಲ್ಲಿ ಪ್ರತಿಭಟನೆ ನಡೆಯಿತು. | Kannada Prabha

ಸಾರಾಂಶ

ಸರ್ಕಾರ ಒಳಸಂಚು ಮಾಡಿ ಸೌಮ್ಯ ಸ್ವಭಾವದ ಪಂಚಮಸಾಲಿ ಸಮಾಜದವರ ಮೇಲೆ ರಾಜ್ಯ ಸರ್ಕಾರ ಲಾಠಿ ಚಾರ್ಜ್ ಮಾಡಿಸಿದ್ದು ಖಂಡನೀಯ

ಗಜೇಂದ್ರಗಡ: ಮೀಸಲಾತಿಗೆ ಆಗ್ರಹಿಸಿ ಬೆಳಗಾವಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಪಂಚಮಸಾಲಿ ಸಮಾಜದ ಮುಖಂಡರ ಮೇಲೆ ಲಾಠಿ ಚಾರ್ಜ್ ಮಾಡಿದ್ದನ್ನು ಖಂಡಿಸಿ ನೀಡಿದ್ದ ಪ್ರತಿಭಟನೆ ಕರೆ ಹಿನ್ನೆಲೆಯಲ್ಲಿ ಗುರುವಾರ ಪಟ್ಟಣದಲ್ಲಿ ಪಂಚಮಸಾಲಿ ಸಮಾಜದ ಮುಖಂಡರು ಪ್ರತಿಭಟನೆ ನಡೆಸಿದರು.

ಮಿಸಲಾತಿಗೆ ಒತ್ತಾಯಿಸಿ ಸುವರ್ಣ ಸೌಧದ ಹತ್ತಿರ ಮುತ್ತಿಗೆ ಹಾಕಲು ಹೋದಾಗ ಸರ್ಕಾರ ಪೊಲೀಸರ ಮೂಲಕ ಲಾಠಿ ಚಾರ್ಜ್ ಮಾಡಿಸಿ ಸಮಾಜವನ್ನು ಅವಮಾನಿಸಿದ್ದಾರೆ. ಮುಂದಿನ ದಿನಗಳಲ್ಲಿ ಶ್ರೀಗಳು ಯಾವುದೇ ಹೋರಾಟಕ್ಕೆ ಕರೆ ನೀಡಿದಾಗ ನಾವೆಲ್ಲರೂ ಒಗ್ಗಟ್ಟಾಗಿ ಹೊರಾಡಲು ಸಿದ್ದರಾಗಿರಬೇಕು. ಸರ್ಕಾರಕ್ಕೆ ಟ್ಟ್ರ್ಯಾಕ್ಟರ್‌ ಚಳುವಳಿ ನಡೆಸುವುದಾಗಿ ತಿಳಿಸಿದ್ದರೂ ಸಹ ಒಂದು ಕಿಮೀ ದೂರವಿರುವಾಗಲೇ ಚಳವಳಿ ತಡೆಯುವುದರ ಜತೆಗೆ ಸಮಾಜದ ಜನರ ರಕ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಹರಿಸಿದ್ದಾರೆ ಎಂದು ದೂರಿದ ಪ್ರತಿಭಟನಾಕಾರರು, ಸರ್ಕಾರ ಒಳಸಂಚು ಮಾಡಿ ಸೌಮ್ಯ ಸ್ವಭಾವದ ಪಂಚಮಸಾಲಿ ಸಮಾಜದವರ ಮೇಲೆ ರಾಜ್ಯ ಸರ್ಕಾರ ಲಾಠಿ ಚಾರ್ಜ್ ಮಾಡಿಸಿದ್ದು ಖಂಡನೀಯ. ಪ್ರತಿಭಟನಾ ಸ್ಥಳಕ್ಕೆ ಬಂದ ಸಚಿವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದು ಮನವಿ ಸ್ವೀಕರಿಸಬೇಕು.ಇಲ್ಲವಾದರೆ ನಾವೇ ಸುವರ್ಣ ಸೌಧಕ್ಕೆ ಬಂದು ಮನವಿ ನೀಡುತ್ತೇವೆ ಎಂದು ಶ್ರೀಗಳು ವೇದಿಕೆಯಿಂದ ಕೇಳಗಿಳಿಯಲು ಮುಂದಾದಾಗ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಸಿದ್ದರಾಮಯ್ಯನವರು ಬೆಂಗಳೂರಿನಿಂದ ಗುಂಡಾಗಳನ್ನು ಕರೆ ತಂದು ಪೊಲೀಸ ಸಮವಸ್ತ್ರ ಧರಿಸಿ ನಮ್ಮ ಸಮಾಜದವರ ಮೇಲೆ ದಾಳಿ ಮಾಡಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಅಮಾನುಷವಾಗಿ ಲಾಠಿ ಚಾರ್ಜ್ ಮಾಡಿಸಿದ ಯಾವುದಾದರೂ ಸರ್ಕಾರ ಇದ್ರೆ ಅದು ಸಿದ್ದರಾಮಯ್ಯ ಸರ್ಕಾರ. ನಾವು ಮೀಸಲಾತಿ ಕೇಳುತ್ತಿದ್ದೇವೆ. ಬೇರೆಯವರ ಮೀಸಲಾತಿ ಕಸಿಯುತ್ತಿಲ್ಲ. ಹಿಂದಿನ ಅವಧಿಯಲ್ಲಿದ್ದ ಬೊಮ್ಮಾಯಿ ಸರ್ಕಾರ ನಮಗೆ ಬೆಂಬಲ ನೀಡದ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿ ಪ್ರಚಂಡ ಬಹುಮತ ನೀಡಿದೆ. ಈಗಲೂ ಕಾಲ ಮಿಂಚಿಲ್ಲ. ಈ ಹಿಂದೆ ಗೋಲಿಬಾರ್ ಮಾಡಿಸಿದ ಗುಂಡೂರಾವ್ ಸರ್ಕಾರ ಏನಾಯಿತು. ಹಿರಿಯ ಪೊಲೀಸ್ ಅಧಿಕಾರಿ ಅಮಾನತು ಮಾಡಿ ಹಾಕಿರುವ ಕೇಸ್ ಹಿಂಪಡೆಯಬೇಕು. ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಇದಕ್ಕೂ ಮುನ್ನ ಪಟ್ಟಣದ ದುರ್ಗಾ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯೂ ಅಂಬೇಡ್ಕರ ವೃತ್ತ, ಶಿವಾಜಿ ವೃತ್ತದಿಂದ ಕಾಲಕಾಲೇಶ್ವರ ವೃತ್ತಕ್ಕೆ ಆಗಮಿಸಿ ಪ್ರತಿಭಟನಾ ಸಭೆಯಾಗಿ ಮಾರ್ಪಟ್ಟಿತ್ತು. ತಹಸೀಲ್ದಾರ ಕಿರಣಕುಮಾರ ಕುಲಕರ್ಣಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.

ಪಂಚಮಸಾಲಿ ಸಮಾಜದ ಅಧ್ಯಕ್ಷ ಸಿದ್ದಣ್ಣ ಬಂಡಿ, ಪ್ರಭು ಚವಡಿ, ಮುತ್ತಣ್ಣ ಮ್ಯಾಗೇರಿ, ಟಿ.ಎಸ್. ರಾಜೂರ, ಬಸವರಾಜ ಮೂಲಿಮನಿ, ಸುಭಾಷ್ ಮ್ಯಾಗೇರಿ, ಬಸವರಾಜ ಮೂಲಿಮನಿ, ಈಶಣ್ಣ ಮ್ಯಾಗೇರಿ, ಅಮರೇಶ ಬೂದಿಹಾಳ, ಚಂಬಣ್ಣ ಚವಡಿ, ಪವಾಡೆಪ್ಪ ಮ್ಯಾಗೇರಿ, ಉಮೇಶ ಚನ್ನು ಪಾಟೀಲ, ವಿಜಯ ಬೂದಿಹಾಳ, ಅಂದಪ್ಪ ಅಂಗಡಿ, ಬಸಪ್ಪ ಅಕ್ಕಿ ಸೇರಿದಂತೆ ಇತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ