ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಹೋಬಳಿ ಮಟ್ಟದಲ್ಲಿಯೇ ‘ಜನಸ್ಪಂದನಾ’ ಕಾರ್ಯಕ್ರಮ: ಜಿಲ್ಲಾಧಿಕಾರಿ ಶಿಲ್ಪಾನಾಗ್

KannadaprabhaNewsNetwork | Published : Jul 27, 2024 12:48 AM

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಲೊಕ್ಕನಹಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಉಪಸ್ಥಿತಿಯಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆಯಿತು.

ಅಹವಾಲು, ಮನವಿ ಸಲ್ಲಿಕೆ ಕನ್ನಡಪ್ರಭ ವಾರ್ತೆ ಹನೂರು

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಲೊಕ್ಕನಹಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಉಪಸ್ಥಿತಿಯಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ವಿವಿಧ ಗ್ರಾಮಗಳ ಜನತೆ ತಮ್ಮ ಕುಂದುಕೊರತೆಗಳ ಬಗ್ಗೆ ಅಹವಾಲು ಮತ್ತು ಮನವಿಯನ್ನು ಸಲ್ಲಿಸಿದರು. ಅಕ್ರಮ ಒತ್ತುವರಿ ಮಾಡಿಕೊಂಡಿರುವ ರಸ್ತೆ ದಾರಿ ಬಿಡಿಸಿಕೊಡಲು, ಕಾಡು ಪ್ರಾಣಿಗಳ ಹಾವಳಿ ಸಮಸ್ಯೆ, ವಸತಿ ಸೌಲಭ್ಯ ಕಲ್ಪಿಸುವುದು, ವಿದ್ಯುತ್ ಸಂಬಂಧಿತ ಸಮಸ್ಯೆಗಳು, ವಿಶೇಷ ಚೇತನ ಸೌಲಭ್ಯ ಸೇರಿದಂತೆ ಇನ್ನಿತರೆ ಪಿಂಚಣಿ ಸೌಲಭ್ಯ ಸ್ಥಗಿತಗೊಂಡಿರುವುದರಿಂದ ಅನುಕೂಲ ಕಲ್ಪಿಸಲು ಅಳಲು ತೋಡಿಕೊಂಡರು. ಇದೇ ರೀತಿ ವಿವಿಧ ಇಲಾಖೆಗಳಿಂದ ಆಗಬೇಕಾದ ಸೌಕರ್ಯ ಕಲ್ಪಿಸುವ ಸಂಬಂಧ ಮನವಿ ಸಲ್ಲಿಸಿದರು.

ಲೊಕ್ಕನಹಳ್ಳಿ ಸುತ್ತಮುತ್ತ ಕಾಡು ಪ್ರಾಣಿಗಳ ಹಾವಳಿಯಿಂದ ರಕ್ಷಣೆ ಒದಗಿಸಲು ಕ್ರಮವಹಿಸಲು ಒತ್ತಾಯಿಸಿದರು. ಇದೇ ವೇಳೆ ಚಿರತೆ ಹಾವಳಿ ಬಗ್ಗೆ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದರೆ ಚಿರತೆ ನಾಯಿ ತಿಂದರೆ ತಿಂದು ಹೋಗಲಿ ಎಂದು ಉಡಾಫೆ ಉತ್ತರಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನೆಲ್ಲಿಕತ್ರಿ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ಕಟ್ಟುವುದಕ್ಕೆ ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿರುವ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ಮಾಹಿತಿ ಪಡೆದ ಡಿಸಿ "ಅರಣ್ಯ ಇಲಾಖೆಯವರೇ ಜನತೆಗೆ ಅಂಗನವಾಡಿ ಕಟ್ಟಲು ಅವಕಾಶ ಮಾಡಿ ಕೊಡಬೇಕು. ಅವರೇನು ನಿಮ್ಮ ಜಾಗದಲ್ಲಿ ರೆಸಾರ್ಟ್ ಕಟ್ಟುತ್ತಿದ್ದಾರಾ " ಎಂದು ಗರಂ ಆದರು. ಅಲ್ಲದೇ ಡಿಎಫ್ಒ ಹತ್ತಿರ ಮಾತನಾಡುತ್ತೇನೆ ಎಂದು ಪ್ರತ್ತ್ಯುತ್ತರ ನೀಡಿದ ಕಿರಿಯ ಅರಣ್ಯ ಅಧಿಕಾರಿಗೆ ತಿರುಗೇಟು ನೀಡಿದರು.

ಮೆಂದಾರೆ ಹಾಡಿ ಸಮಸ್ಯೆ ಬಗ್ಗೆ ಡಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದಾಗ ಅಧಿಕಾರಿಗಳು ಈಗಾಗಲೇ ಮೆಂದಾರೆ ಗ್ರಾಮದಲ್ಲಿ ಸರ್ವೇ ಕಾರ್ಯ ಪೂರ್ಣಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು. ನೂತನವಾಗಿ ತೆರೆಯಲಾಗಿರುವ ಎಂಎಸ್ಎಲ್ ಮದ್ಯದಂಗಡಿ ತೆರವುಗೊಳಿಸಲು ಸೋಲಿಗ ಮುಖಂಡ ಮಹಾದೇವ ಮನವಿ ಮಾಡಿದರು.

ಭಾಗ್ಯ ಲಕ್ಷ್ಮೀ ಬಾಂಡ್ ವಿತರಣೆ:

ಲೊಕ್ಕನಹಳ್ಳಿ ಗ್ರಾಮದ 15 ಮಂದಿ ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮಿ ಬಾಂಡನ್ನು ಡಿಸಿ ವಿತರಣೆ ಮಾಡಿದರು. ಸಾರ್ವಜನಿಕರು ಸಮಸ್ಯೆಗಳನ್ನು ಬಗೆಹರಿಸಿಕೊಡುವಂತೆ ಡಿಸಿ ಹಾಗೂ ಉಪ ವಿಭಾಗಾಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಕಾಣಲು ಜಿಲ್ಲಾ ಕೇಂದ್ರಕ್ಕೆ ಬಂದು ಅಲೆಯುವುದನ್ನು ತಪ್ಪಿಸಲು ಹೋಬಳಿ ಮಟ್ಟದಲ್ಲಿಯೇ ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟ ಅಧಿಕಾರಿಗಳ ಉಪಸ್ಥಿತಿಯಲ್ಲಿ ಜನಸ್ಪಂದನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಹೆಚ್ಚಾಗಿ ದಾರಿ ಬಿಡಿಸುವುದರ ಬಗ್ಗೆ ಅರಣ್ಯ ಇಲಾಖೆ ಬಗ್ಗೆ ಹೆಚ್ಚಿನ ದೂರುಗಳು ಬಂದಿದ್ದು, ದಾರಿ ಬಿಡಿಸುವ ಸಂಬಂಧ ಸರ್ವೇ ಮಾಡಲು ಸಂಬಂಧಪಟ್ಟವರಿಗೆ ಸೂಚಿಸಲಾಗುವುದು. ಅರಣ್ಯ ಇಲಾಖೆಯವರೇ ಪ್ರತ್ಯೇಕ ಸಭೆ ನಡೆಸಿ ಜನರ ಸಮಸ್ಯೆಗಳನ್ನು ಬಗೆಹರಿಸಲು ಕ್ರಮವಹಿಸಲು ಸೂಚಿಸಲಾಗುವುದು ಎಂದು ಡಿಸಿ ಹೇಳಿದರು.ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ:

ಈಗಾಗಲೇ ಸಾರ್ವಜನಿಕರು ಸಲ್ಲಿಸಿರುವ ಅರ್ಜಿಗಳನ್ನು ತುರ್ತಾಗಿ ಸಂಬಂಧಪಟ್ಟ ಅಧಿಕಾರಿಗಳು ಇನ್ನೂ 20 ದಿನಗಳಲ್ಲಿ ಬಗೆಹರಿಸಲು ಕ್ರಮವಹಿಸಬೇಕು. ಮತ್ತೆ ಜಿಲ್ಲಾ ಕೇಂದ್ರಕ್ಕೆ ಜನರು ಬರಬಾರದು. ಅಧಿಕಾರಿಗಳು ವಿಸಿಟ್ ಮಾಡಿದರೆ ಸಾಲದು ಸಮಸ್ಯೆ ಬಗೆಹರಿಸಲು ಬದ್ಧತೆ ತೋರಬೇಕು ಎಂದರು. ಗೃಹಲಕ್ಷ್ಮೀ ಮತ್ತು ರೇಷನ್ ಕಾರ್ಡ್ ಸಮಸ್ಯೆ ಸ್ಥಳೀಯವಾಗಿ ಮಾಡಲೇಬೇಕು. ಸಮಸ್ಯೆ ಬಗೆಹರಿಸಿ ಅನುಕೂಲ ಫಲಾನುಭವಿಗಳ ಮನೆ ಬಾಗಿಲಿಗೆ ತಲುಪುವಂತೆ ಮಾಡಬೇಕು ಎಂದರು. ಈ ವೇಳೆ ಜಿಪಂ ಸಿಇಒ ಮೋನಾ ರೋಟ್ , ಎಸ್ಪಿ ಕವಿತ, ಉಪ ವಿಭಾಗಾಧಿಕಾರಿ ಮಹೇಶ್, ತಹಸೀಲ್ದಾರ್ ಗುರುಪ್ರಸಾದ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.