ರೋಣ: ಬಯಲು ಮಲ ವಿಸರ್ಜನೆ ದಿಸೆಯಿಂದ ಮತ್ತು ಪರಿಸರದ ಅಶುಚಿತ್ವದಿಂದ ಮಕ್ಕಳಲ್ಲಿ ಜಂತುಹುಳು ಸೋಂಕು ಸರ್ವೇಸಾಮಾನ್ಯವಾಗಿದ್ದು, ಜಂತುಹುಳು ಸೋಂಕು ನಿವಾರಣೆಗೆ ಔಷಧ ಲಭ್ಯವಿದೆ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕೆ.ಎ. ಹಾದಿಮನಿ ಹೇಳಿದರು.
ಮಗು ದೀರ್ಘಕಾಲದಿಂದ ಜಂತುಹುಳುಗಳನ್ನು ಹೊಂದಿದ್ದರೆ ರಕ್ತಹೀನತೆ, ಅಪೌಷ್ಟಿಕತೆ, ಹಸಿವಾಗದೆ ಇರುವುದು, ಹೊಟ್ಟೆನೋವು, ವಾಕರಿಕೆ, ವಾಂತಿ, ಅತಿಸಾರ, ಏಕಾಗ್ರತೆ ಕಲಿಕಾ ಸಾಮರ್ಥ್ಯ ಕುಂಠಿತಗೊಳ್ಳುವುದು. ಆದ್ದರಿಂದ 19 ವರ್ಷದ ಒಳಗಿನ ಎಲ್ಲ ಮಕ್ಕಳಿಗೆ ಜಂತುಹುಳು ಮಾತ್ರೆ ನೀಡಿ, ಜಂತುರಹಿತ ಮಕ್ಕಳು ಆರೋಗ್ಯವಂತ ಮಕ್ಕಳನ್ನಾಗಿಸುವಲ್ಲಿ ಪಾಲಕರ ಜವಾಬ್ದಾರಿ ಮುಖ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯ ಕ್ಯೂ.ಎಂ. ಕಾಸಿದ್ ಮಾತನಾಡಿ, ಈಗಾಗಲೇ ವಿದ್ಯಾರ್ಥಿಗಳು ತರಗತಿಯ ಪಠ್ಯಕ್ರಮದಲ್ಲಿ ಓದಿದಂತೆ ಬಯಲು ಮಲವಿಸರ್ಜನೆಯಿಂದ ಟೈಫಾಯಿಡ್ ವಾಂತಿಭೇದಿ, ಕಾಲರಾ ಕರುಳುಬೇನೆ ಜಂತುಹುಳು ಕಾಮಾಲೆ ಪೋಲಿಯೋದಂತಹ ರೋಗಗಳು ಕಲುಷಿತ ವಾತಾವರಣ, ನೀರಿನಿಂದ ಹರಡುತ್ತವೆ ಎಂದರು.ಆರೋಗ್ಯ ಇಲಾಖೆಯ ಲಕ್ಷ್ಮಿ ಪಟ್ಟಣಶೆಟ್ಟಿ, ಶಾಂತಮ್ಮ ಬಿ. ಪ್ರಜ್ವಲ್ ನಾಯಕ ಇದ್ದರು.
ಗದಗ: ನಗರದ ಮಸಾರಿ ಭಾಗದಲ್ಲಿಯ ಸೂಡಿಯ ಜುಕ್ತಿಹಿರೇಮಠದ ಶಾಖಾಮಠವಾದ ವಿಶ್ವಾರಾಧ್ಯ ಮಂದಿರದ ವಿಶ್ವಾರಾಧ್ಯ ಲಿಂಗೋದ್ಭವ ಮೂರ್ತಿಗೆ ಶ್ರಾವಣ ಮಾಸದ ಪ್ರಯುಕ್ತ ಒಂದು ತಿಂಗಳ ಪರ್ಯಂತ ಆ. 13ರಿಂದ ಸೆ. 11ರ ವರೆಗೆ ಮಹಾರುದ್ರಾಭಿಷೇಕ ಬಿಲ್ವಾರ್ಚನೆ ಕಾರ್ಯಕ್ರಮ ಬೆಳಗ್ಗೆ 6.30 ರಿಂದ 8.30ರ ವರೆಗೆ ಪ್ರತಿದಿನ ನಡೆಯುವುದು ಎಂದು ಶ್ರೀಮಠದ ಕಾರ್ಯದರ್ಶಿ ಶರಣಬಸಯ್ಯ ಜುಕ್ತಿಹಿರೇಮಠ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.