ಕನ್ನಡಪ್ರಭ ವಾರ್ತೆ, ತುಮಕೂರುಸಾಂಸ್ಕೃಕ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ನಾಡಿ ಸಂಸ್ಕೃತಿಯನ್ನು ಇನ್ನು ಹೆಚ್ಚು ಪ್ರಚುರ ಪಡಿಸಬೇಕು ಎಂದು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಹೇಳಿದರು.
ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ತುಮಕೂರು ದಸರಾ ಉತ್ಸವದ ಅಂಗವಾಗಿ ನಿರ್ಮಿಸಿರುವ ಶ್ರೀ ನರಸಿಂಹರಾಜು ವೇದಿಕೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿದ ಮಕ್ಕಳು ಹಾಗೂ ಕಲಾವಿದರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.ಸಾಂಸ್ಕೃತಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಪ್ರತಿ ವಿದ್ಯಾರ್ಥಿ, ಪ್ರತಿ ವ್ಯಕ್ತಿ ಸಂಸ್ಕಾರವಂತನಾಗುತ್ತಾನೆ. ಕಲೆಯ ಬಗ್ಗೆ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಎಷ್ಟು ಪರಿಚಯ ಮಾಡಿಕೊಡುತ್ತೇವೆಯೋ ಅಷ್ಟು ಸಂಸ್ಕಾರ, ದೇಶಭಕ್ತಿ, ಮೌಲ್ಯ, ಪ್ರೀತಿ, ವಿಶ್ವಾಸ, ಮನೆಗಳಲ್ಲಿ ಅನ್ಯೋನ್ಯತೆ, ಸಂಬಂಧ ಗಟ್ಟಿಯಾಗುತ್ತವೆ ಎಂದರು. ಯಾರು ಸಾಂಸ್ಕೃತಿಕ ರಾಯಭಾರಿಯಾಗುತ್ತಾರೋ ಅಂತಹ ವ್ಯಕ್ತಿಯ ಜೀವನ ಸನ್ಮಾರ್ಗದಲ್ಲಿ ನಡೆಯುತ್ತದೆ ಎಂದು ಅವರು ಹೇಳಿದರು.ತುಮಕೂರು ದಸರಾ ಮಹೋತ್ಸವ ಬಹು ಆಯಾಮಗಳ, ಬಹು ವೈವಿಧ್ಯಮಯವಾದ ಕಾರ್ಯಕ್ರಮ. ಕಿರಿಯರಿಗೆ, ವಿದ್ಯಾರ್ಥಿಗಳಿಗೆ, ವಯಸ್ಕರಿಗೆ, ಹಿರಿಯರಿಗೆ ಹಾಗೂ ಎಲ್ಲ ವರ್ಗದವರಿಗೂ ಬೇಕಾದಂತಹ ವೈವಿಧ್ಯಮಯವಾದ ಆಚರಣೆಗಳು, ವಿವಿಧ ಕಾರ್ಯಕ್ರಮಗಳನ್ನು ಒಳಗೊಂಡ ಸಮಗ್ರವಾದ ದಸರಾ ಆಚರಿಸಲಾಗುತ್ತಿದೆ ಎಂದು ಅವರು ಹೇಳಿದರು.ಸಾಂಸ್ಕೃತಿಕ ದಸರಾಕ್ಕಾಗಿ ವೇದಿಕೆಯನ್ನು ನಿರ್ಮಾಣ ಮಾಡಿದ್ದೇವೆ. ನಮ್ಮ ಜಿಲ್ಲೆಯ ಸುಮಾರು 3 ಸಾವಿರ ಕಲಾವಿದರಿಗೆ ಅವಕಾಶ ಕಲ್ಪಿಸಬೇಕು ಎಂಬ ಉದ್ದೇಶದಿಂದ 8 ದಿಗಳ ಕಾಲ ನರಸಿಂಹರಾಜು ಸಾಂಸ್ಕೃತಿಕ ವೇದಿಕೆಯಲ್ಲಿ ಕಲಾ ತಂಡಗಳಿಗೆ ಅವಕಾಶ ನೀಡಲಾಗಿದ್ದು, 4 ದಿನಗಳಲ್ಲಿ 46 ಕಲಾ ತಂಡಗಳು, 1882 ಮಂದಿ ಕಲಾವಿದರು ಭಾಗವಹಿಸಿದ್ದಾರೆ. 8 ದಿನಗಳಲ್ಲಿ ಸುಮಾರು 9 ಸಾವಿರ ಕಲಾವಿದರು ತಮ್ಮ ಪ್ರದರ್ಶನ ನೀಡುವ ನಿರೀಕ್ಷೆ ಇದೆ. ಈ ಪೈಕಿ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಹಾಗೂ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಸೇರಿದ್ದಾರೆ. ಪ್ರತಿಷ್ಠಿತ ಶಾಸ್ತ್ರೀಯ ನೃತ್ಯ, ಭರತನಾಟ್ಯ, ಹರಿಕಥೆ, ಸುಗಮ ಸಂಗೀತ ಸೇರಿದಂತೆ ಹಳ್ಳಿ ಸೊಗಡಿನ ಎಲ್ಲ ಜಾನಪದ ಕಲಾ ಪ್ರಕಾರಗಳು ಬಹಳ ವಿಜೃಂಭಣೆಯಿಂದ ನಡೆಯುತ್ತಿದೆ ಎಂದು ತಿಳಿಸಿದರು.