ಕನ್ನಡಪಪ್ರಭ ವಾರ್ತೆ ಶಿವಮೊಗ್ಗ ಅಡಕೆ ಬೆಳೆಗಾರರು ರೋಗಬಾಧೆ, ಪ್ರಾಕೃತಿಕ ವಿಕೋಪ, ಇತರೆ ಸವಾಲುಗಳನ್ನು ಎದುರಿಸುತ್ತಿದ್ದು, ವಿಜ್ಞಾನಿಗಳು ಅಡಕೆಯ ಉತ್ತಮ ತಳಿ, ರೋಗ ನಿರ್ವಹಣೆ ಕುರಿತು ಹೆಚ್ಚು ಅಧ್ಯಯನ ನಡೆಸುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಹೇಳಿದರು. ನಗರದ ನವುಲೆಯ ಕೃಷಿ ಕಾಲೇಜಿನಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಅಡಕೆ ಸಂಶೋಧನಾ ಕೇಂದ್ರ ಶಿವಮೊಗ್ಗ ಹಾಗೂ ಐಸಿಎಆರ್- ಸಿಪಿಸಿಆರ್ಐ ಕಾಸರಗೋಡು, ಡಿಎಎಸ್ಡಿ ಕ್ಯಾಲಿಕಟ್, ಕ್ಯಾಂಪ್ಕೊ, ಮಾಮ್ಕೋಸ್, ತುಮ್ಕೋಸ್, ಅಡಕೆ ಪತ್ರಿಕೆ, ಅಮೃತ್ ನೋನಿ, ಕ್ರಾಸ್ಮ್, ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಅಡಕೆ ಮೌಲ್ಯವರ್ಧಿತ ಉತ್ಪನ್ನಗಳು’ ಕುರಿತಾದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಡಕೆ ಬೆಳೆಯುತ್ತಿದ್ದಾರೆ. ಆದರೆ, ರೈತರು ರೋಗಬಾಧೆ, ಪ್ರಾಕೃತಿಕ ವಿಕೋಪ, ಇತರೆ ಸವಾಲುಗಳನ್ನು ಎದುರಿಸಿ ಅಡಕೆ ಬೆಳೆ ಬೆಳೆಯುತ್ತಿದ್ದಾರೆ. ವಿಜ್ಞಾನಿಗಳು ಅಡಕೆಯ ಉತ್ತಮ ತಳಿ, ರೋಗ ನಿರ್ವಹಣೆ ಕುರಿತು ಹೆಚ್ಚು ಅಧ್ಯಯನ ಮಾಡಿ, ರೈತರು ಒಳ್ಳೆಯ ಇಳುವರಿ ಪಡೆಯಲು ಸಹಕರಿಸಬೇಕು ಎಂದರು. ಅಡಕೆಯ ಮೌಲ್ಯವರ್ಧನೆ ಮಾಡಿ ಉತ್ತಮ ಆದಾಯ ಗಳಿಸಲು ಸಾಕಷ್ಟು ಸಾಧ್ಯತೆಗಳಿದ್ದು, ಈ ನಿಟ್ಟಿನಲ್ಲಿ ರೈತರು ಗಮನ ಹರಿಸಬೇಕು. ಅಡಕೆ ಸಿಪ್ಪೆ ಕೂಡ ತ್ಯಾಜ್ಯವಲ್ಲ. ಅದನ್ನು ಎಲ್ಲೆಂದರಲ್ಲಿ ಹಾಕದೇ, ಸುಡದೇ, ಸಿಪ್ಪೆ ಬಗ್ಗೆ ಸಹ ಕಾಳಜಿ ತೋರಿ ಗೊಬ್ಬರ ತಯಾರಿಸಬಹುದು. ರೈತರಿಗೆ ಉತ್ತಮ ಬೆಲೆ ಸಿಗಬೇಕು ಎಂದು ಹೇಳಿದರು. ಅಡಕೆ ಮೌಲ್ಯವರ್ಧನೆಗೆ ಸಾಕಷ್ಟು ಅವಕಾಶಗಳು, ಸಾಧ್ಯತೆಗಳಿವೆ ಎಂದು ಯುವ ಉದ್ಯಮಿಗಳು ತೋರಿಸಿದ್ದಾರೆ. ಮೌಲ್ಯವರ್ಧನೆಗೆ ಸಂಬಂಧಿಸಿದಂತೆ ಕೌಶಲ್ಯಾಭಿವೃದ್ದಿ ಇಲಾಖೆ, ಬ್ಯಾಂಕ್ ಲಿಂಕೇಜ್, ಸಾಲ ಸೌಲಭ್ಯ ಸೇರಿದಂತೆ ಅಗತ್ಯ ಸಹಕಾರವನ್ನು ವಿಶ್ವವಿದ್ಯಾಲಯಕ್ಕೆ ತಾವು ನೀಡಲು ಸಿದ್ಧವಿದ್ದು ಉಪಯೋಗ ಪಡೆಯಬೇಕು. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಮೌಲ್ಯವರ್ಧಿತ ಉತ್ಪನ್ನಗಳ ವಸ್ತು ಪ್ರದರ್ಶನವನ್ನು ಮಾಡಿ, ಹೆಚ್ಚು ಜನರನ್ನು ತಲುಪಬೇಕು ಎಂದರು. ಕಾಸರಗೋಡಿನ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯ ಬೇಸಾಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ರವಿ ಭಟ್ ಮಾತನಾಡಿ, ಅಡಕೆ ಇಳುವರಿ ಹೆಚ್ಚುವುದು, ಉತ್ತಮ ತಳಿ ಹಾಕುವುದು, ವೈಜ್ಞಾನಿಕ ಬೆಳೆ ಬೆಳೆಯುವುದು, ಉತ್ಪಾದನಾ ವೆಚ್ಚ ಕಡಿಮೆ ಮಾಡಿ, ಉತ್ತಮ ಆದಾಯ ಪಡೆಯುವುದು ಇದೆಲ್ಲವರೂ ಅಡಕೆಯ ಮೌಲ್ಯವರ್ಧನೆ ಆಗುತ್ತದೆ ಎಂದು ಹೇಳಿದರು. ಮೇಘಾಲಯದಲ್ಲಿ ಒಂದು ತಂಡ ಶೇ.60 ಅಡಕೆ ಸಿಪ್ಪೆ ಬಳಸಿ ಬಟ್ಟೆ ತಯಾರಿಸಿದೆ. ಅಡಕೆ ಸಿಪ್ಪೆ, ಸೋಗೆ ಬಳಸಿ ಅಣಬೆ ಬೆಳೆಯಲಾಗುತ್ತಿದೆ. ಅಡಕೆ ಸಿಪ್ಪೆ, ಸೋಗೆಯಿಂದ ಗೊಬ್ಬರ ಮಾಡಬಹುದು. ಅಡಕೆಯಲ್ಲಿ ಔಷಧೀಯ ಗುಣಗಳು ಕೂಡ ಹೆಚ್ಚಿರುವುದು ಕಂಡುಬಂದಿದೆ. ದೇಹದಲ್ಲಿನ ಫ್ರೀ ರ್ಯಾಡಿಕಲ್ಸ್ ನಿರ್ಮೂಲನೆ ಮಾಡಲು ಸಹಕರಿಸುತ್ತದೆ. ರೋಗ ನಿರ್ಮೂಲನೆ, ಸಕ್ಕರೆ ಕಾಯಿಲೆಯಲ್ಲಿ ಸಹ ಅಡಕೆ ಸಹಕಾರಿಯಾಗಿದ್ದು, ವಿಶಿಷ್ಟ ಅಂಶಗಳನ್ನು ಹೊಂದಿರುವ ಅಡಕೆ ಮೌಲ್ಯವರ್ಧನೆಯಿಂದ ರೈತರು ಹೆಚ್ಚು ಆದಾಯ ಗಳಿಸಬಹುದು ಎಂದರು. ಅಡಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥರ ಡಾ.ನಾಗರಾಜಪ್ಪ ಅಡಿವಪ್ಪರ್ ಮಾತನಾಡಿ, ಇಂದಿನ ಕಾರ್ಯಾಗಾರದಲ್ಲಿ ಹೊರದೇಶದಿಂದ, ಹೊರ ರಾಜ್ಯಗಳಿಂದ ಪ್ರತಿನಿಧಿಗಳು, ನೂರಾರು ವಿಜ್ಞಾನಿಗಳು, ನವೋದ್ಯಮಿಗಳು, ವಿದ್ಯಾರ್ಥಿಗಳು, ರೈತರು, ಅಧಿಕಾರಿಗಳು ಪಾಲ್ಗೊಂಡಿದ್ದು, 2 ತಾಂತ್ರಿಕ ಗೋಷ್ಟಿಗಳು ಮತ್ತು 1 ವಸ್ತುಪ್ರದರ್ಶನ ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಸದಸ್ಯ ಕೆ.ನಾಗರಾಜ್, ಶಿಕ್ಷಣ ನಿರ್ದೇಶಕ ಹೇಮ್ಲಾನಾಯ್ಕ್, ಡಾ.ಪ್ರದೀಪ್ ಎಸ್, ಡಾ. ಕೆ.ಟಿ. ಗುರುಮೂರ್ತಿ, ಡಾ.ತಿಪ್ಪೇಶ್, ಡಾ. ಆರ್.ಗಣೇಶ್ ನಾಯ್ಕ್ ಮತ್ತಿತರರು ಇದ್ದರು. - - - ಬಾಕ್ಸ್ ಅಡಕೆ ಮೌಲ್ಯವರ್ಧನೆ ಕುರಿತು ಇನ್ನೂ ಸಾಕಷ್ಟು ಅನ್ವೇಷಣೆಗಳು ಆಗಬೇಕಿದೆ. ಬಾಂಗ್ಲಾ, ಮ್ಯಾನ್ಮಾರ್ ಇನ್ನಿತರೆ ದೇಶಗಳು ಅಡಕೆ ಬೆಳೆಯುತ್ತಿದ್ದರೂ, ಭಾರತದ ಕೊಡುಗೆ ಶೇ.60 ರಷ್ಟಿದೆ. ಅದರಲ್ಲೂ ಕರ್ನಾಟಕದ ಪಾಲು ಶೇ.80ರಷ್ಟಿದೆ. ರಾಷ್ಟ್ರೀಯ ವಿಜ್ಞಾನ ಸಮಿತಿಯು ಅಡಕೆಯ ಔಷಧೀಯ ಉಪಯೋಗಗಳು, ಮಾನವನ ಆರೋಗ್ಯದ ಮೇಲೆ ಅಡಕೆಯ ಪ್ರಭಾವ ಹಾಗೂ ಅಡಕೆಯ ವಿತರಣೆ ಮತ್ತು ಬಳಕೆ ಇವುಗಳ ಅಧ್ಯಯನ ನಡೆಸುತ್ತಿದೆ. ಅಡಕೆಯಿಂದ ನೈಸರ್ಗಿಕ ಬಣ್ಣ ತಯಾರಿಕೆ ಕೂಡ ಒಂದು ಉತ್ತಮ ಬೆಳವಣಿಗೆಯಾಗಿದ್ದು, ತಾಂತ್ರಿಕತೆಯಿಂದ ಅಡಕೆಯ ಮೌಲ್ಯವರ್ಧನೆ ಹೆಚ್ಚುವೆಡೆ ಗಮನ ಹರಿಸಬೇಕು - ಡಾ.ಫೆಮಿನಾ, ಉಪನಿರ್ದೇಶಕಿ, ಕ್ಯಾಲಿಕಟ್ನ ಡಿಎಎಸ್ಡಿ - - - -10ಎಸ್ಎಂಜಿಕೆಪಿ02: ಕಾರ್ಯಾಗಾರವನ್ನು ಉದ್ಘಾಟಿಸಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಮಾತನಾಡಿದರು.