ನರಗುಂದ: ವಿದ್ಯಾರ್ಥಿ ಜೀವನ ಅಮೂಲ್ಯವಾಗಿದ್ದು, ಅದನ್ನು ನಿರಂತರ ಅಧ್ಯಯನದ ಮೂಲಕ ಸಾರ್ಥಕ ಪಡಿಸಿಕೊಳ್ಳಬೇಕು. ನಿರಂತರ ಪ್ರಯತ್ನವೇ ಯಶಸ್ಸಿಗೆ ದಾರಿಯಾಗಿದೆ ಎಂದು ಲಯನ್ಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಜಿ.ಟಿ. ಗುಡಿಸಾಗರ ಹೇಳಿದರು.
ನಿವೃತ್ತ ಪ್ರಾಚಾರ್ಯ ಹಾಗೂ ನಿರ್ದೇಶಕ ಸಿ.ಎಸ್.ಸಾಲೂಟಗಿಮಠ ಮಾತನಾಡಿ, ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಗಳಿಸಿದಂತೆ ಮುಂದೆಯೂ ಉತ್ತಮ ಅಂಕ ಗಳಿಸಬೇಕು. ಕಾಲೇಜು ಜೀವನ ನಕಾರಾತ್ಮಕ ಚಿಂತನೆಗಳಿಂದ ಕೂಡದೇ ಧನಾತ್ಮಕ ಚಿಂತನೆಗಳೊಂದಿಗೆ ಸಾಗಬೇಕು. ಎಷ್ಟೇ ಕಷ್ಟ ಬಂದರೂ ಅವುಗಳನ್ನು ಮೆಟ್ಟಿ ನಿಂತು ಗುರಿ ಮುಟ್ಟಬೇಕು. ನಮ್ಮ ಸಂಸ್ಥೆಯಲ್ಲಿ ಕಲಿತವರು ಉನ್ನತ ಹುದ್ದೆಗಳೊಂದಿಗೆ ವಿದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದೇ ರೀತಿ ಉತ್ತಮ ಭವಿಷ್ಯ ಹೊಂದುವಂತೆ ಸಲಹೆ ಮಾಡಿದರು.
ನಿರ್ದೇಶಕ ಸಿದ್ದನಗೌಡ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಸಂಸ್ಕಾರ,ಸಂಸ್ಕೃತಿ ರೂಡಿಸಿಕೊಂಡು ಹೆಚ್ಚಿನ ಅಂಕ ಪಡೆದಿರುವುದು ಹೆಮ್ಮೆ ತಂದಿದೆ. ನಮ್ಮ ಸಂಸ್ಥೆಯ ಕೀರ್ತಿ ಹೆಚ್ಚಿದೆ. ಮುಂದಿನ ವಿದ್ಯಾರ್ಥಿ ಜೀವನದಲ್ಲೂ ಆದರ್ಶ ವಿದ್ಯಾರ್ಥಿಗಳಾಗಿ ರೂಪುಗೊಳ್ಳಬೇಕೆಂದರು.ಸಮಾರಂಭದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ದಾನೇಶ್ವರಿ ರಾವೂತ್, ದ್ವಿತೀಯ ಸ್ಥಾನ ಪಡೆದ ನೇತ್ರಾ ದಳವಾಯಿ, ತೃತೀಯ ಸ್ಥಾನ ಪಡೆದ ನಿರುಪಮಾ ಚಕ್ರಸಾಲಿ, ಶೇ 90ಕ್ಕಿಂತ ಹೆಚ್ಚು ಅಂಕ ಪಡೆದ ಕಾವ್ಯ ಮಡಿವಾಳರ, ಶಿವಕುಮಾರ ಬಸವರಡ್ಡಿ, ಶ್ರಿನಿಕಾ ಗುಡಿಸಾಗರ, ಶಶಾಂಕಯ್ಯ ಹಿರೇಮಠ, ರಾಹುಲ್ ಗೊನ್ನಾಗರ, ಅಮೃತಲಕ್ಷ್ಮಿ ಗುಡಿಸಾಗರ, ವರುಣ ಬಡಿಗೇರ, ಸೌಮ್ಯ ನೇಸರಗಿಯವರನ್ನು ಸನ್ಮಾನ ಮಾಡಿ ಅಭಿನಂದಿಸಲಾಯಿತು.
ನಿರ್ದೇಶಕ ಡಾ. ಪ್ರಭು ನಂದಿ, ಬೋಧಕ/ಬೋಧಕೇತರ ಸಿಬ್ಬಂದಿ ಇದ್ದರು. ಮುಖ್ಯೋಪಾಧ್ಯಾಯ ಡಾ. ವೈ.ಪಿ. ಕಲ್ಲನಗೌಡರ ಸ್ವಾಗತಿಸಿದರು. ಡಾ. ಬಸವರಾಜ ಹಲಕುರ್ಕಿ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.