ಶಕ್ತಿ ಯೋಜನೆ ಯಶಸ್ವಿಗೊಳಿಸಿದ ಸಾರಿಗೆ ನೌಕರರ ಋಣ ತೀರಿಸಿ

KannadaprabhaNewsNetwork |  
Published : Aug 06, 2025, 01:30 AM IST
ಮಲ್ಲಿಕಾರ್ಜುನ ಕೆಂಗನಾಳ | Kannada Prabha

ಸಾರಾಂಶ

ಕಾಂಗ್ರೆಸ್‌ ಸರ್ಕಾರದ ಪಂಚ ಗ್ಯಾರಂಟಿಯಲ್ಲಿಯೇ ಮಹತ್ವಾಕಾಂಕ್ಷಿ ಗ್ಯಾರಂಟಿಯಾದ ಶಕ್ತಿ ಯೋಜನೆಯನ್ನು 100ಕ್ಕೂ 100 ರಷ್ಟು ಯಶಸ್ವಿಗೊಳಿಸಿದ ಕೀರ್ತಿ ಸಾರಿಗೆ ಇಲಾಖೆ ನೌಕರರಿಗೆ ಸಲ್ಲಬೇಕು. ಹೀಗಾಗಿ ರಾಜ್ಯ ಸಾರಿಗೆ ಸಂಸ್ಥೆಗಳ ನೌಕರರ ಬೇಡಿಕೆಗಳನ್ನು ಈಡೇರಿಸುವ ಮೂಲಕ ಸಾರಿಗೆ ನೌಕರರ ಋಣವನ್ನು ರಾಜ್ಯ ಸರ್ಕಾರ ತೀರಿಸಬೇಕು ಎಂದು ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಕಾಂಗ್ರೆಸ್‌ ಸರ್ಕಾರದ ಪಂಚ ಗ್ಯಾರಂಟಿಯಲ್ಲಿಯೇ ಮಹತ್ವಾಕಾಂಕ್ಷಿ ಗ್ಯಾರಂಟಿಯಾದ ಶಕ್ತಿ ಯೋಜನೆಯನ್ನು 100ಕ್ಕೂ 100 ರಷ್ಟು ಯಶಸ್ವಿಗೊಳಿಸಿದ ಕೀರ್ತಿ ಸಾರಿಗೆ ಇಲಾಖೆ ನೌಕರರಿಗೆ ಸಲ್ಲಬೇಕು. ಹೀಗಾಗಿ ರಾಜ್ಯ ಸಾರಿಗೆ ಸಂಸ್ಥೆಗಳ ನೌಕರರ ಬೇಡಿಕೆಗಳನ್ನು ಈಡೇರಿಸುವ ಮೂಲಕ ಸಾರಿಗೆ ನೌಕರರ ಋಣವನ್ನು ರಾಜ್ಯ ಸರ್ಕಾರ ತೀರಿಸಬೇಕು ಎಂದು ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಒತ್ತಾಯಿಸಿದರು.ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 38 ತಿಂಗಳ ವೇತನ ಹೆಚ್ಚಳ, ಹಿಂಬಾಕಿ ಪಾವತಿ ಮತ್ತು ೨೦೨೪ರ ಜನವರಿಯಿಂದ ಹೊಸದಾಗಿ ವೇತನ ಹೆಚ್ಚಳಕ್ಕೆ ಆಗ್ರಹಿಸಿ ನಡೆಸಿರುವ ರಾಜ್ಯ ಸಾರಿಗೆ ಸಂಸ್ಥೆಗಳ ನೌಕರರ ಮುಷ್ಕರಕ್ಕೆ ರೈತ ಭಾರತ ಪಕ್ಷದಿಂದ ಬೆಂಬಲವಿದೆ. ನೌಕರರ ವಿರುದ್ಧ ಸರ್ಕಾರ ಏನಾದರೂ ಕ್ರಮಕ್ಕೆ ಮುಂದಾದರೇ ನೌಕರರ ಪರವಾಗಿ ಪಕ್ಷವು ಬೀದಿಗೆ ಇಳಿದು ಹೋರಾಟ ಮಾಡಲು ಸಿದ್ಧ ಎಂದು ಎಚ್ಚರಿಕೆ ನೀಡಿದರು.

ಸಾರಿಗೆ ನೌಕರರ ಬೇಡಿಕೆ ಈಡೇರಿಸಲು ಹಿಂಜರಿಯುವ ಸರ್ಕಾರ ತಮ್ಮ ಶಾಸಕರ ವೇತನ ಹೆಚ್ಚಳ ಮಾಡುವಾಗ ಯಾವ ಶಾಸಕರು ಬೀದಿಗಿಳಿದು ಪ್ರತಿಭಟನೆ ಮಾಡಿದ್ದರು? ಅವರಿಗೇಕೆ ವೇತನ ಹೆಚ್ಚಳ ಮಾಡಿದ್ದೀರಿ ಎಂದು ಪ್ರಶ್ನಿಸಿದರು.ತಮ್ಮ ಬೇಡಿಕೆಗಳಿಗೆ ಬದ್ಧರಾಗಿರುವ ಸಾರಿಗೆ ನೌಕರರು ತಮ್ಮ ನಿರ್ಧಾರದಿಂದ ಹಿಂದೆ ಸರಿಯದೇ ಮಂಗಳವಾರ ಬೆಳಗ್ಗೆಯಿಂದಲೇ ಮುಷ್ಕರ ನಡೆಸಿರುವುದರಿಂದ ರಾಜ್ಯಾದ್ಯಂತ ಬಸ್‌ಗಳ ಸೇವೆ ವ್ಯತ್ಯಯವಾಗಿ ಕೋಟಿಗೂ ಹೆಚ್ಚು ಪ್ರಯಾಣಿಕರು ಪರದಾಡಿರುವುದಕ್ಕೆ ಸರ್ಕಾರದ ಅವಿವೇಕತನವೇ ಕಾರಣವಾಗಿದೆ. ನೌಕರರ ಬೇಡಿಕೆಗಳಿಗೆ ಸ್ಪಂದಿಸಿದ್ದರೇ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗುತ್ತಿರಲಿಲ್ಲ ಎಂದು ಕಿಡಿಕಾರಿದರು.

ಮಾತುಕತೆ ವಿಫಲತೆಗೆ ಸರ್ಕಾರ ದಿವಾಳಿತನದ ಕೈಗನ್ನಡಿ:

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ನೌಕರರ ಸಂಘಟನೆಗಳು ಹಾಗೂ ಸರ್ಕಾರದ

ನಡುವೆ ನಡೆದ ಮಾತುಕತೆ ವಿಫಲವಾಗಲು ಸಿಎಂ ಸಿದ್ದರಾಮಯ್ಯನವರ ಸರ್ಕಾರದ ದಿವಾಳಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ನೌಕರರ ಬೇಡಿಕೆಯಂತೆ ೩೮ ತಿಂಗಳ ವೇತನ ಬಾಕಿ ಪಾವತಿ ಅಸಾಧ್ಯ. ಕೇವಲ ೧೪ ತಿಂಗಳ ಹಿಂಬಾಕಿ ನೀಡಲು ಸಿದ್ಧ ಎಂದು ಹೇಳುವ ಸಿಎಂ ಸಿದ್ದರಾಮಯ್ಯನವರ ಖಜಾನೆಯಲ್ಲಿ ಹಣವಿಲ್ಲ ಎನ್ನುವುದನ್ನು ಎತ್ತಿ ತೊರಿಸುತ್ತದೆ. ಅಂದಾಜಿನ ಪ್ರಕಾರ ೧೪ ತಿಂಗಳ ವೇತನ ಹಿಂಬಾಕಿಗೆ ₹೭೧೮ ಕೋಟಿಯಾದರೇ, ೩೮ ತಿಂಗಳ ವೇತನ ಹಿಂಬಾಕಿಗೆ ಸುಮಾರು ₹೨೦೦೦ ಕೋಟಿ ಬೇಕೆನ್ನುವುದು ಸಿದ್ದರಾಮಯ್ಯನವರಿಗೆ ತಿಳಿಯದಿರುವ ವಿಚಾರವೆನಲ್ಲ. ನಿಮ್ಮ ಶಕ್ತಿ ಯೋಜನೆ ಯಶಸ್ವಿ ಮಾಡಲು ಸಾರಿಗೆ ನೌಕರರು ಬೇಕು. ಅವರ ಬೇಡಿಕೆ ಈಡೇರಿಸಲು ಮಾತ್ರ ನೌಕರರು ಬೇಡವೇ ಎಂದು ಪ್ರಶ್ನಿಸಿದರು.

೨೦೨೦ರ ಜನವರಿಯಿಂದ ೨೦೨೩ರ ಫೆಬ್ರವರಿವರೆಗಿನ ೩೮ ತಿಂಗಳ ವೇತನ ಹೆಚ್ಚಳ ಹಿಂಬಾಕಿ ಹಾಗೂ

೨೦೨೪ರ ಜನವರಿಯಿಂದ ಅನ್ವಯವಾಗುವಂತೆ ಹೊಸದಾಗಿ ವೇತನವನ್ನು ಹೆಚ್ಚಳ ಮಾಡುವಂತೆ ಸಾರಿಗೆ ನೌಕರರ ಸಂಘಟನೆಗಳ ಬೇಡಿಕೆ ನ್ಯಾಯುತವಾಗಿದ್ದು, ಹೆಸ್ಕಾಂ ಸೇರಿದಂತೆ ಪೊಲೀಸ್‌ ಇಲಾಖೆಯ ನೌಕರರ ವೇತನ ಈಗಾಗಲೇ ಹೆಚ್ಚಿಸಿದಂತೆ ಇವರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 4 ನಿಗಮಗಳಿದ್ದು, ಸುಮಾರು ೨೬ ಸಾವಿರ ಬಸ್‌ಗಳನ್ನು ಹೊಂದಿರುವ ಸಂಸ್ಥೆಯಲ್ಲಿ ಸುಮಾರು ಲಕ್ಷಕ್ಕೂ ಅಧಿಕ ನೌಕರರು ತಮ್ಮ ಸೇವೆ ಸಲ್ಲಿಸುತ್ತಿರುವುದು ದೇಶದ ಸಾರಿಗೆ ಸಂಸ್ಥೆಯಲ್ಲಿಯೇ ಕರ್ನಾಟಕ ಸಾರಿಗೆ ಸಂಸ್ಥೆ ಉನ್ನತ ಸ್ಥಾನದಲ್ಲಿದೆ. ಇದಕ್ಕೆ ಕಾರಣವಾದ ನೌಕರರ ಹಿತರಕ್ಷಣೆಗೆ ಮುಂದಾಗದಿರುವ ಕಾಂಗ್ರೆಸ್‌ ಸರ್ಕಾರದ ನಡೆಗೆ ಮುಂದಿನ ದಿನಗಳಲ್ಲಿ ನೌಕರರು ಹಾಗೂ ಪ್ರಯಾಣಿಕರು ತಕ್ಕ ಉತ್ತರ ಕೊಡಲಿದ್ದಾರೆ ಎಂದು ಗುಡುಗಿದರು.೩೮ ತಿಂಗಳ ವೇತನ ಹೆಚ್ಚಳ, ಹಿಂಬಾಕಿ ಪಾವತಿ ಮತ್ತು ೨೦೨೪ರ ಜನವರಿಯಿಂದ ಹೊಸದಾಗಿ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಸಾರಿಗೆ ನೌಕರರ ಮುಷ್ಕರ ನ್ಯಾಯುತವಾಗಿದ್ದು, ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮುಂದಾಗಬೇಕು. ಇಂತಹ ಸಂದರ್ಭದಲ್ಲಿ ಸರ್ಕಾರ ವಿವೇಕತನದಿಂದ ವರ್ತಿಸಬೇಕಾಗಿದ್ದು, ನೌಕರರ ಬೇಡಿಕೆಗಳನ್ನು ಶೀಘ್ರ ಈಡೇರಿಸಲೇ ಬೇಕು.

-ಮಲ್ಲಿಕಾರ್ಜುನ ಕೆಂಗನಾಳ, ರಾಜ್ಯಾಧ್ಯಕ್ಷ, ರೈತ ಭಾರತ ಪಕ್ಷ.

PREV

Recommended Stories

ಧರ್ಮಸ್ಥಳ ಗ್ರಾಮದಲ್ಲಿ ಕಳೇಬರ ಸಿಗದಿದ್ರೆ ಮುಸುಕುಧಾರಿ ಲೋಪವಲ್ಲ
ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ 35 ಬೀದಿ ನಾಯಿಗಳ ಬಂಧನ