ಕನ್ನಡಪ್ರಭ ವಾರ್ತೆ ಬೆಳ್ತಂಗಡಿಕಲೆಗೆ ವಯಸ್ಸಿಲ್ಲ, ಕಲೆ ವ್ಯಕ್ತಿತ್ವ ವಿಕಸನಕ್ಕೆ ಕಾರಣವಾಗುತ್ತದೆ. ಬದುಕಿನಲ್ಲಿ ಸುಖ ಬೇಕು. ನಮ್ಮಲ್ಲಿರುವ ರಜೋ,ತಮೋಗುಣ ಗೊತ್ತಾದಾಗ ಬದುಕು ಸುಂದರವಾಗುವುದು ಎಂದು ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಮಹಾಮಂಡಳೇಶ್ವರ 1008 ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಹೇಳಿದ್ದಾರೆ.ಯಕ್ಷಗಾನ ರಂಗದಲ್ಲಿ ಹಿರಿಯ ಕಲಾವಿದ ಕೊಳ್ತಿಗೆ ನಾರಾಯಣ ಗೌಡರ ಯಕ್ಷಗಾನ ಕಲಾಸೇವೆಯ 60ರ ಸವಿನೆನಪಿನಗಾಗಿ ಶನಿವಾರ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ನಡೆದ ‘ಕೊಳ್ತಿಗೆ ಯಕ್ಷಯಾನ-60’ ಗ್ರಂಥ ಬಿಡುಗಡೆ, ಸಮ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಗ್ರಂಥ ಲೋಕಾರ್ಪಣೆಗೊಳಿಸಿದ ಶಾಸಕ ಹರೀಶ್ ಪೂಂಜ ಮಾತನಾಡಿ, ವ್ಯಕ್ತಿ ಶಾಶ್ವತವಲ್ಲ ಕೃತಿ ಶಾಶ್ವತ. ಕೊಳ್ತಿಗೆಯವರ ಆರು ದಶಕಗಳ ಯಕ್ಷ ಬದುಕಿನ ನೋವು ನಲಿವನ್ನು ಗ್ರಂಥದಲ್ಲಿ ಅವರ ಕಲಾ ಸಾಧನೆಯನ್ನು ಶಾಶ್ವತವಾಗಿ ಉಳಿಯುವಂತೆ ದಾಖಲಿಸಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಮಾತನಾಡಿ, ಓರ್ವ ಕಲಾವಿದ ತನ್ನ ಜೀವನವನ್ನು ಯಕ್ಷಗಾನಕ್ಕೆ ಮುಡಿಪಾಗಿಸಿ ಕೊಂಡು ಕಲಾಸೇವೆಯಲ್ಲಿ ಮುಂದುವರಿದು 60 ವರ್ಷ ಪೂರೈಸುವುದು ದೊಡ್ಡ ಸಾಹಸ. ಅವರ ಜೀವನ ಪಯಣ ನಮಗೆಲ್ಲರಿಗೂ ಮಾರ್ಗದರ್ಶಿ ಎಂದರು.ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ. ಸುವರ್ಣ, ಕಲಾ ಪೋಷಕ ಬಿ.ಭುಜಬಲಿ ಧರ್ಮಸ್ಥಳ, ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ ಸಹಿತ ಪ್ರಮುಖ ಗಣ್ಯರು ಉಪಸ್ಥಿತರಿದ್ದರು.ಕೊಳ್ತಿಗೆ ನಾರಾಯಣ ಗೌಡ ಸ್ವಾಗತಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಚೊಕ್ಕಾಡಿ ವಂದಿಸಿದರು. ಉಜಿರೆ ಅಶೋಕ್ ಭಟ್ ಪ್ರಾಸ್ತಾವಿಸಿ, ನಿರೂಪಿಸಿದರು.ಗೌಡರ ಯಾನೆ ಒಕ್ಕಲಿಗರ ಸಂಘ, ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ಉಜಿರೆ ವಲಯ, ಅಕ್ಷಯನಗರ ಗೆಳೆಯರ ಬಳಗ, ನಿಡಿಗಲ್ ಶ್ರೀ ಸತ್ಯನಾರಾಯಣ ಭಜನಾ ಮಂಡಳಿ, ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ, ಬೆಸ್ಟ್ ಫೌಂಡೇಶನ್ ಮತ್ತು ಮುಂಡಾಜೆಯ ಕೀರ್ತನ ಕಲಾ ತಂಡ ಕಾರ್ಯಕ್ರಮ ಸಂಯೋಜಿಸಿತ್ತು.................-ಶಾಸಕ ಹರೀಶ್ ಪೂಂಜ ಅವರು ಬೆಳ್ತಂಗಡಿ ತಾಲೂಕಿನ ಎಲ್ಲ ಶಾಲಾ, ಕಾಲೇಜು ಗ್ರಂಥಾಲಯಗಳಿಗೆ ‘ಕೊಳ್ತಿಗೆ ಯಕ್ಷ ಯಾನ-60’ ಗ್ರಂಥವನ್ನು ಕೊಡುಗೆಯಾಗಿ ನೀಡುವುದಾಗಿ ಘೋಷಿಸಿದರು.
-ಹೇಮಸ್ವಾತಿ ಕುರಿಯಾಜೆ ಮತ್ತು ಸಿಂಚನಾ ಮೂಡುಕೋಡಿ ಅವರಿಂದ ಯಕ್ಷಗಾನಯಾನ ನಡೆಯಿತು.-ಉಜಿರೆ ಮಂಜುಶ್ರೀ ಪ್ರಿಂಟರ್ಸ್ ಮ್ಯಾನೇಜರ್ ಶೇಖರ್ ಟಿ. ಮತ್ತು ಶ್ರೀ ಶಾಂತಾರಾಮ ಜುವೆಲ್ಲರ್ಸ್ ಮಾಲಕ ಆನಂದ ಆಚಾರ್ಯ ಅವರನ್ನು ಸಮ್ಮಾನಿಸಲಾಯಿತು.
-ಸಂಜೆ ಕುರಿಯ ವಿಠಲ ಶಾಸ್ತ್ರೀ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಸ್ತುತಿಯಲ್ಲಿ ಜಿಲ್ಲೆಯ ಹಿರಿಯ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ ‘ಭೀಷ್ಮ ಪರ್ವ’ ಪ್ರಸಂಗ ಪ್ರದರ್ಶನ.