ಸೌಹಾರ್ದತೆ, ಶಾಂತಿಯುತವಾಗಿ ಹಬ್ಬಗಳ ಆಚರಣೆಯಾಗಲಿ: ಇನ್ಸ್ಪೆಕ್ಟರ್ ಜಾನ್ಸನ್ ಡಿಸೋಜ
ಕನ್ನಡಪ್ರಭವಾರ್ತೆ ಪುತ್ತೂರುಸೌಹಾರ್ದತೆ, ಸಮನ್ವಯತೆಯಿಂದ ಹಾಗೂ ಶಾಂತಿಯುತವಾಗಿ ಹಬ್ಬಗಳ ಆಚರಣೆ ನಡೆಯಬೇಕು. ಸಾರ್ವಜನಿಕರು ಈ ನಿಟ್ಟಿನಲ್ಲಿ ಸಹಕಾರ ನೀಡಬೇಕು. ವಾಟ್ಸಪ್ಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಬೇಡಿ. ಯಾವುದೇ ಘಟನೆಗಳಿಗೆ ಸಂಬಂಧಿಸಿದಂತೆ ಅನುಮಾನಗಳಿದ್ದರೆ ನಮ್ಮಲ್ಲಿ ಮಾಹಿತಿ ಕೇಳಿ. ನಾವು ಸರಿಯಾದ ಮಾಹಿತಿ ನೀಡುತ್ತೇವೆ ಎಂದು ಪುತ್ತೂರು ನಗರ ಪೊಲೀಸ್ ಇನ್ಸ್ಪೆಕ್ಟರ್ ಜಾನ್ಸನ್ ಡಿಸೋಜ ವಿನಂತಿಸಿದ್ದಾರೆ.ಅವರು ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ನಡೆಸಲಾದ ಶಾಂತಿ ಸಭೆಯಲ್ಲಿ ಮಾತನಾಡಿದರು.
ಮಾ. 31 ರಂದು ರಂಜಾನ್ ಹಬ್ಬ ನಡೆಯಲಿದ್ದು, ಯಾವುದೇ ಮೆರವಣಿಗೆಗಳು ನಡೆಯುತ್ತಿಲ್ಲ. ಮಸೀದಿಗಳಲ್ಲಿ ಮಾತ್ರ ಕಾರ್ಯಕ್ರಮಗಳು ನಡೆಯುತ್ತವೆ ಎಂದು ಸಭೆಯಲ್ಲಿ ಮಾಹಿತಿ ನೀಡಿದರು.ಬಿಜೆಪಿ ಮುಖಂಡ ಮುರಳೀಕೃಷ್ಣ ಹಸಂತಡ್ಕ ಮಾತನಾಡಿ, ರಂಜಾನ್ ಹಬ್ಬದ ಸಂದರ್ಭದಲ್ಲಿ ಅಕ್ರಮ ಗೋ ಸಾಗಾಟಕ್ಕೆ ಆಸ್ಪದ ನೀಡಬಾರದು. ಗಾಂಜಾ, ಡ್ರಗ್ಸ್ ಮಾಫಿಯ ಎಲ್ಲಾ ಸಮುದಾಯದ ಯುವಕರಲ್ಲಿ ಸಿಕ್ಕಾಪಟ್ಟೆ ಹೆಚ್ಚಾಗುತ್ತಿದ್ದು, ವಾಟ್ಸಪ್ ಗ್ರೂಪ್ ಮಾಡಿ ಆ ಮೂಲಕ ಮಾದಕ ವಸ್ತುಗಳ ವ್ಯವಹಾರ ಮಾಡುತ್ತಿರುವುದೂ ನಮ್ಮ ಗಮನಕ್ಕೆ ಬಂದಿದೆ. ಇದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.ಇತ್ತೀಚೆಗೆ ನೈತಿಕ ಪೊಲೀಸ್ಗಿರಿ ಕಡಿಮೆಯಾಗಿದೆ. ಅದಕ್ಕೆ ಕಾನೂನಿನಲ್ಲಿ ಅವಕಾಶವೂ ಇರುವುದಿಲ್ಲ. ಡ್ರಗ್ಸ್ ಬಗ್ಗೆ ತಿಳಿದುಬಂದರೆ ಮೇಲಾಧಿಕಾರಿಗಳಿಗೂ ಮಾಹಿತಿ ನೀಡುವ ಅವಕಾಶವಿದೆ. ಒಮ್ಮೆ ಡ್ರಗ್ಸ್ ತೆಗೆದುಕೊಂಡರೆ 3 ತಿಂಗಳು ದೇಹದಲ್ಲಿ ಇರುತ್ತದೆ. ಎಲ್ಲರೂ ಸಮನ್ವಯದಿಂದ ಜಾಗೃತಿ ಕೆಲಸ ಮಾಡೋಣ ಎಂದು ಇನ್ಸ್ಪೆಕ್ಟರ್ ತಿಳಿಸಿದರು.ಕಾಂಗ್ರೆಸ್ ಮುಖಂಡ ಎ. ಹೇಮನಾಥ ಶೆಟ್ಟಿ ಮಾತನಾಡಿ, ಪೊಲೀಸರ ಮೇಲೆ ಬಹಳಷ್ಟು ನಿರೀಕ್ಷೆ ಇದೆ. ಮಾದಕ ವಸ್ತುಗಳ ವ್ಯವಹಾರಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಳ್ಳಬೇಕು. `ಪೊಲೀಸ್ ಗಿರಿ ಕಠಿಣವಾಗಿ ಮಾಡಿದರೆ ಉಳಿದವರ ಹಸ್ತಕ್ಷೇಪ ತಡೆಯಲು ಸಾಧ್ಯವಿದೆ. ಈ ವಿಚಾರದಲ್ಲಿ ಕಾಂಪ್ರಮೈಸ್ ನಡೆಸುವುದು ಬೇಡ. ಜನರಿಗೆ ಪೊಲೀಸ್ ಭಯ ಇರಬೇಕು ಎಂದು ತಿಳಿಸಿದರು. ಸಭೆಯಲ್ಲಿ ಸಬ್ ಇನ್ಸ್ಪೆಕ್ಟರ್ ಅಂಜನೇಯ ರೆಡ್ಡಿ, ವಿಹಿಂಪ ಪುತ್ತೂರು ಜಿಲ್ಲಾಧ್ಯಕ್ಷ ಡಾ. ಕೃಷ್ಣ ಪ್ರಸನ್ನ, ಪ್ರಮುಖರಾದ ದಾಮೋದರ ಪಾಟಾಲಿ, ಸೀತಾರಾಮ ಶೆಟ್ಟಿ ಕೆದಂಬಾಡಿಗುತ್ತು, ಅಬ್ದುಲ್ ಹಮೀದ್ ಸಾಲ್ಮರ, ನ್ಯಾಯವಾದಿ ನೂರುದ್ದಿನ್ ಸಾಲ್ಮರ, ರವಿ ಪ್ರಸಾದ್ ಶೆಟ್ಟಿ, ಮೌರಿಸ್ ಮಾಸ್ಕರೇನಸ್, ಯಾಕೂಬ್ ಮುಲಾರ್ ಮತ್ತಿತರರು ಉಪಸ್ಥಿತರಿದ್ದರು.