ಕನ್ನಡಪ್ರಭ ವಾರ್ತೆ ರಾಮನಗರ
ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್ ಒ) ಜಿಲ್ಲಾ ಘಟಕದ ನೇತೃತ್ವದಲ್ಲಿ ಹರೀಸಂದ್ರ ಮತ್ತು ಮದರ್ ಸಾಬರದೊಡ್ಡಿ ಗ್ರಾಮಗಳಲ್ಲಿ ಪ್ರತಿಭಟಿಸಿದ ಪೋಷಕರು, ಸರ್ಕಾರ ಕೂಡಲೇ ಕೆಪಿಎಸ್ ಮ್ಯಾಗ್ನೆಟ್ ನೀತಿಯಿಂದ ಹಿಂದೆ ಸರಿಯಬೇಕು. ಶಾಲೆಗಳ ವಿಲೀನ ಪ್ರಕ್ರಿಯೆಯನ್ನು ತಕ್ಷಣವೇ ಕೈಬಿಡಬೇಕು. ಎಲ್ಲಾ ಗ್ರಾಮೀಣ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಕರನ್ನು ನೇಮಿಸಿ, ಅಗತ್ಯ ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಎಐಡಿಎಸ್ಒ ಜಿಲ್ಲಾ ಸಂಚಾಲಕ ರೋಹಿತ್, ಕೆಪಿಎಸ್ ಮ್ಯಾಗ್ನೆಟ್ ನೀತಿಯು ಸಂಪೂರ್ಣ ವೈಫಲ್ಯ ಕಂಡಿದೆ. ಇದಕ್ಕೆ ಹೊಂಗನೂರು ಶಾಲೆಯೇ ಸಾಕ್ಷಿ. ಈಗ ಪಾದರಹಳ್ಳಿಯಲ್ಲಿ ಮಾದರಿ ಶಾಲೆಯ ಹೆಸರಿನಲ್ಲಿ ಹರೀಸಂದ್ರ, ಮದರ್ ಸಾಬರದೊಡ್ಡಿ, ತಿಮ್ಮೇಗೌಡನದೊಡ್ಡಿ, ಚಿಕ್ಕೇಗೌಡನದೊಡ್ಡಿ, ಕೆಂಪೇಗೌಡನದೊಡ್ಡಿ, ಹಳ್ಳಿಮಾಳ ಸೇರಿದಂತೆ ಹಲವು ಶಾಲೆಗಳನ್ನು ಮುಚ್ಚಲು ಸರ್ಕಾರ ಸಂಚು ರೂಪಿಸಿದೆ. ಈ ಶಾಲೆಗಳು ಟೊಯಾಟಾ ಕಿರ್ಲೋಸ್ಕರ್ ಸಂಸ್ಥೆಯ ದಾನದಿಂದ ನಿರ್ಮಾಣವಾಗಿದ್ದು, ಸರ್ಕಾರ ಶಿಕ್ಷಣದ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ನಮ್ಮೂರಿನ ಶಾಲೆಗಳನ್ನು ಉಳಿಸಲು ನಾವು ಬೃಹತ್ ಹೋರಾಟ ಕಟ್ಟಬೇಕಿದೆ ಎಂದು ಕರೆ ನೀಡಿದರು.ಬಡ ಮಕ್ಕಳ ಶಿಕ್ಷಣ ಕಸಿಯುವ ಹುನ್ನಾರ:
1919-20ರಲ್ಲಿ ಸ್ಥಾಪನೆಯಾದ ಹರೀಸಂದ್ರ ಸರ್ಕಾರಿ ಶಾಲೆಯು ಸುಮಾರು 107 ವರ್ಷಗಳ ಇತಿಹಾಸವನ್ನು ಹೊಂದಿದೆ. ಶಾಲೆಯ ದಾಖಲಾತಿ ಸಂಖ್ಯೆ 120 ದಾಟುತ್ತಿದ್ದರೂ ಇದನ್ನು ವಿಲೀನಗೊಳಿಸಲು ಮುಂದಾಗಿರುವುದು ಸರಿಯಲ್ಲ. ಈ ಐತಿಹಾಸಿಕ ಶಾಲೆಯನ್ನು ಉಳಿಸಲು ಹಳೆಯ ವಿದ್ಯಾರ್ಥಿಗಳು ತಮ್ಮ ಸ್ವಂತ ಹಣದಿಂದ ಕೊಠಡಿಗಳನ್ನು ನಿರ್ಮಿಸಲು ಮುಂದಾಗಿದ್ದಾರೆ. ಜನರ ಈ ಭಾವನೆಯನ್ನು ಬದಿಗೊತ್ತಿ, 7-10 ಕಿ.ಮೀ ದೂರದಲ್ಲಿ ಖಾಸಗಿ ಕಂಪನಿಗಳ ನೆರವಿನೊಂದಿಗೆ ಶಾಲೆ ಸ್ಥಾಪಿಸಲು ಮುಂದಾಗಿರುವುದು ಜನರಿಗೆ ಮಾಡುತ್ತಿರುವ ಅನ್ಯಾಯ ಎಂದು ದೂರಿದರು.