ದಟ್ಟ ಅರಣ್ಯ ಸುತ್ತಲೂ ಸಹಸ್ರ ಸಂಖ್ಯೆಯಲ್ಲಿ ನೈಸರ್ಗಿಕವಾಗಿ ಬೆಳೆದು ನಿಂತ ಬಿಲ್ವಪತ್ರೆ ಗಿಡಗಳು, ಪೂಜನೀಯ ಭಾವನೆ ಬಿಂಬಿಸುವ ಪತ್ರಿವನದಿಂದ ಆವೃತವಾಗಿರುವ ಐತಿಹಾಸಿಕ ಸ್ಥಳವಾದ ಮುಂಡಗೋಡ ಪಟ್ಟಣದ ಹೊರ ವಲಯದ ಪಾರ್ವತಿ-ಪರಮೇಶ್ವರ ದೇವಾಲಯವೀಗ ನಿರ್ವಹಣೆ ಇಲ್ಲದೆ ಶಿಥಿಲವಾಗಿದೆ.
ಸಂತೋಷ ದೈವಜ್ಞ
ಮುಂಡಗೋಡ: ದಟ್ಟ ಅರಣ್ಯ ಸುತ್ತಲೂ ಸಹಸ್ರ ಸಂಖ್ಯೆಯಲ್ಲಿ ನೈಸರ್ಗಿಕವಾಗಿ ಬೆಳೆದು ನಿಂತ ಬಿಲ್ವಪತ್ರೆ ಗಿಡಗಳು, ಪೂಜನೀಯ ಭಾವನೆ ಬಿಂಬಿಸುವ ಪತ್ರಿವನದಿಂದ ಆವೃತವಾಗಿರುವ ಐತಿಹಾಸಿಕ ಸ್ಥಳವಾದ ಪಟ್ಟಣದ ಹೊರ ವಲಯದ ಪಾರ್ವತಿ-ಪರಮೇಶ್ವರ ದೇವಾಲಯವೀಗ ನಿರ್ವಹಣೆ ಇಲ್ಲದೆ ಶಿಥಿಲವಾಗಿದೆ.
ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಜನ ಈ ದೇವಾಲಯಕ್ಕೆ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಈ ಪ್ರದೇಶಕ್ಕೆ ಪವಿತ್ರ "ಪತ್ರೆವನ " ಎಂದೂ ಕರೆಯುತ್ತಾರೆ. ಶಿವರಾತ್ರಿ ದಿನವಂತೂ ಇಲ್ಲಿ ಜನಸಾಗರವೇ ಸೇರುತ್ತದೆ. ಅಂದು ಜಾತ್ರಾ ಮಹೋತ್ಸವ ಕೂಡ ನಡೆಯುತ್ತದೆ. ಪಾದಯಾತ್ರೆ ಮೂಲಕ ದಂಡು ದಂಡಾಗಿ ಬರುವವರ ಸಂಖ್ಯೆ ಕೂಡ ಹೆಚ್ಚಿರುತ್ತದೆ. ಆದರೆ ಶಿವರಾತ್ರಿ ಉತ್ಸವ ಮುಗಿಯುತ್ತಿದ್ದಂತೆ ದೇವಾಲಯದ ಬಾಗಿಲು ಮುಚ್ಚಲಾಗುತ್ತದೆ. ನಿತ್ಯ ಈ ಮಾರ್ಗವಾಗಿ ಸಂಚರಿಸುವ ಪ್ರತಿಯೊಬ್ಬರೂ ಇಲ್ಲಿ ನಿಂತು ದೇವರಿಗೆ ನಮಸ್ಕರಿಸಿಯೇ ಹೋಗುತ್ತಾರೆ.
ನೂರಾರು ವರ್ಷ ಇತಿಹಾಸವಿರುವ ಈ ದೇವಾಲಯದ ಅಭಿವೃದ್ಧಿ ಮಾತ್ರ ಶೂನ್ಯ. ಈ ದೇವಾಲಯವೀಗ ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು, ಜೀರ್ಣೋದ್ಧಾರ ಕಾರ್ಯ ನಡೆಯಬೇಕಿದೆ.
ಪುನರುಜ್ಜೀವನವಾಗಲಿ:
ಪಾರ್ವತಿ -ಪರಮೇಶ್ವರ ದೇವಾಲಯ ಅಭಿವೃದ್ಧಿಯಿಲ್ಲದೆ ಶಿಥಿಲಾವಸ್ಥೆ ತಲುಪಿರುವುದು ಶೋಚನಿಯ. ಸುತ್ತ ಪತ್ರಿವನ ಇರುವುದರಿಂದ ಉತ್ತಮ ವಾತಾವರಣವಿದೆ. ಅಧಿಕೃತವಾಗಿ ಪತ್ರೆವನ ನಿರ್ಮಾಣ ಮಾಡಿದರೆ ದೇವಾಲಯ ಕೂಡ ಪುನರುಜ್ಜೀವನಗೊಳ್ಳಲಿದೆ ಎಂದು ಹಿರಿಯ ಪೋಸ್ಟ್ ಮಾಸ್ಟರ್ ದಿನೇಶ ವೆರ್ಣೇಕರ ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.