ಹಿರೇಕೆರೂರು: ಪಟ್ಟಣ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾಗಿದ್ದು, ಅಧ್ಯಕ್ಷರಾಗಿ ಸುಧಾ ಚಿಂದಿ, ಉಪಾಧ್ಯಕ್ಷರಾಗಿ ರಾಜು ಕರಡಿ ಆಯ್ಕೆಯಾದರು.ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾದ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲು ನಿಗದಿಯಾಗಿತ್ತು.ಪಟ್ಟಣ ಪಂಚಾಯತಿ ಸಭಾ ಭವನದಲ್ಲಿ ಗುರುವಾರ ಜರುಗಿದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ೧೫ ನೇ ವಾರ್ಡಿನ ಸದಸ್ಯೆ ಸುಧಾ ಚಿಂದಿ. ಉಪಾಧ್ಯಕ್ಷರಾಗಿ ರಾಜು ಕರಡಿ ಆಯ್ಕೆಯಾದರು. ಚುನಾವಣಾಧಿಕಾರಿಗಳಾಗಿ ತಹಸೀಲ್ದಾರ್ ಹೆಚ್. ಪ್ರಭಾಕರಗೌಡ ಕಾರ್ಯನಿರ್ವಹಿಸಿದರು.ಕುತೂಹಲ ಕೆರಳಿಸಿದ್ದ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎರಡು ನಾಮಪತ್ರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎರಡು ನಾಮಪತ್ರ ಸಲ್ಲಿಕೆಯಾಗಿದ್ದವು. ೨೦ ಸದಸ್ಯರ ಪೈಕಿ ಒಬ್ಬ ಸದಸ್ಯರು ಗೈರಾಗಿದ್ದು, ಸ್ಥಳಿಯ ಶಾಸಕರು ಸೇರಿ ೨೦ ಸದಸ್ಯರು ಮತ ಚಲಾಯಿಸಿದರು.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಸುಧಾ ಚಿಂದಿ, ಬಿಜೆಪಿದಿಂದ ಕುಸುಮಾ ಬಣಕಾರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ರಾಜು ಕರಡಿ, ಬಿಜೆಪಿದಿಂದ ಹರೀಶ ಕಲಾಲ ನಾಮಪತ್ರ ಸಲ್ಲಿಸಿದ್ದರು. ಸಭೆಯಲ್ಲಿ ಸದಸ್ಯರು ಕೈಯೆತ್ತುವ ಮೂಲಕ ಮತಕ್ಕೆ ಹಾಕಲಾಗಿ ಅಧ್ಯಕ್ಷ ಸ್ಥಾನದ ಸುಧಾ ಚಿಂದಿ ಹಾಗೂ ಉಪಾಧ್ಯಕ್ಷ ಸ್ಥಾನದ ರಾಜು ಕರಡಿ ಅವರಿಗೆ ತಲಾ ೧೧ ಮತಗಳು ಲಭಿಸಿದ ಹಿನ್ನೆಲೆಯಲ್ಲಿ ಹೆಚ್ಚು ಮತ ಪಡೆದ ಸದಸ್ಯರ ಹೆಸರನ್ನು ಚುನಾವಣಾ ಅಧಿಕಾರಿ ಘೋಷಣೆ ಮಾಡಿದರು.ಪಪಂ ಸಭಾಭವನದಲ್ಲಿ ಜರುಗಿದ ಅಧ್ಯಕ್ಷ, ಉಪಾಧ್ಯಕ್ಷರ ಅಭಿನಂದನಾ ಸಮಾರಂಭದಲ್ಲಿ ಶಾಸಕ ಯು.ಬಿ. ಬಣಕಾರ ಮಾತನಾಡಿ, ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸದಸ್ಯರೊಂದಿಗೆ ಚರ್ಚಿಸಿ ಪಟ್ಟಣವನ್ನು ಮಾದರಿಯಾಗಿ ಅಭಿವೃದ್ಧಿ ಪಡಿಸಬೇಕು ನಾನು ಸಹ ಪಟ್ಟಣದ ಅಭಿವೃದ್ಧಿಗೆ ನಿಮ್ಮ ಜೊತೆ ಇರುತ್ತೇನೆ. ಪಟ್ಟಣದ ಅಭಿವೃದ್ಧಿಗಾಗಿ ನಮ್ಮ ಸರಕಾರ ಯಾವ ಪ್ರೋತ್ಸಾಹಿಸಬೇಕು ಅದನ್ನು ನೀಡಲು ಸಿದ್ಧ ಇದೆ. ಪರಸ್ಪರ ಸಹಕಾರದೊಂದಿಗೆ ಒಳ್ಳೆಯ ಕೆಲಸ ಕಾರ್ಯಗಳನ್ನು ಕೈಗೊಳ್ಳಬೇಕು. ನಿಮ್ಮೆಲ್ಲರ ಉದ್ದೇಶ ಪಟ್ಟಣದ ಅಭಿವೃದ್ಧಿಯ ಗುರಿಯಾಗಿರಬೇಕು, ಪಟ್ಟಣದ ಜನತೆಗೆ ಉತ್ತಮ ಆಡಳಿತ ನೀಡಿ ಅಧಿಕಾರ ಎಷ್ಟು ದಿನ ಇರುತ್ತದೆ ಎಂಬುದು ಮುಖ್ಯವಲ್ಲ, ಅಧಿಕಾರ ದೊರೆತಾಗ ಅಭಿವೃದ್ಧಿ ಪರವಾದ ಉತ್ತಮ ಆಡಳಿತ ನೀಡಬೇಕು ಎಂದು ನೂತನ ಅಧ್ಯಕ್ಷ,ಉಪಾಧ್ಯಕ್ಷರಿಗೆ ಸಲಹೆ ನೀಡಿದರು.
ನೂತನ ಅಧ್ಯಕ್ಷೆ ಸುಧಾ ಚಿಂದಿ ಹಾಗೂ ಉಪಾಧ್ಯಕ್ಷ ರಾಜು ಕರಡಿ ಮಾತನಾಡಿ, ಶಾಸಕ ಯು.ಬಿ. ಬಣಕಾರ ಹಾಗೂ ಸದಸ್ಯರ ಮಾರ್ಗದರ್ಶನ ಪಡೆದು ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು. ನೂತನ ಸದಸ್ಯರಿಗೆ ಪ.ಪಂ ಸದಸ್ಯರು ಅಭಿನಂದನೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಪಪಂ ಸದಸ್ಯರಾದ ಮಹೇಂದ್ರ ಬಡಳ್ಳಿ, ಕವಿತಾ ಹಾರ್ನಳ್ಳಿ, ಕಂಠಾಧರ ಅಂಗಡಿ, ದಿಲ್ಶಾದ್ ಬಳಿಗಾರ, ಬಸವರಾಜ ಕಟ್ಟಿಮನಿ, ಸನಾವುಲ್ಲಾ ಮಕಾಂದರ, ಚಂದ್ರಕಲಾ ಕೋರಿಗೌಡ್ರ, ,ಶಂಶಾದ್ ಕುಪ್ಪೇಲೂರು, ರಮೇಶ ಕೋಡಿಹಳ್ಳಿ, ಹನುಮಂತಪ್ಪ ಕುರುಬರ, ಗುರುಶಾಂತ ಯತ್ತಿನಹಳ್ಳಿ, ರಮೇಶ ತೋರಣ್ಣಗಟ್ಟಿ, ಪೂಜಾ ತಂಬಾಕದ, ಅಲ್ತಾಫ್ಖಾನ ಪಠಾಣ, ರಜೀಯಾ ಅಸದಿ, ಕುಸುಮಾ ಬಣಕಾರ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ಮಡಿವಾಳರ, ಪಪಂ ಮುಖ್ಯಾಧಿಕಾರಿ ಕೋಡಿ ಭೀಮರಾಯ್ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಇದ್ದರು.
ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆಅಧ್ಯಕ್ಷ, ಉಪಾಧ್ಯಕ್ಷರ ಹೆಸರು ಘೋಷಣೆಯಾದ ಕೂಡಲೇ ಕಾಂಗ್ರೆಸ್ ಕಾರ್ಯಕರ್ತರು ಸಿಹಿ ಹಂಚಿ ಪಟಾಕಿ ಸಿಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಶಾಸಕ ಯು.ಬಿ. ಬಣಕಾರ ಅವರಿಗೆ ಜೈಕಾರ ಕೂಗುವ ಮೂಲಕ ಸಂಭ್ರಮಾಚರಣೆ ಆಚರಿಸಿದರು. ನಂತರ ಪ.ಪಂ. ಕಾರ್ಯಾಲಯದಿಂದ ಸರ್ವಜ್ಞ ವೃತ್ತದವರೆಗೆ ನೂತನ ಅಧ್ಯಕ್ಷೆ, ಉಪಾಧ್ಯಕ್ಷ ಹಾಗೂ ಶಾಸಕ ಯು.ಬಿ. ಬಣಕಾರ ಮತ್ತು ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು.