ಪಾಸ್‌ಪೋರ್ಟ್‌ ಕಚೇರಿಗೆ ದಂಡ ವಿಧಿಸಿ, ಪರಿಹಾರಕ್ಕೆ ಆದೇಶ

KannadaprabhaNewsNetwork | Published : Jan 23, 2025 12:49 AM

ಸಾರಾಂಶ

ಹುಬ್ಬಳ್ಳಿಯ ಪಾಸ್‌ಪೋರ್ಟ್‌ ಕಚೇರಿ ನಿರ್ಲಕ್ಷ್ಯದ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ನ್ಯಾಯಾಲಯವು ಕಚೇರಿಗೆ ದಂಡ ವಿಧಿಸಿ ಪರಿಹಾರಕ್ಕೆ ಆದೇಶಿಸಿದೆ.

ಧಾರವಾಡ:

ಹುಬ್ಬಳ್ಳಿಯ ಪಾಸ್‌ಪೋರ್ಟ್‌ ಕಚೇರಿ ನಿರ್ಲಕ್ಷ್ಯದ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ನ್ಯಾಯಾಲಯವು ಕಚೇರಿಗೆ ದಂಡ ವಿಧಿಸಿ ಪರಿಹಾರಕ್ಕೆ ಆದೇಶಿಸಿದೆ.

ಹುಬ್ಬಳ್ಳಿ ವ್ಯಾಪಾರಿ ಪಂಕೇಶ ಜೈನ್ ತಮ್ಮ ಪತ್ನಿ ಮತ್ತು ಇಬ್ಬರೂ ಅಲ್ಪವಹಿ ಮಕ್ಕಳೊಂದಿಗೆ 2023ರ ಅಕ್ಟೋಬರ್‌ ತಿಂಗಳಲ್ಲಿ ದುಬೈ ಪ್ರವಾಸಕ್ಕೆ ತೀರ್ಮಾನಿಸಿದ್ದರು. ತಮ್ಮಿಬ್ಬರು ಪಾಸ್‌ಪೋರ್ಟ್‌ ಸಿದ್ಧವಿದ್ದು ಮಕ್ಕಳ ಪಾಸ್‌ಪೋರ್ಟ್‌ಗಾಗಿ ಪಂಕೇಶ ಹುಬ್ಬಳ್ಳಿಯ ಪಾಸ್‌ಪೋರ್ಟ್‌ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಆಗ ಪರಿಶೀಲನೆಗಾಗಿ ಪಂಕಜರ ಪಾಸ್‌ಪೋರ್ಟ್‌ನ್ನು ಸದರಿ ಕಚೇರಿ ಪಡೆದುಕೊಂಡಿತ್ತು. ಮಕ್ಕಳ ಪಾಸ್‌ಪೋರ್ಟ್ ತಯಾರಿಸಿ ಕೊಡುವಾಗ ಪಂಕೇಶ ಪಾಸ್‌ಪೋರ್ಟ್‌ನಲ್ಲಿ ಕ್ಯಾನಸಲೇಷನ್ ಶೀಲನ್ನು ಹಾಕಿಕೊಟ್ಟಿದ್ದು, ಪಂಕಜ ಗಮನಿಸಿರಿಲ್ಲಲ್ಲ.ನಿಗದಿಯಂತೆ ಕುಟುಂಬ ಸಮೇತ ದುಬೈಗೆ ಹೋಗಲು ಮುಂಬೈ ವಿಮಾನ ನಿಲ್ದಾಣಕ್ಕೆ ಹೋದಾಗ ಈ ಸಂಗತಿ ಗೊತ್ತಾಗಿ ವಿಮಾನ ತಪ್ಪಿಸಿಕೊಳ್ಳಬೇಕಾಯಿತು. ತಕ್ಷಣ ಹುಬ್ಬಳ್ಳಿಯ ಪಾಸ್‌ಪೋರ್ಟ್ ಕಚೇರಿಯಿಂದ ತಪ್ಪಾಗಿರುವುದನ್ನು ಮುಂಬೈ ಪಾಸ್‌ಪೋರ್ಟ್ ಕಚೇರಿಗೆ ತಿಳಿಸಲಾಯಿತು. ಆದರೆ, ಸಮಯದ ಅಭಾವದಿಂದ ಪ್ರವಾಸ ಒಂದು ದಿನ ಮುಂದೂಡಬೇಕಾಯಿತು. ಜತೆಗೆ ₹ 11 ಸಾವಿರ ಹೆಚ್ಚುವರಿ ವೆಚ್ಚವಾಯಿತು. ಇದನ್ನು ಪ್ರಶ್ನಿಸಿ ಪಂಕಜ ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದರು. ದುಬೈನಲ್ಲಿನ ನಿಗದಿಯಾಗಿದ್ದ ಪ್ರವಾಸದ ಅವಧಿಯಲ್ಲಿ ಎರಡು ದಿವಸ ಕಡಿತ ಆಗಿರುವುದರಿಂದ ಎದುರುದಾರ ಪಾಸ್‌ಪೋರ್ಟ್ ಕಚೇರಿ ಅವರಿಂದ ತನಗೆ ಸೇವಾ ನ್ಯೂನತೆ ಆಗಿದ್ದು, ₹ 25 ಲಕ್ಷ ಪರಿಹಾರಕ್ಕೆ ಆಗ್ರಹಿಸಿ ದೂರು ಸಲ್ಲಿಸಿದ್ದರು.

ಈ ದೂರು ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ವಿಶಾಲಾಕ್ಷಿ ಬೋಳಶೆಟ್ಟಿ, ಪಂಕಜ ಅವರ ಪಾಸ್‌ಪೋರ್ಟ್‌ಗೆ ರದ್ಧತಿ ಶೀಲು ಹಾಕಿದ್ದು ಪಾಸ್‌ಪೋರ್ಟ್ ಕಚೇರಿ ಸಿಬ್ಬಂದಿ ತಪ್ಪು ಎಂದು ತೀರ್ಮಾನಿಸಿದ ಆಯೋಗ, ಹೆಚ್ಚುವರಿ ವಿಮಾನ ಟಿಕೆಟ್‌ ವೆಚ್ಚ ₹ 11 ಸಾವಿರ ಜತೆಗೆ ದೂರುದಾರರಿಗೆ ಆಗಿರುವ ಅನಾನುಕೂಲ ಹಾಗೂ ತೊಂದರೆ ಮತ್ತು ಅವರ ಒಂದು ದಿನದ ವಾಸ್ತವ್ಯದ ಖರ್ಚು ವೆಚ್ಚ ಸೇರಿ ತಲಾ ₹ 50 ಸಾವಿರದಂತೆ ಒಟ್ಟು ₹ 2 ಲಕ್ಷ ಪರಿಹಾರ ಹಾಗೂ ₹ 10 ಸಾವಿರ ಪ್ರಕರಣದ ಖರ್ಚು-ವೆಚ್ಚ ಕೊಡುವಂತೆ ಆಯೋಗ ಎದುರುದಾರರ/ ಪಾಸ್‌ಪೋರ್ಟ್‌ ಇಲಾಖೆ ನಿರ್ದೇಶಿಸಿದೆ.

Share this article