ಗುತ್ತಿಗೆದಾರರ ₹ 23000 ಕೋಟಿ ಬಾಕಿ ನೀಡಿ:

KannadaprabhaNewsNetwork |  
Published : Jun 06, 2026, 02:00 AM IST
ಸುಭಾಶ ಪಾಟೀಲ | Kannada Prabha

ಸಾರಾಂಶ

ಉತ್ತರ ಕರ್ನಾಟಕದ ಗುತ್ತಿಗೆದಾರರ ಸುಮಾರು ₹ 23000 ಕೋಟಿ ಬಾಕಿಯಿದೆ. ಎರಡು ತಿಂಗಳೊಳಗಾಗಿ ಈ ಬಾಕಿ ಹಣ ಪಾವತಿಸದೆ ಇದ್ದರೆ ಸರ್ಕಾರದ ಕಾಮಗಾರಿ ಬಂದ್‌ ಮಾಡಿ ಪ್ರತಿಭಟಿಸಲಾಗುವುದು.

ಧಾರವಾಡ:

ಲೋಕೋಪಯೋಗಿ ಇಲಾಖೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉತ್ತರ ಕರ್ನಾಟಕದ ಗುತ್ತಿಗೆದಾರರ ಸುಮಾರು ₹ 23000 ಕೋಟಿ ಬಾಕಿಯಿದೆ. ಎರಡು ತಿಂಗಳೊಳಗಾಗಿ ಈ ಬಾಕಿ ಹಣ ಪಾವತಿಸದೆ ಇದ್ದರೆ ಸರ್ಕಾರದ ಕಾಮಗಾರಿ ಬಂದ್‌ ಮಾಡಿ ಪ್ರತಿಭಟಿಸುವುದಾಗಿ ಉತ್ತರ ಕರ್ನಾಟಕ ಸಿವಿಲ್‌ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುಭಾಸ ಪಾಟೀಲ ಎಚ್ಚರಿಸಿದ್ದಾರೆ.

ಇಲ್ಲಿಯ ಆಲೂರು ಭವನದಲ್ಲಿ ಶುಕ್ರವಾರ ಗುತ್ತಿಗೆದಾರರ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾವಿರಾರು ಕೋಟಿ ಬಾಕಿ ಇಟ್ಟಿಕೊಂಡಿರುವ ಸರ್ಕಾರದ ವಿರುದ್ಧ ಇನ್ನೇನು ಪ್ರತಿಭಟನೆಗೆ ಸಿದ್ಧರಾಗಿದ್ದೇವು. ಆದರೆ, ರಾಜ್ಯಕ್ಕೆ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಬಂದಿರುವ ಹಿನ್ನೆಲೆಯಲ್ಲಿ ಅವರನ್ನು ಭೇಟಿಯಾಗಿ ಅವರಿಗೂ ನಮ್ಮ ಸಮಸ್ಯೆ ಹೇಳಿಕೊಳ್ಳುತ್ತೇವೆ. ನಿಗದಿತ ಸಮಯದಲ್ಲಿ ಬಾಕಿ ಹಣ ಸೇರಿದಂತೆ ಗುತ್ತಿಗೆದಾರರ ಸಮಸ್ಯೆಗಳಿಗೆ ಪರಿಹಾರ ದೊರಕಿದರೆ ಸರಿ. ಇಲ್ಲದಿದ್ದರೆ ಪ್ರತಿಭಟನೆ ಅನಿವಾರ್ಯ ಎಂದರು.

ನೀರಾವರಿ ₹ 5000 ಕೋಟಿ:

ಲೋಕೋಪಯೋಗಿ ಇಲಾಖೆಯಲ್ಲಿ ₹ 4 ಸಾವಿರ ಕೋಟಿ, ಬೃಹತ್ ನೀರಾವರಿ ಇಲಾಖೆಯ ₹ 5 ಸಾವಿರ ಕೋಟಿ, ಸಣ್ಣ ನೀರಾವರಿ ಇಲಾಖೆಯ ₹ 2 ಸಾವಿರ ಕೋಟಿ ಮತ್ತು ಇತರೆ ಇಲಾಖೆಗಳ ಸುಮಾರು ₹ 12 ಸಾವಿರ ಕೋಟಿ ಬಾಕಿ ಇದೆ. ಹೀಗಾಗಿ ಗುತ್ತಿಗೆದಾರರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಬ್ಯಾಂಕಿನ ಸಾಲದ ಬಡ್ಡಿಯನ್ನು ತುಂಬಲಾಗದೇ ಯಂತ್ರೋಪಕರಣ ಮತ್ತು ಆಸ್ತಿಯನ್ನು ಬ್ಯಾಂಕಿನ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದಾರೆ. ಸಮಾಜದಲ್ಲಿ ಈ ರೀತಿ ಅವಮಾನವಾಗುತ್ತಿದ್ದು, ಗುತ್ತಿಗೆದಾರರು ಆತ್ಮಹತ್ಯ್ಯೆ ಮಾಡಿಕೊಳ್ಳುವ ಹಂತಕ್ಕೆ ತಲುಪಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಇತರೆ ಸಮಸ್ಯೆಗಳಿವು:

ಇತ್ತೀಚೆಗೆ ಕಾಂಟ್ರಾಕ್ಟ್‌ ಮ್ಯಾನೇಜ್‌ಮೆಂಟ್‌ ಮಾಡ್ಯುಲ್‌ ಸಿಸ್ಟಮ್‌ ಜಾರಿಗೆ ತಂದಿದ್ದು, ಈ ಪದ್ಧತಿಯ ಬಗ್ಗೆ ಸಣ್ಣ ಗುತ್ತಿಗೆದಾರರಿಗೆ ಸಂಪೂರ್ಣ ಮಾಹಿತಿ ಇಲ್ಲ. ಹೀಗಾಗಿ ₹ 5 ಕೋಟಿ ಮೇಲ್ಪಟ್ಟ ಟೆಂಡರ್‌ಗಳಿಗೆ ಮಾತ್ರ ಅಳವಡಿಸಬೇಕು. ಹಾಗೆಯೇ, ಲೋಕೋಪಯೋಗಿ ಇಲಾಖೆಯ ಟೆಂಡರ್‌ಗಳಲ್ಲಿ ಗುತ್ತಿಗೆದಾರರು ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಶೇ.5ಕ್ಕಿಂತ ಹೆಚ್ಚಿಗೆ ದರಗಳನ್ನು ನಮೂದಿಸಿದಲ್ಲಿ ಅದನ್ನು ಸರ್ಕಾರಕ್ಕೆ ಕಳಿಸುವ ನಿಯಮವಿದ್ದು, ಈ ನಿಯಮವನ್ನು ಬದಲಿಸಿ ಮುಖ್ಯ ಅಭಿಯಂತರರಿಗೆ ಟೆಂಡರ್‌ಗಳಿಗೆ ಅನುಮೋದನೆ ನೀಡುವ ನಿರ್ಧಾರವನ್ನು ಕೈಗೊಳ್ಳಬೇಕೆಂದರು.

ಇಲಾಖೆಯಲ್ಲಿ ಟೆಂಡರ್‌ ಕರೆಯುವಾಗ ಮಳೆಗಾಲ ಸಹಿತವಾಗಿ ಎಂದು ಟೆಂಡರ್‌ಗಳನ್ನು ಆಹ್ವಾನಿಸುತ್ತಿದ್ದು ಇದು ಅತ್ಯಂತ ಅವೈಜ್ಞಾನಿಕ. ಎಲ್ಲ ಟೆಂಡರ್‌ಗಳನ್ನು ಮಳೆಗಾಲ ಹೊರತುಪಡಿಸಿ ಎಂದು ಕರೆಯಬೇಕು. ಹಲವು ಕಾಮಗಾರಿಗಳ ಅಂದಾಜು ಪತ್ರಿಕೆ ಒಟ್ಟುಗೂಡಿಸಿ ಸಾಕಷ್ಟು ಕಾಮಗಾರಿಗಳನ್ನು ಪ್ಯಾಕೇಜ್‌ ಟೆಂಡರ್‌ ಸರಿಯಲ್ಲ. ಇದರಿಂದ ಸಾಕಷ್ಟು ಸಣ್ಣ ಮತ್ತು ಸ್ಥಳೀಯ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ ಎಂದ ಸುಭಾಸ ಪಾಟೀಲ, ರಾಷ್ಟ್ರೀಯ ಹೆದ್ದಾರಿ ಇಲಾಖೆಯಲ್ಲಿ ಗುಣ ಭರವಸೆ ವಿಭಾಗ, ಉಪ ವಿಭಾಗದಿಂದ ನಿರಾಕ್ಷೇಪಣಾ ಪತ್ರ ಪಡೆಯುವ ಬಗ್ಗೆ ಮತ್ತು ಕಾಮಗಾರಿ ಮುಕ್ತಾಯ ಪ್ರಮಾಣ ಪತ್ರದ ಬಗ್ಗೆ ಗುತ್ತಿಗೆದಾರರಲ್ಲಿ ಗೊಂದಲವಿದ್ದು ಸರಿಯಾಗಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಟಿಯಲ್ಲಿ ಪ್ರಧಾನ ಕಾರ್ಯದರ್ಶಿ ರವೀಂದ್ರ ಮಾನೆ, ಸಿ.ಆರ್‌. ರೂಢಗಿ, ಅಶೋಕ ಪಾಟೀಲ, ಬಿ.ಎಂ. ಪಾಟೀಲ, ಕೆ.ಎನ್‌. ಕಂಕಾಳೆ ಇದ್ದರು. ವಿಪರೀತ ಭ್ರಷ್ಟಾಚಾರ..

ಸರ್ಕಾರ ನಿಯಮಗಳನ್ನು ಮಾಡಿದ್ದು ಗುಣಮಟ್ಟದ ಕಾರ್ಯಕ್ಕಾಗಿ. ಆದರೆ, ಕೆಲವು ಇಲಾಖೆಗಳಲ್ಲಿ ಈ ನಿಯಮಗಳನ್ನು ಭ್ರಷ್ಟಾಚಾರಕ್ಕಾಗಿ ಬಳಸುತ್ತಿದ್ದಾರೆ. ಮುಂಗಡ ಹಣ ನೀಡದೇ ಯಾವುದೇ ಕೆಲಸ ಆಗುತ್ತಿಲ್ಲ, ಇಂತಹ ಅಧಿಕಾರಿಗಳು ಶಾಸಕರ ಕೈಗೊಂಬೆಯಂತೆ ವರ್ತಿಸುತ್ತಿದ್ದು, ಇನ್ನಿಲ್ಲದ ಅಕ್ರಮಗಳನ್ನು ಮಾಡುತ್ತಿದ್ದಾರೆ. ಈಗಾಗಲೇ ಭ್ರಷ್ಟ ಅಧಿಕಾರಿಗಳ ಪಟ್ಟಿಯನ್ನು ಸಂಘದಿಂದ ಸರ್ಕಾರಕ್ಕೆ ಮತ್ತು ಲೋಕಾಯುಕ್ತಕ್ಕೆ ಸಲ್ಲಿಸಲಾಗಿದೆ. ಅವರ ಮೇಲೆ ಕ್ರಮಕ್ಕೂ ಆಗ್ರಹಿಸಿದ್ದೇವೆ. ಅಲ್ಲದೇ, ಹಲವಾರು ವರ್ಷಗಳಿಂದ ಕೆಲವು ಅಧಿಕಾರಿಗಳು ಒಂದೇ ಸ್ಥಳದಲ್ಲಿದ್ದು, ಇದು ಭ್ರಷ್ಟಾಚಾರಕ್ಕೆ ನಾಂದಿಯಾಗಿದೆ ಎಂದು ಸುಭಾಸ ಪಾಟೀಲ ಹೇಳಿದರು.ಪೆಂಡಾಲ್‌, ಊಟದ ಸಮಸ್ಯೆ..

ಗುತ್ತಿಗೆದಾರರು ಕಾರ್ಯದೇಶ ಪಡೆದ ನಂತರ ಕ್ಷೇತ್ರ ಶಾಸಕರು ಕಾಮಗಾರಿ ಪ್ರಾರಂಭಿಸುವ ಮೊದಲು ಪೂಜೆ ಮಾಡಲು ತೀವ್ರ ಒತ್ತಾಯವಿದೆ. ಕ್ಷೇತ್ರ ಶಾಸಕರು ಬೇಗ ಪೂಜೆ ಮಾಡುವುದಿಲ್ಲ. ಈ ಪದ್ಧತಿ ಭ್ರಷ್ಟಾಚಾರಕ್ಕೆ ನಾಂದಿಯಾಗಿದೆ. ಅಲ್ಲದೇ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರಿಂದ ಶಾಸಕರು ಅವರ ಕಟೌಟ್‌ಗಳನ್ನು ಹಾಕಿಸುವುದು, ಪೂಜಾ ಸ್ಥಳದಲ್ಲಿ ಪೆಂಡಾಲ್‌ಗಳನ್ನು ಹಾಕಿಸುವುದು, ಶಾಸಕರ ಕಾರ್ಯಕರ್ತರಿಗೆ ಊಟಕ್ಕೆ ಹಾಕಿಸುವುದು ಇಂತಹ ಅನಗತ್ಯ ಖರ್ಚುಗಳಿಂದ ಗುತ್ತಿಗೆದಾರರಿಗೆ ಹೊರೆಯಾಗುತ್ತದೆ ಎಂದು ಸುಭಾಸ ಪಾಟೀಲ ಮನವಿ ಮಾಡಿದರು ಎಂದು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಂಗಡಗಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹ
ನೈಸರ್ಗಿಕ ಸಂಪನ್ಮೂಲ ಉಳಿಸಲು ಶ್ರಮಿಸಿ