ದಾವಣಗೆರೆ: ತ್ಯಾಗ, ಬಲಿದಾನ ಹಾಗೂ ಬ್ರಾತೃತ್ವದ ಸಂಕೇತವಾದ ಬಕ್ರೀದ್ ಹಬ್ಬವನ್ನು ನಗರ, ಜಿಲ್ಲಾದ್ಯಂತ ಮುಸ್ಲಿಂ ಧರ್ಮೀಯರು ಶ್ರದ್ಧಾ, ಭಕ್ತಿಯಿಂದ ಶನಿವಾರ ಆಚರಿಸಿದರು.
ಹಬ್ಬದ ಹಿನ್ನೆಲೆಯಲ್ಲಿ ನಗರದ ಹಳೆ ಪಿಬಿ ರಸ್ತೆಯ ಈದ್ಗಾ ಮೈದಾನ, ಹೊಸ ಈದ್ಗಾ ಮೈದಾನ, ಇಂಡಸ್ಟ್ರಿಯಲ್ ಏರಿಯಾ ಸೇರಿದಂತೆ ನಗರದ ವಿವಿಧೆಡೆ ಮುಸ್ಲಿಂ ಧರ್ಮೀಯರ ಪುರುಷರು, ಹಿರಿಯರು, ಯುವಕರು, ಮಕ್ಕಳು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.ರಂಜಾನ್ ಹಬ್ಬದ ನಂತರ ಮುಸ್ಲಿಂ ಧರ್ಮೀಯರ ಪ್ರಮುಖ ಹಬ್ಬವಾದ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಸ್ನಾನಾದಿಗಳ ನಂತರ ಹೊಸ ಹೊಸ ವಸ್ತ್ರಗಳನ್ನು ಧರಿಸಿದ ಮಕ್ಕಳಾದಿಯಾಗಿ ಹಿರಿಯ ನಾಗರಿಕರವರೆಗೆ ಖಬರಸ್ಥಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥಿಸಿ ಉತ್ತಮ ಮಳೆ, ಬೆಳೆ, ಸುಖ, ಶಾಂತಿ, ನೆಮ್ಮದಿ, ಸಮೃದ್ಧಿಗಾಗಿ ಪ್ರಾರ್ಥಿಸಿದರು.
ಮುಸ್ಲಿಂ ಧರ್ಮ ಗುರುಗಳು ಬಕ್ರೀದ್ ಹಬ್ಬ ಸಂದೇಶ ನೀಡಿ, ಹಬ್ಬದ ಆಚರಣೆ, ದಾನ-ಧರ್ಮದ ಮಹತ್ವದ ಕುರಿತು ಬೋಧಿಸಿದರು. ಸಾಮೂಹಿಕ ಪ್ರಾರ್ಥನೆಯಲ್ಲಿ ಮಕ್ಕಳಿಂದ ವಯೋವೃದ್ಧ ರವೆರೆಗೆ ಭಾಗಿಯಾಗಿದ್ದರು. ನಂತರ ಪರಸ್ಪರರಿಗೆ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.ಸಮಾಜದ ಮುಖಂಡರಾದ ಸೈಯದ್ ಸೈಫುಲ್ಲಾ, ವಿಪ ಸದಸ್ಯ ಕೆ.ಅಬ್ದುಲ್ ಜಬ್ಬಾರ್, ತಂಜೀಮುಲ್ ಮುಸ್ಲಿಮೀನ್ ಫಂಡ್ ಅಸೋಸಿಯೇಷನ್ ಅಧ್ಯಕ್ಷ ದಾದು ಸೇಠ್, ಮುಖಂಡರಾದ ಮಾಜಿ ಮೇಯರ್ ಕೆ.ಚಮನ್ ಸಾಬ್, ಸಾದಿಕ್ ಪೈಲ್ವಾನ್, ಅಬ್ದುಲ್ ಲತೀಫ್, ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಸೈಯದ್ ಖಾಲಿದ್ ಅಹ್ಮದ್, ಟಾರ್ಗೆಟ್ ಅಸ್ಲಂ, ಕೋಳಿ ಇಬ್ರಾಹಿಂ ಸಾಬ್, ಜೆ.ಅಮಾನುಲ್ಲಾ ಖಾನ್ ಸೇರಿದಂತೆ ಸಮಾಜದ ಮುಖಂಡರು, ಸಮಾಜ ಬಾಂಧವರು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.
ಪೊಲೀಸರಿಂದ ಬಿಗಿ ಬಂದೋಬಸ್ತ್:ಬಕ್ರೀದ್ ಹಿನ್ನೆಲೆ ದಾವಣಗೆರೆ ನಗರ, ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಮುಂಜಾಗ್ರತೆಯಾಗಿ ಪೊಲೀಸ್ ಇಲಾಖೆಯು ಹಳೆ ಪಿಬಿ ರಸ್ತೆಯಲ್ಲಿ ಸಾಮೂಹಿಕ ಪ್ರಾರ್ಥನೆಯ ವೇಳೆ ವಾಹನ ಸಂಚಾರಕ್ಕೆ ಬದಲಿ ಮಾರ್ಗದ ವ್ಯವಸ್ಥೆ ಮಾಡಿತ್ತು. ಸಿಸಿ ಕ್ಯಾಮೆರಾಗಳ ಜೊತೆಗೆ ಡ್ರೋನ್ ಕ್ಯಾಮೆರಾಗಳ ಕಣ್ಗಾವಲೂ ಇತ್ತಲ್ಲದೇ, ಸೋಷಿಯಲ್ ಮೀಡಿಯಾಗಳ ಮೇಲೆ ಇಲಾಖೆ ನಿಗಾ ವಹಿಸಿತ್ತು. ಇಡೀ ನಗರ, ಜಿಲ್ಲಾದ್ಯಂತ ಶಾಂತಿ, ಸಾಮರಸ್ಯದಿಂದ ಹಬ್ಬ ಆಚರಣೆಯಾಯಿತು.