ಔಷಧ ಸಿಂಪಡಿಸಿದರೂ ಹತೋಟಿಗೆ ಬಾರದ ರೋಗ | ರೈತ ಹೈರಾಣ
ತಾಲೂಕಿನ ಯರೇಭಾಗದಲ್ಲಿ ಹುಲೂಸಾಗಿ ಬೆಳೆದಿರುವ ಹೆಸರು ಬೆಳೆಗೆ ಅತ್ಯಧಿಕ ಕೀಟ ಬಾಧೆ ತಗುಲಿದೆ.
ಹೆಸರು ಬೆಳೆ ಕಾಯಿ ಕಟ್ಟುವ ಸಮಯದಲ್ಲಿ ಕಾಯಿಗೆ ಕೀಟ ಬಿದ್ದಿದೆ. ಕೀಟಬಾಧೆ ಕಂಡು ರೈತರು ಒಂದಲ್ಲ ಎರಡಲ್ಲ ಬರೋಬ್ಬರಿ ಮೂರ್ನಾಲ್ಕು ಸಲ ಔಷಧ ಸಿಂಪಡಣೆ ಮಾಡಿದ್ದಾರೆ. ಆದರೂ ಸಹ ಕೀಟಬಾಧೆ ತಗ್ಗಿಲ್ಲ. ಅಪಾರ ಪ್ರಮಾಣದಲ್ಲಿ ಖರ್ಚು ಮಾಡಿಕೊಂಡು ಹೆಸರು ಬೆಳೆ ಬೆಳೆದಿದ್ದು, ಅಲ್ಪ ಸ್ವಲ್ಪ ಮಳೆ ಮಾತ್ರ ಆಗಿದೆ. ತೇವಾಂಶ ಕೊರತೆ ಮಧ್ಯೆಯೂ ಬೆಳೆದು ನಾಲ್ಕಾರು ಕಾಯಿ ಕಟ್ಟಿರುವ ಹೆಸರು ಬೆಳೆಗೆ ಸದ್ಯ ಕೀಟಬಾಧೆ ಅತ್ಯಧಿಕವಾಗಿದೆ.ಕಾಯಿ ಕೊರಕ:ಹೆಸರಿಗೆ ತಗುಲಿದ ಕೀಟ ಕಾಯಿಯನ್ನು ತಿನ್ನುತ್ತದೆ. ಇದರಿಂದ ಕಾಯಿ ಕಾಳು ಕಟ್ಟಲ್ಲ. ಇನ್ನೂ ಕೆಲವು ಕಡೆ ಕಾಯಿ ಕಟ್ಟಿದ ಹೆಸರು ಕಾಯಿಯನ್ನು ಕೀಟ ಸಂಪೂರ್ಣ ತಿಂದು ಮುಗಿಸಿದೆ.
ಹೆಸರು ಬೆಳೆ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದೇವು. ಆದರೆ ಹೆಸರು ಬೆಳೆಗೆ ಕೀಟ ತಾಗಿ ಬೆಳೆ ಬಾರದಂತಾಗಿದೆ. ಕೀಟಗಳಿಗೆ ಹಲವಾರು ಬಾರೀ ಔಷಧ ಸಿಂಪಡಿಸಿದರೂ ಸಹ ಕೀಟಗಳ ಬಾಧೆ ಹತೋಟಿಗೆ ಬರದಂತಾಗಿದೆ ಎನ್ನುತ್ತಾರೆ ಯರೇಹಂಚಿನಾಳ ಗ್ರಾಮದ ರೈತ ಅಂದಪ್ಪ ಕೋಳೂರು.