ಕನ್ನಡಪ್ರಭ ವಾರ್ತೆ ಆಳಂದ
ಜನರಿಗೆ ಐದು ಗ್ಯಾರಂಟಿಗಳನ್ನು ನೀಡಿದ ರಾಜ್ಯ ಸರ್ಕಾರದ ಖಜಾನೆ ಖಾಲಿಯಿದೆ ಎಂದು ಟೀಕಿಸುವವರು ಮೊದಲು ಅರ್ಥಮಾಡಿಕೊಳ್ಳಬೇಕು. ಸರ್ಕಾರದದ ಖಜಾನೆ ಖಾಲಿಯಾದರು ಸಹ ಖಜಾನೆಯಲಿರುವ ಜನರ ದುಡ್ಡು ಜನರಿಗೆ ಕೊಡುತ್ತಿದೆ ವ್ಯರ್ಥವಾಗಿಲ್ಲ ಎಂದು ಸಿಎಂ ಸಲಹೆಗಾರ ಶಾಸಕ ಬಿ.ಆರ್. ಪಾಟೀಲ ಅವರು ಅಪರೋಕ್ಷವಾಗಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.ಪಟ್ಟಣದ ಶ್ರೀರಾಮ ಮಾರುಕಟ್ಟೆಯಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಗಣರಾಜ್ಯೋತ್ಸವ ಅಂಗವಾಗಿ ಸಾರ್ವಜನಿಕ ಧ್ವಜರೋಹಣ ನೆರವೇರಿಸಿ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಾತಿ ಧರ್ಮದ ಹೆಸರಿನಲ್ಲಿ ಒಡೆದಾಳುವುದು ಸರಿಯಲ್ಲ. ಗ್ಯಾರಂಟಿಗಳಿಂದ ಕರ್ನಾಟಕದ ಜನತೆ ಪ್ರಸನ್ನನಾಗಿದ್ದಾರೆ. ಕರ್ನಾಟಕ ಜನತೆ ನಮ್ಮ ಸರ್ಕಾರಕ್ಕೆ ಅಭಿನಂದನೆ ಕೂಡ ಸಲ್ಲಿಸಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದು ಮೇಲೆ ಪ್ರಗತಿ ಸಾಕಷ್ಟಾಗಿದ್ದರೂ ಸಾಧನೆ ಇನ್ನೂ ಸಾಕಷ್ಟು ಬಾಕಿಯಿದೆ ಎಂದರು.ಭಾರತವನ್ನ ಒಂದು ಸಮೃದ್ಧ ಸಮಾಜವಾದಿ ಸಂಕಲ್ಪ ದಿನವನ್ನಾಗಿ ಇಡೀ ಜಗತ್ತಿನಲ್ಲಿ ಒಂದು ಅತ್ಯಂತ ಆದರ್ಶವಾದಂತ ಸಂವಿಧಾನವನ್ನ ಡಾ. ಬಿ.ಆರ್. ಅಂಬೇಡ್ಕರ್ ಅವರು ನಮಗೆ ಬರೆದುಕೊಟ್ಟಿದ್ದಾರೆ. ದೇಶದಲ್ಲಿ ಧಾರ್ಮಿಕ ಭಾವನೆಯನ್ನು ಕೆರಳಿಸಿ ಧರ್ಮ ಧರ್ಮಗಳ ಬಗ್ಗೆ ಸಂಘರ್ಷ ನಿರ್ಮಾಣ ಮಾಡುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ಕಣ್ಣೆ, ಕ್ಷೇತ್ರ ಶಿಕ್ಷಣಾಧಿಕಾರಿ ಹಣಮಂತ ರಾಠೋಡ, ಸಿಪಿಐ ಮಹಾದೇವ ಪಂಚಮುಖಿ, ಪ್ರಕಾಶ ಯಾತ್ನೂರ, ಗ್ರೇಡ್-2 ತಹಸೀಲ್ದಾರ ಬಿ.ಜಿ. ಕುದರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ತಾಪಂ ಇಒ ಮಾನಪ್ಪ ಕಟ್ಟಿಮನಿ ಪ್ರಾಸ್ತಾವಿಕ ಮಾತನಾಡಿದರು. ತಹಸೀಲ್ದಾರ್ ಯಲ್ಲಪ್ಪ ಸುಬೇದಾರ ಸ್ವಾಗತಿಸಿದರು. ಸಿಆರ್ಸಿ ನಾಗೇಂದ್ರ ಗಾಡೆ ಸಮನ್ವಯಾಧಿಕಾರಿ ಕೊಳಶೆಟ್ಟಿ ನಿರೂಪಿಸಿದರು. ಇಸಿಒ ಶ್ರೀಮಂತ ಪಾಟೀಲ ವಂದಿಸಿದರು.